ವೈದಿಕ ಸಾಹಿತ್ಯದಲ್ಲಿ ವ್ಯಕ್ತಿಯು ತಾನು ಪ್ರಭುವಿನೊಡನೆ ಒಂದಾಗಿದ್ದೇನೆ ಎಂದು ಆಲೋಚಿಸಲು ಕೆಲವು ಸಲ ಸೂಚನೆಗಳನ್ನು ನೀಡಲಾಗಿದೆಯಾದರೂ, ವ್ಯಕ್ತಿಯು ಎಲ್ಲ ಅಂಶಗಳಲ್ಲೂ ತಾನು ದೇವರೇ ಆಗಿಬಿಟ್ಟಿದ್ದಾನೆ ಎಂದು ಅದರ ಅರ್ಥವಲ್ಲ. ಅನೇಕ ವಿಷಯಗಳಲ್ಲಿ ಜೀವಿಯು ದೇವರಲ್ಲಿ ಒಂದಾಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅಂತಿಮವಾಗಿ ಜೀವಿಯು ಪ್ರಭುವಿನ ದಾಸನೇ. ಪ್ರಭುವಿನ ಇಂದ್ರಿಯಗಳನ್ನು ತೃಪ್ತಿಪಡಿಸುವುದೇ ಅವನಿಗೆ ವಿಧಿಸಿರುವ ಮೂಲಭೂತ ಕೆಲಸ.
– ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಶ್ರೀಮದ್ ಭಾಗವತಮ್: 2.9.3 ಭಾವಾರ್ಥ
* * * *
ದೇವೋತ್ತಮ ಪರಮ ಪುರುಷನ ಧಾಮಕ್ಕಿಂತ ಶ್ರೇಷ್ಠವಾದದ್ದು ಬೇರೆ ಯಾವುದೂ ಇಲ್ಲ. ಆ ಧಾಮವೇ ಅಂತಿಮ ಗುರಿ.
– ಕಠ ಉಪನಿಷದ್: 1.3.11
* * * *
ನಾನೇ ಗುರಿ, ಪೋಷಕ, ಯಜಮಾನ, ಸಾಕ್ಷಿ, ನಿವಾಸ, ಆಶ್ರಯ ಮತ್ತು ನಾನೇ ಅತ್ಯಂತ ಆಪ್ತ ಗೆಳೆಯ. ನಾನೇ ಸೃಷ್ಟಿ ಮತ್ತು ಪ್ರಳಯ. ನಾನೇ ಎಲ್ಲದಕ್ಕೂ ಆಧಾರ, ವಿಶ್ರಾಂತಿ ತಾಣ ಮತ್ತು ನಾನೇ ಶಾಶ್ವತವಾದ ಬೀಜ.
– ಶ್ರೀ ಕೃಷ್ಣ, ಭಗವದ್ಗೀತಾ : 9.18
* * * *
ಓ ಕೃಷ್ಣ, ಮಧುಪತಿಯೇ, ಗಂಗಾನದಿಯು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸಮುದ್ರದ ಕಡೆಗೆ ಹರಿಯುತ್ತಿರುವಂತೆ, ನನ್ನ ಆಕರ್ಷಣೆಯು ಬೇರೆ ಯಾರಿಂದಲೂ ವಿಚಲನಗೊಳ್ಳದೆ ನಿನ್ನ ಕಡೆಗೆ ನಿರಂತರವಾಗಿ ಹರಿಯುತ್ತಿರಲಿ.
– ರಾಣಿ ಕುಂತಿ, ಶ್ರೀಮದ್ ಭಾಗವತಮ್: 1.8.42
* * * *
ಅಷ್ಟಾಂಗ ಯೋಗ ಸಿದ್ಧಿಗಳಿಗಾಗಿ ನಾನು ದೇವೋತ್ತಮ ಪರಮ ಪುರುಷನನ್ನು ಪ್ರಾರ್ಥಿಸುವುದಿಲ್ಲ, ಅಥವಾ ಪುನರಪಿ ಜನನ ಮರಣಗಳಿಂದ ವಿಮುಕ್ತಿಯನ್ನು ಪಡೆಯುವುದಕ್ಕಾಗಿಯೂ ಪ್ರಾರ್ಥಿಸುವುದಿಲ್ಲ. ಎಲ್ಲ ಜೀವಿಗಳೊಡನೆ ನಾನೂ ಇರಲು ಬಯಸುತ್ತೇನೆ ಮತ್ತು ಅವರ ಪರವಾಗಿ ಎಲ್ಲ ಸಂಕಟಗಳನ್ನೂ ಅನುಭವಿಸುತ್ತಾ ಯಾತನೆಯಿಂದ ಅವರು ಮುಕ್ತರಾಗಲಿ ಎಂದು ಮಾತ್ರ ಬಯಸುತ್ತೇನೆ.
– ಮಹಾರಾಜ ರಂತಿದೇವ, ಶ್ರೀಮದ್ ಭಾಗವತಮ್: 9.21.12
* * * *
ಶ್ರೀಕೃಷ್ಣನ ಪಾದಕಮಲಗಳ ಸ್ಮರಣೆಯು ಎಲ್ಲ ಅಮಂಗಳಗಳನ್ನೂ ನಾಶಮಾಡುತ್ತದೆ ಮತ್ತು ಅತ್ಯುನ್ನತವಾದ ಸೌಭಾಗ್ಯವನ್ನು ನೀಡುತ್ತದೆ. ಅದು ಹೃದಯವನ್ನು ಪರಿಶುದ್ಧಗೊಳಿಸುತ್ತದೆ ಮತ್ತು ಸಾಕ್ಷಾತ್ಕಾರ ಹಾಗೂ ವೈರಾಗ್ಯಗಳಿಂದ ಸಂಪನ್ನವಾದ ಜ್ಞಾನವನ್ನು ಒಡಗೂಡಿ ಪರಮಾತ್ಮನಲ್ಲಿ ಭಕ್ತಿಯನ್ನು ಅನುಗ್ರಹಿಸುತ್ತದೆ.
– ಶ್ರೀಲ ಸೂತ ಗೋಸ್ವಾಮೀ, ಶ್ರೀಮದ್ ಭಾಗವತಮ್ : 12.12.55
* * * *
ಪ್ರಭುವನ್ನು ಬಿಟ್ಟು ಬೇರೇನನ್ನೂ ಚಿಂತಿಸದ ಪ್ರಭುವಿನ ದಾಸರಿಗೆ ಅವನ ಅದ್ಭುತವಾದ ವಿವಿಧ ಲೀಲೆಗಳೇ ನಿಜ ಜೀವನವಾಗಲಿ. ಅಂತಹ ಭಕ್ತರಿಗೆ ಆ ಲೀಲೆಗಳು ಸದಾ ದೇವರನ್ನು ಕುರಿತ ಪ್ರೇಮದ ಆನಂದವನ್ನು ವರ್ಧಿಸುತ್ತವೆ.
– ಶ್ರೀ ಹನುಮಾನ್ ಜೀ, ಬೃಹದ್ ಭಾಗವತಾಮೃತ: 1.4.99
* * * *
ಮುಕ್ತಿಯನ್ನು ಬಯಸುವ ಎಲ್ಲ ದೇವತೆಗಳು ಮತ್ತು ಎಲ್ಲ ಲೋಕೋತ್ತರ ದಾರ್ಶನಿಕರು ಪರಮ ಪ್ರಭುವಿಗೆ ತಲೆಬಾಗುತ್ತಾರೆ.
– ನೃಸಿಂಹ ತಾಪನೀ ಉಪನಿಷದ್, (ಪೂರ್ವಕಾಂಡ: 2.4)
* * * *