ಸುಂದರವಾದರೂ ಸೂರ್ಯಾಸ್ತವು ನಮ್ಮ ದಿನಗಳು ಕಳೆದು ಹೋಗುತ್ತಿರುವುದನ್ನು ಮತ್ತು ನಮ್ಮ ಅಂತಿಮ ಮುಖಾಬಿಲೆಯತ್ತ ದಾಪುಗಾಲು ಹಾಕುವುದನ್ನು ಪ್ರತಿನಿಧಿಸುತ್ತದೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು
ಜೂನ್ 12, 1972ರಂದು ಲಾಸ್ ಏಂಜಲೀಸ್ನಲ್ಲಿ ಮಾಡಿದ ಉಪನ್ಯಾಸ
ಆಯುರ್ಹರತಿ ವೈ ಪುಂಸಾಮುದ್ಯನ್ನಸ್ತಂ ಚ ಯನ್ನಸೌ ।
ತಸ್ಯರ್ಥೇ ಯತ್ಕ್ಷಣೋ ನೀತ ಉತ್ತಮಶ್ಲೋಕವಾರ್ತಯಾ ॥
ಸೂರ್ಯನು, ಉದಯಿಸುತ್ತ ಮತ್ತು ಅಸ್ತಮಿಸುತ್ತ ಸರ್ವಮಂಗಳನಾದ ದೇವೋತ್ತಮ ಪುರುಷನ ವಿಷಯದ ಚರ್ಚೆಯಲ್ಲಿ ಕಾಲವನ್ನು ವಿನಿಯೋಗಿಸುವವನನ್ನು ಬಿಟ್ಟು ಉಳಿದ ಎಲ್ಲರ ಆಯುಷ್ಯವನ್ನೂ ಕುಗ್ಗಿಸುತ್ತಾನೆ.

ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಬದುಕನ್ನು ಕಡಮೆ ಮಾಡುತ್ತವೆ. ಇದು ಒಂದು ಒಳ್ಳೆಯ ಉದಾಹರಣೆ. ನಿಮ್ಮ ಇಡೀ ಬದುಕಿನ ಜೀವಿತಾವಧಿಯ ಒಂದಷ್ಟು ಭಾಗವನ್ನು ತೆಗೆದುಕೊಳ್ಳುವುದು ಸೂರ್ಯನ ವ್ಯವಹಾರ. ಆದರೆ ಅದು ಒಬ್ಬ ಭಕ್ತನ ಜೀವನವನ್ನು ತೆಗೆದುಕೊಳ್ಳುವುದು ಸಾಧ್ಯವಿಲ್ಲ, ಏಕೆಂದರೆ ಭಕ್ತನು ಬದುಕುತ್ತಾನೆ. ಕೃಷ್ಣ ಪ್ರಜ್ಞೆ ಆಂದೋಲನ ಇರುವುದೇ ಜೀವಿಗೆ ಶಾಶ್ವತ ಜೀವಿತಾವಧಿಯನ್ನು ನೀಡಲು.
ಒಬ್ಬ ಮನುಷ್ಯನಿಗೆ ರೋಗ ಬಂದಾಗ ವೈದ್ಯರು ಅವನನ್ನು ಸೋಂಕಿನಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾರೆ. ನಮ್ಮ ಲೌಕಿಕ ದೇಹವು ಒಂದು ಸೋಂಕಿನಂತೆ. ವಾಸ್ತವವಾಗಿ, ನಾವು, ಆಧ್ಯಾತ್ಮಿಕ ಆತ್ಮಗಳಿಗೆ ಸಾವು ಇಲ್ಲ. ಸಾವು ಈ ಸೋಂಕಿನಿಂದ, ದೇಹದಿಂದ. ಈ ಸೋಂಕನ್ನು `ಅಶುದ್ಧ, ಮಲಿನ’ ಎನ್ನುತ್ತಾರೆ. ವಾಸ್ತವವಾಗಿ ದೇಹವು ಅಶುದ್ಧ. `ಮಣ್ಣಿನಿಂದ ಬಂದಿರಿ, ಮಣ್ಣಿಗೇ ಹಿಂತಿರುಗಬೇಕು’ ಅದು ವಾಸ್ತವಾಂಶ. ಏಕೆಂದರೆ, ಆತ್ಮನಾದ ನಾನು ಈ ದೇಹವನ್ನು ತ್ಯಜಿಸಿದ ಕೂಡಲೇ ದೇಹವು ವಿಭಜನೆಗೊಳ್ಳುತ್ತದೆ, ಕೊಳೆತು ಹೋಗುತ್ತದೆ; ಅನಂತರ ಕೆಲವು ದಿನಗಳಲ್ಲಿ ಅದು ಮಣ್ಣಾಗುತ್ತದೆ. ಹೀಗಾಗಿ ಅದು ಮಣ್ಣು. ನಾವು ನಮ್ಮ ನಿಜವಾದ ವ್ಯಕ್ತಿತ್ವದಿಂದ, ಆಧ್ಯಾತ್ಮಿಕ ಬದುಕಿನಿಂದ ಈ ಕೊಳೆಯನ್ನು ಶುದ್ಧಗೊಳಿಸಬೇಕು. ಈ ಶುದ್ಧೀಕರಣ ಕಾರ್ಯವನ್ನು ತುಂಬ ಚೆನ್ನಾಗಿ ಮಾಡಬಹುದು – ಉತ್ತಮಶ್ಲೋಕ ಅಥವಾ ಕೃಷ್ಣನ ಸಂದೇಶವನ್ನು ಕೇಳುವ ಮೂಲಕ. ನೀವು ಯಾವುದೋ ಯಂತ್ರದಿಂದ ಆತ್ಮವನ್ನು ಗೀಚಿಹಾಕಬೇಕೆಂದೇನೂ ಅಲ್ಲ. ಕೃಷ್ಣ-ಕಥೆ ಎಂದು ಕರೆಯುವ ಉತ್ತಮಶ್ಲೋಕನ ಸಂದೇಶಕ್ಕೆ ನೀವು ಕಿವಿಗೊಟ್ಟರೆ ಸಾಕು, ಅದು ಸ್ವಯಂ ಶುದ್ಧಿಗೊಳ್ಳುತ್ತದೆ.
ಕೃಷ್ಣ ಕಥೆ ಎಂದರೆ ಕೃಷ್ಣನ ಮಾತು. ಕಥಾ ಎಂದರೆ ಮಾತು, ಪದಗಳು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ವೈಯಕ್ತಿಕವಾಗಿಯೇ ನಮಗೆ ಬೋಧಿಸಿದ್ದಾನೆ. ನಾವು ಭಗವದ್ಗೀತೆಯನ್ನು ಓದಿದರೆ ಸಾಕು, ಸೂರ್ಯ ನಮ್ಮ ಬದುಕಿನ ಅವಧಿಯನ್ನು ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ.

ಏನು ಸಾಕ್ಷಿ? ಭಗವದ್ಗೀತೆಯಲ್ಲಿಯೇ ನಾವು ಸಾಬೀತು ಪಡಿಸುವ ಅಂಶ ಕಾಣಬಹುದು. ಅದರಲ್ಲಿ ಕೃಷ್ಣ ಹೇಳುತ್ತಾನೆ, ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ – “ನನ್ನ ಜನ್ಮ ಮತ್ತು ಆವಿರ್ಭಾವವನ್ನು ಯಾರು ಅರ್ಥ ಮಾಡಿಕೊಳ್ಳುವರೋ ಅವರು ಮತ್ತೆ ಜನಿಸುವುದಿಲ್ಲ.” ಪರಮಾತ್ಮನು ಜನ್ಮ ತಾಳುವುದಿಲ್ಲ. ಅವನು ಅಜ, `ಎಂದೂ ಜನ್ಮ ತಾಳದವನು – ಸದಾ ಅಸ್ತಿತ್ವದಲ್ಲಿ ಇರುವವನು’. ಆದರೂ ಕೃಷ್ಣ ಜನ್ಮ ತಾಳುವುದನ್ನು ನಾವು ನೋಡುತ್ತೇವೆ. ನಾವು ಕೃಷ್ಣನ ಜನ್ಮ ದಿನ ಆಚರಿಸುತ್ತೇವೆ. ಇದು ವಿಸ್ಮಯ, ನಿಗೂಢ. ಕೃಷ್ಣ ಜನ್ಮ ತಾಳುವುದಿಲ್ಲ, ಆದರೂ ನಾವು ಅವನ ಜನ್ಮ ದಿನ, ಜನ್ಮಾಷ್ಟಮಿಯನ್ನು ಆಚರಿಸುತ್ತೇವೆ. ಆದುದರಿಂದ ಇದನ್ನು ಸತ್ಯಾಂಶದಿಂದ ಅರ್ಥ ಮಾಡಿಕೊಳ್ಳಬೇಕು – ತತ್ತ್ವತಃ.
ವೇದಗಳು ಹೇಳುತ್ತವೆ, ನ ತಸ್ಯ ಕಾರ್ಯಂ ಕರಣಂ ಚ ವಿದ್ಯತೇ “ದೇವೋತ್ತಮ ಪರಮ ಪುರುಷನಿಗೆ ಮಾಡಲು ಏನೂ ಇಲ್ಲ.” ಅವನು ಏನನ್ನಾದರೂ ಯಾಕೆ ಮಾಡಬೇಕು? ಆದರೂ ಅವನು ತನ್ನ ಮಾವನ ಸೆರೆಮನೆಯಲ್ಲಿ ಆವಿರ್ಭವಿಸಿದಾಗಿನಿಂದ ತನ್ನ ಧಾಮಕ್ಕೆ ಮರಳುವವರೆಗೂ ಸದಾ ಚಟುವಟಿಕೆಯಲ್ಲಿ ಇದ್ದುದನ್ನು ನಾವು ನೋಡುತ್ತೇವೆ, ಮುಖ್ಯವಾಗಿ ರಾಕ್ಷಸರನ್ನು ವಧಿಸುವುದರಲ್ಲಿ. ಆದರೆ ದೇವೋತ್ತಮ ಪರಮ ಪುರುಷನು ಪ್ರತ್ಯಕ್ಷನಾಗದೆಯೂ ಅಸುರರನ್ನು ಕೊಲ್ಲಬಹುದು. ಭೂ ಕಂಪನವಾದರೆ, ಲಕ್ಷಾಂತರ ರಾಕ್ಷಸರನ್ನು ಸಾವಿಗೀಡು ಮಾಡಬಹುದು. ಅದೇನೂ ಅಂತಹ ಕಷ್ಟದ ಕೆಲಸವಲ್ಲ. ಪೆಸಿಫಿಕ್ ಸಾಗರವು ಈ ನಗರದಲ್ಲಿ ಭಾರೀ ಪ್ರವಾಹ ಉಂಟುಮಾಡಿದರೆ, ಲಕ್ಷಾಂತರ ಜನರು ಕೊಚ್ಚಿಹೋಗಬಹುದು. ಯುದ್ಧವಾದರೆ, ಸಾವಿರಾರು ಜನರು ಕೊಲ್ಲಲ್ಪಡಬಹುದು, ಸಾಂಕ್ರಾಮಿಕ ರೋಗ ಉಂಟಾದರೆ ನೂರಾರು ಜನರು ಸಾಯಬಹುದು. ಆದುದರಿಂದ ಶ್ರೀ ಕೃಷ್ಣನು ರಾಕ್ಷಸರನ್ನು ಕೊಲ್ಲಲು ಬರುವುದಿಲ್ಲ. ಬದಲಾಗಿ, ಕೃಷ್ಣನ ಅನೇಕ ಪ್ರತಿನಿಧಿಗಳು, ಏಜಂಟರು, ಯಾವುದೇ ಕಷ್ಟವಿಲ್ಲದೆ ರಾಕ್ಷಸರನ್ನು ವಧಿಸಬಹುದು.

ಆದರೆ ಅವನು ಬರುತ್ತಾನೆ. ಶ್ರೀ ನೃಸಿಂಹನು ರಾಕ್ಷಸ ಹಿರಣ್ಯಕಶಿಪುವನ್ನು ಕೊಲ್ಲಲು ಅವತರಿಸಲಿಲ್ಲ. ಅವನನ್ನು ಬೇರೆ ರೀತಿಯಲ್ಲಿಯೂ ಕೊಲ್ಲಬಹುದಿತ್ತು. ಆದರೆ ಪರಮಾತ್ಮನು ಪ್ರಹ್ಲಾದನಿಗಾಗಿ ಆವಿರ್ಭವಿಸಿದ. ಪ್ರಹ್ಲಾದ ಮಹಾರಾಜನ ಮೇಲೆ ವಿಪರೀತ ದೌರ್ಜನ್ಯವಾಗುತ್ತಿತ್ತು. ಹಿಂಸೆ ಹೆಚ್ಚಾಗಿತ್ತು. ಪರಮಾತ್ಮನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. `ನಿನ್ನನ್ನು ಹಿಂಸಿಸುವವರನ್ನು ನಿನ್ನ ಮುಂದೆಯೇ ಕೊಲ್ಲುವೆ’ ಎಂಬುದನ್ನು ತನ್ನ ಭಕ್ತನಿಗೆ ತೋರಿಸುವುದು ಅವನ ಉದ್ದೇಶವಾಗಿತ್ತು. ಹಿರಣ್ಯಕಶಿಪುವನ್ನು ಕೊಲ್ಲಲು ಅವನು ಆವಿರ್ಭವಿಸಲಿಲ್ಲ. ಪ್ರಹ್ಲಾದ ಮಹಾರಾಜನಿಗೆ ಉತ್ಸಾಹ ನೀಡಲು ಅವನು ಪ್ರತ್ಯಕ್ಷನಾದ. ಶ್ರೀಕೃಷ್ಣ ಹೇಳುವಂತೆ, ಕೌಂತೇಯ ಪ್ರತಿಜಾನೀ ಹೀ ನ ಮೇ ಭಕ್ತಃ ಪ್ರಣಶ್ಯತಿ. ಅವನು ಅರ್ಜುನನಿಗೆ ಹೇಳುತ್ತಾನೆ, `ನನ್ನ ಪ್ರೀತಿಯ ಅರ್ಜುನ, ನನ್ನ ಭಕ್ತ ಎಂದಿಗೂ ಪರಾಭವಗೊಳ್ಳುವುದಿಲ್ಲವೆಂದು ಘೋಷಿಸು.’
ಪ್ರತಿಯೊಂದು ವೈದಿಕ ಸಾಹಿತ್ಯವೂ ಕೃಷ್ಣ ಕಥೆಯೇ. ಆದರೆ ಎರಡು ಗ್ರಂಥಗಳು ವಿಶೇಷವಾಗಿ ಕೃಷ್ಣ ಕಥೆ: ಭಗವದ್ಗೀತೆ – ಕೃಷ್ಣ ನೇರವಾಗಿ ಮಾತನಾಡುತ್ತಿರುವುದು; ಶ್ರೀಮದ್ ಭಾಗವತಂ – ಕೃಷ್ಣನ ಬಗೆಗೆ ನೇರವಾಗಿ ಮಾತನಾಡಿರುವುದು.

ಇಲ್ಲಿ ಹೇಳಿರುವುದು ಉತ್ತಮಶ್ಲೋಕ ವಾರ್ತಯಾ. ವಾರ್ತ ಎಂದರೆ ಸಂದೇಶ, ಮಾತು, ಪದಗಳು. ನಾವು ಕೃಷ್ಣನನ್ನು ಕುರಿತಂತೆ ಓದುತ್ತ ಮತ್ತು ಸಂವಾದದಲ್ಲಿ ತೊಡಗುತ್ತ ನಮ್ಮ ವೇಳೆಯನ್ನು ಕಳೆದರೆ, ಸೂರ್ಯನು ನಮ್ಮ ಬದುಕನ್ನು ತೆಗೆದುಕೊಂಡು ಹೋಗಲಾರ. ಇದೇ ರಹಸ್ಯ. ನಿಮಗೆ ಅಮರರಾಗಬೇಕೆನಿಸಿದರೆ, ಸದಾ ಕೃಷ್ಣ ಕಥೆಯಲ್ಲಿ ತೊಡಗಿಸಿಕೊಂಡಿರಿ. ಸದಾ, ಇಪ್ಪತ್ತನಾಲ್ಕು ತಾಸೂ ಕೃಷ್ಣನ ಬಗೆಗೆ ಚಿಂತಿಸಿ. ಇದು ಕೃಷ್ಣ ಪ್ರಜ್ಞೆ.
ಪ್ರತಿಯೊಬ್ಬರೂ ಸಾಯುತ್ತಿದ್ದಾರೆ, ಆದರೆ ಕೃಷ್ಣ ಕಥೆ, ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡಿರುವವರು ಮತ್ತು ಕೃಷ್ಣನ ವ್ಯವಹಾರದಲ್ಲಿ ಮಗ್ನರಾಗಿರುವವರು ಸಾಯುವುದಿಲ್ಲ. ಅವರು ಬದುಕಿರುತ್ತಾರೆ. ಹೇಗೆ? ಸಾಮಾನ್ಯ ಮನುಷ್ಯನ ಜೀವಿತಾವಧಿಯನ್ನು ಪ್ರತಿ ದಿನ ಸೂರ್ಯೋದಯ ಮತ್ತು ಸೂರ್ಯಾಸ್ತದಿಂದ ತೆಗೆದುಕೊಂಡು ಹೋಗಲಾಗುತ್ತಿದೆ. ಒಬ್ಬ ಮನುಷ್ಯ ಐವತ್ತು ವರ್ಷದವನಾದರೆ, ಸೂರ್ಯನು ಐವತ್ತು ವರ್ಷಗಳನ್ನು ಈಗಾಗಲೇ ತೆಗೆದುಕೊಂಡು ಹೋಗಿದ್ದಾನೆಂದು ಅರ್ಥ. ಅದು ಮತ್ತೆ ವಾಪಸು ಬರುವುದಿಲ್ಲ.
`ಆದರೆ ಭಕ್ತರ ವಿಷಯವೇನು? ಅವನದೂ ಹಾಗೆಯೇ. ಅವನ ಜೀವನವನ್ನೂ ತೆಗೆದುಕೊಂಡು ಹೋಗಲಾಗುತ್ತಿದೆ.’

ಇಲ್ಲ. ಅವನ ಬದುಕನ್ನು ತೆಗೆದುಕೊಂಡು ಹೋಗುತ್ತಿಲ್ಲ, ಏಕೆಂದರೆ ಅವನು ಜೀವಿಸುವನು. ಮೇಲ್ನೋಟಕ್ಕೆ ಭಕ್ತನ ದೇಹವನ್ನೂ ತೆಗೆದುಕೊಂಡು ಹೋಗುವುದನ್ನು ನಾವು ಕಾಣುತ್ತೇವೆ. ಆದರೆ ಅದು ನಿಜವಾದ ದೇಹವಲ್ಲ. ನಿಜವಾದ ದೇಹವು ಆಧ್ಯಾತ್ಮಿಕ ದೇಹ. ಕೃಷ್ಣ ಹೇಳುತ್ತಾನೆ, ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ; “ಈ ದೇಹವನ್ನು ತ್ಯಜಿಸಿದ ಮೇಲೆ ಅವನು ಮತ್ತೆ ಜನಿಸುವುದಿಲ್ಲ. ಅವನು ನನ್ನ ಬಳಿಗೆ ಬರುತ್ತಾನೆ.” ಹಾಗಾದರೆ ಅವನ ಬಳಿಗೆ ಬರುವವರಾರು? ಸ್ವಯಂ ಆತ್ಮ.
ಲೌಕಿಕ ವ್ಯಕ್ತಿಗಳಿಗೆ, ವಿಜ್ಞಾನಿ ತತ್ತ್ವಜ್ಞಾನಿಗಳೆನಿಸಿಕೊಂಡವರು – ದೇಹವು ಆತ್ಮದ ಹೊದಿಕೆ ಎಂದು ಇವರಿಗೆ ತಿಳಿದಿಲ್ಲ. ನಿಜವಾದ ಆತ್ಮ, ನಿಜವಾದ ವ್ಯಕ್ತಿ ಸದಾ ಕಾಲಕ್ಕೆ ಕೃಷ್ಣನಲ್ಲಿಗೆ ಹೋಗುತ್ತಾರೆ. ಭಕ್ತರಾದವರು, ಕೃಷ್ಣ ಪ್ರಜ್ಞೆಯಲ್ಲಿ ಇರುವವರು ಈ ಸೋಂಕಿನ ದೇಹವನ್ನು ತ್ಯಜಿಸಿ ತಮ್ಮ ಮೂಲ, ಆಧ್ಯಾತ್ಮಿಕ ದೇಹವನ್ನು ಪಡೆಯುತ್ತಾರೆ.
ಆದುದರಿಂದ, ನಿಮಗೆ ಆಧ್ಯಾತ್ಮಿಕ ದೇಹ ದೊರೆತ ಕೂಡಲೇ ಅದನ್ನು ತೆಗೆದುಕೊಂಡು ಹೋಗಲು ಸೂರ್ಯನಿಗೆ ಯಾವುದೇ ಅಧಿಕಾರವಿರುವುದಿಲ್ಲ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: `ಅದನ್ನು ಬೆಂಕಿಯು ಸುಡಲಾರದು, ಅಸ್ತ್ರಗಳು ಅದನ್ನು ಕೊಲ್ಲಲಾರವು, ನೀರು ಅದನ್ನು ತೇವಗೊಳಿಸಲಾರದು….’ ಯಾವುದೇ ಲೌಕಿಕ ವಸ್ತುವಿನಿಂದ ಆತ್ಮವನ್ನು ನಾಶಮಾಡಲಾಗದು. ಈ ದೇಹವು ವಸ್ತು. ಅದನ್ನು ಚೂರುಚೂರು ಮಾಡಬಹುದು. ಆದರೆ ಆಧ್ಯಾತ್ಮಿಕ ಆತ್ಮವನ್ನು ಸಾಧ್ಯವಿಲ್ಲ. ದೇಹವನ್ನು ಸುಟ್ಟು ಬೂದಿ ಮಾಡಬಹುದು, ಆದರೆ ಆಧ್ಯಾತ್ಮಿಕ ಆತ್ಮವನ್ನು ಹೀಗೆ ಮಾಡಲು ಸಾಧ್ಯವಿಲ್ಲ.

ಸೂರ್ಯನಲ್ಲಿ ಜೀವವಿಲ್ಲ ಎಂದು ಆಧುನಿಕ ವಿಜ್ಞಾನಿಗಳು ಹೇಳುತ್ತಾರೆ. ಆದರೆ ಅದು ವಾಸ್ತವ ಅಲ್ಲ. ಸೂರ್ಯ ಏನು? ಅದು ಧಗಧಗಿಸುವ ಗ್ರಹ, ಅಷ್ಟೆ. ಆದರೆ ಆಧ್ಯಾತ್ಮಿಕ ಆತ್ಮವು ಬೆಂಕಿಯಲ್ಲಿ ಬದುಕಬಹುದು ಮತ್ತು ಅದಕ್ಕೆ ಸೂರ್ಯನಲ್ಲಿ ಬೆಂಕಿಯಂತಹ, ಜ್ವಲಿಸುವ ದೇಹ ಸಿಗುತ್ತದೆ. ಇಲ್ಲಿ, ಈ ಗ್ರಹದಲ್ಲಿ, ಭೂಮಿಯ ಮೇಲೆ ನಮಗೆ ಈ ಮಣ್ಣಿನ ದೇಹಗಳಿವೆ. ಅವು ತುಂಬ ಸುಂದರವಾಗಿರಬಹುದು, ಆದರೆ ಅವು ಮಣ್ಣಿನವು. ಯಾರೋ ನನಗೆ ಪ್ಲಾಸ್ಟಿಕ್ ಮರಗಳನ್ನು ತೋರಿಸಿದರು, ನಿಜವಾದ ಮರಗಳಂತೆ ಕಾಣುತ್ತಿದ್ದವು. ಆದರೆ ಅವು ಮರಗಳಲ್ಲ. ಅದೇ ರೀತಿ, ಈ ದೇಹವು ಪ್ಲಾಸ್ಟಿಕ್ ದೇಹದಂತೆ. ಅದಕ್ಕೆ ಬೆಲೆ ಇಲ್ಲ.
ಕೃಷ್ಣನು ದೇಹ ತ್ಯಜಿಸುವ ಬಗೆಗೆ ಹೇಳುತ್ತಾನೆ, ಆದರೆ ದೇಹವು ಪ್ಲಾಸ್ಟಿಕ್ ದೇಹದಂತೆ. `ದೇಹ ತ್ಯಜಿಸುವುದೆಂದರೆ’ ಹತ್ತಿಯ ಶರ್ಟು ಅಥವಾ ಪ್ಲಾಸ್ಟಿಕ್ ಶರ್ಟ್ ಅನ್ನು ತ್ಯಜಿಸುವ ಹಾಗೆ. ಅದರರ್ಥ ನೀವು ಸಾಯುವಿರೆಂದಲ್ಲ. ಅದನ್ನೂ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ವಾಸಾಂಸಿ ಜೀರ್ಣಾನಿ ಯಥಾ ವಿಹಾಯ… ಹಳೆಯ ಉಡುಗೆಯನ್ನು ಬಿಟ್ಟು ಹೊಸ ಉಡುಗೆಯನ್ನು ಪಡೆದಂತೆ. ಸಾವೆಂದರೆ ಈ ಪ್ಲಾಸ್ಟಿಕ್ ದೇಹವನ್ನು ಬಿಟ್ಟು ಮತ್ತೊಂದು ಪ್ಲಾಸ್ಟಿಕ್ ದೇಹವನ್ನು ಪಡೆದಂತೆ. ಮತ್ತು ಆ ಪ್ಲಾಸ್ಟಿಕ್ ದೇಹದಿಂದಲೇ ನೀವು ಮತ್ತೆ ಕೆಲಸ ಮಾಡಬೇಕು. ನಿಮಗೆ ಒಳ್ಳೆಯ ದೇಹ ಸಿಕ್ಕರೆ ನೀವು ಚೆನ್ನಾಗಿ ಕೆಲಸ ಮಾಡಬಹುದು. ನಿಮಗೆ ನಾಯಿಯ ದೇಹ ದೊರೆತರೆ ನೀವು ನಾಯಿಯಂತೆ ಇರಬೇಕಾಗುತ್ತದೆ.

ಕೃಷ್ಣ ಹೇಳುತ್ತಾನೆ, `ಯಾರು ನನ್ನನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳುವರೋ ಅವರು ಮತ್ತೆ ಹುಟ್ಟುವುದಿಲ್ಲ.’ ಹಾಗಾದರೆ, ನೀವು ಕೃಷ್ಣನನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಾ? ಬಹಳ ಸುಲಭ – ಸುಮ್ಮನೆ ಅವನ ಬಗೆಗೆ ಕೇಳಿ. ಆಗ ನಿಮಗೆ ಅರ್ಥವಾಗುತ್ತದೆ. ಕೇಳುವುದು ಕಷ್ಟದ್ದೇನಲ್ಲ. ಆದರೆ ನೀವು ಸಾಕ್ಷಾತ್ಕಾರಗೊಂಡ ಆತ್ಮನಿಂದ ಕೇಳಬೇಕು. ನೀವು ವೃತ್ತಿಪರ ವ್ಯಕ್ತಿಯಿಂದ ಕೇಳಿದರೆ ಅದು ಪರಿಣಾಮಕಾರಿಯಾಗಿರದು. ಮಹಾರಾಜ ಪರೀಕ್ಷಿತನು ಶುಕದೇವ ಗೋಸ್ವಾಮಿಯಿಂದ ಕೇಳಿದಂತೆ ಸಾಧು, ಭಕ್ತರಿಂದ ಕೇಳಬೇಕು.
ನೀವು ಪುಸ್ತಕ ಓದಿದರೂ ನಿಮ್ಮ ಬದುಕನ್ನು ಕಾಪಾಡಿಕೊಳ್ಳಬಹುದು. ನೀವು ಕೃಷ್ಣ ಗ್ರಂಥ ಅಥವಾ ಭಗವದ್ಗೀತೆ ಅಥವಾ ಶ್ರೀ ಚೈತನ್ಯರ ಬೋಧನೆಗಳನ್ನು ಓದಿದರೂ ಸಾಕು, ಸೂರ್ಯನಿಗೆ ನಿಮ್ಮ ಬದುಕನ್ನು ತೆಗೆದುಕೊಳ್ಳುವುದು ಸಾಧ್ಯವಿಲ್ಲ. ನೀವು ಸತತವಾಗಿ ಓದುತ್ತಿದ್ದರೆ, ಸೂರ್ಯನಿಗೆ ನಿಮ್ಮ ಜೀವ ತೆಗೆದುಕೊಳ್ಳಲು ಅವಕಾಶವೆಲ್ಲಿದೆ? ಅದರರ್ಥ ನೀವು ಅಮರರಾಗುತ್ತಿದ್ದೀರಿ ಎಂಬುದೇ ಆಗಿದೆ.

ಜನರು ಅಮರರಾಗಲು ಕಾತರದಿಂದ ಇದ್ದಾರೆ. ಯಾರಿಗೂ ಸಾಯಲು ಇಷ್ಟವಿಲ್ಲ. `ನಾನು ಸಾಯುವೆ’ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಎಲ್ಲೋ ಒಂದು ಅಪಾಯ, ಬೆಂಕಿ ಆಕಸ್ಮಿಕ ಎನ್ನಿ, ತತ್ಕ್ಷಣ ಎಲ್ಲರೂ ಆ ಸ್ಥಳದಿಂದ ಹೊರಗೆ ಹೋಗಲು ನುಗ್ಗುತ್ತಾರೆ. ಏಕೆ? ನನಗೆ ಸಾಯಲು ಇಷ್ಟವಿಲ್ಲ. ನಾನು ಸಾಯಲೇ ಬೇಕೆಂದು ನನಗೆ ಗೊತ್ತು, ಆದರೂ ನಾನು ಯಾಕೆ ಓಡುವೆ? ನಾನು ಯೋಚಿಸಬಹುದಿತ್ತು, `ಓ, ಬೆಂಕಿ ಆಕಸ್ಮಿಕವಿರಲಿ. ಇಂದಲ್ಲ, ನಾಳೆ ನಾನು ಸಾಯಲೇ ಬೇಕಲ್ಲವೇ? ನಾನು ಸಾಯುವೆ.’ ಇಲ್ಲ, ನಾನು ಸಾಯಲು ಇಚ್ಛಿಸಲಾರೆ. ಆದುದರಿಂದ ನಾನು ಓಡುವೆ. ಇದೇ ಮನಸ್ಥಿತಿ.
ಎಲ್ಲರಿಗೂ ಸದಾ ಬದುಕಿರಬೇಕೆಂಬ ಆಸೆ. ಅದು ವಾಸ್ತವ. ಆದುದರಿಂದ ನಿಮಗೆ ಸದಾ ಬದುಕಿರಬೇಕೆಂದರೆ, ನೀವು ಕೃಷ್ಣ ಪ್ರಜ್ಞೆ ಸ್ವೀಕರಿಸಬೇಕು. ಈ ಶ್ಲೋಕ ಅದನ್ನು ದೃಢಪಡಿಸುತ್ತದೆ – ಆಯುರ್ ಹರತಿ ವೈ ಪುಂಸಾಮ್ ಉದ್ಯನ್ ಅಸ್ತಮ್ ಚ ಯನ್ ಅಸೌ. ಸೂರ್ಯನು ಬೆಳಗಿನ ಜಾವ ಉದಯಿಸುತ್ತಾನೆ. ಅದು ಹುಟ್ಟುತ್ತಲೇ ಕ್ರಮೇಣ ನಿಮ್ಮ ಬದುಕನ್ನು ತೆಗೆದುಕೊಳ್ಳುತ್ತಿರುತ್ತದೆ. ಅಷ್ಟೆ. ಅದು ಅದರ ವ್ಯವಹಾರ. ಆದರೆ ನಿಮಗೆ ಸೂರ್ಯನನ್ನು ಪರಾಜಿತಗೊಳಿಸಬೇಕೆಂದರೆ… ಸೂರ್ಯ ತುಂಬ ಶಕ್ತಿಶಾಲಿ. ಹೋರಾಟ ಕಷ್ಟ. ಆದರೆ ನೀವು ಸೂರ್ಯನೊಂದಿಗೆ ಹೋರಾಡಬಹುದು. ಹೇಗೆ? ಕೃಷ್ಣ ಕಥೆ, ಕೃಷ್ಣನ ಮಾತುಗಳನ್ನು ಓದುವುದರಿಂದ.
ಇದು ಸರಳವಾದ ವಿಧಾನ. ಅಸಂಬದ್ಧವಾದುದನ್ನು ಮಾತನಾಡುತ್ತ ನಿಮ್ಮ ಸಮಯವನ್ನು ವ್ಯರ್ಥಗೊಳಿಸಬೇಡಿ. ರೂಪ ಗೋಸ್ವಾಮಿ ಸಲಹೆ ನೀಡಿದ್ದಾರೆ –
ಅತ್ಯಾಹಾರಃ ಪ್ರಯಾಸಶ್ ಚ ಪ್ರಜಲ್ಪೋ ನಿಯಮಾಗ್ರಹಃ ।
ಜನ-ಸಂಗಶ್ ಚ ಲೌಲ್ಯಂ ಚ ಷಡ್ಭಿರ್ ಭಕ್ತಿರ್ ವಿನಶ್ಯತಿ ॥
ಈ ಆರು ವಿಷಯಗಳಿಂದ ನಮ್ಮ ಭಕ್ತಿದಾಯಕ ಬದುಕು ಕೊನೆಗೊಳ್ಳಬಹುದು ಅಥವಾ ಭಗ್ನವಾಗಬಹುದು. ಎಚ್ಚರದಿಂದ ಇರಿ. ಅತ್ಯಾಹಾರ ಎಂದರೆ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಅಥವಾ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವುದು. ಆಹಾರ ಎಂದರೆ ಸಂಗ್ರಹ. ಸ್ವಲ್ಪ ಹಣ ಸಂಗ್ರಹಿಸುವುದು ಅಗತ್ಯ, ಆದರೆ ಬೇಕಾದ್ದಕ್ಕಿಂತ ಹೆಚ್ಚು ಅಲ್ಲ. ಏಕೆಂದರೆ, ನನಗೆ ಅಧಿಕ ಹಣ ದೊರೆತರೆ ತತ್ಕ್ಷಣ ಮಾಯಾ ಪ್ರತ್ಯಕ್ಷವಾಗಿ, `ನನಗಾಗಿ ಯಾಕೆ ಖರ್ಚು ಮಾಡಬಾರದು?’ ಎಂದು ಕೇಳುವುದು ನಿಶ್ಚಿತ.
ಆಹಾರ ಎಂದರೆ ತಿನ್ನುವುದು ಎಂದೂ ಅರ್ಥ. ಅಗತ್ಯಕ್ಕಿಂತ ಹೆಚ್ಚು ಸೇವಿಸಬೇಡಿ. ವಾಸ್ತವವಾಗಿ ನಾವು – ಸೇವಿಸುವುದಿಲ್ಲ, ಮಲಗುವುದಿಲ್ಲ, ಲೈಂಗಿಕ ಕ್ರಿಯೆ ಇಲ್ಲ ಮತ್ತು ಭಯ ಇಲ್ಲ. ಈ `ಇಲ್ಲ’ ಎಂಬ ನೆಲೆಗೆ ಬರಬೇಕು. ನಮಗೆ ಈ ದೇಹ ಇರುವುದರಿಂದ ಅದು ಸಾಧ್ಯವಿಲ್ಲ. ಆದರೆ, ನಾವು ಈ ಚಟುವಟಿಕೆಗಳನ್ನು ಆದಷ್ಟು ಕನಿಷ್ಠದಲ್ಲಿಡಬೇಕು.

ಪ್ರಯಾಸಃ ಎಂದರೆ ಅನಗತ್ಯವಾಗಿ ನಮ್ಮ ಶಕ್ತಿಯನ್ನು ಹಾಳು ಮಾಡಿಕೊಳ್ಳುವುದು. ದೊಡ್ಡ ಗಂಡಾಂತರವನ್ನು ಎತ್ತಿಕೊಂಡು ಬಹಳ ಶ್ರಮದಿಂದ ಕೆಲಸ ಮಾಡುವಂತೆ ಆಗಬಾರದು. ಸರಾಗವಾಗಿ ಮಾಡಬಹುದಾದುದನ್ನು ನಾವು ಒಪ್ಪಿಕೊಳ್ಳಬೇಕು.

ಪ್ರಜಲ್ಪ ಎಂದರೆ ಅಸಂಬದ್ಧವಾದುದನ್ನು ಮಾತನಾಡುವುದು. ಇದು ಬದ್ಧ ಸ್ಥಿತಿಯಲ್ಲಿ ಜೀವಿಗಳ ಸ್ವಭಾವ. ಹೇಗೆಂದರೆ, ಕಾಗೆಗಳು ಸೇರಿದಾಗ ಕಾ, ಕಾ, ಕಾ ಎನ್ನುವಂತೆ (ನಗೆ…), ಕಪ್ಪೆಗಳು – ಯಾವುದೇ ಜೀವಿಗಳು – ಒಂದೆಡೆ ಸೇರಿದಾಗ ಅಸಂಬದ್ಧವಾದುದನ್ನೇ ಮಾತನಾಡುತ್ತವೆ. ಹಾಗೆ ಮಾಡಬೇಡಿ. ನಮ್ಮಲ್ಲಿ ಉತ್ತಮವಾದ ಸಂಘ, ಸಭೆ ಇದೆ. ನಮಗೆ ಪರಸ್ಪರ ಮಿಲನಗೊಳ್ಳುವ ಸೌಲಭ್ಯವಿದೆ. ಆದರೆ ಈ ಸಭೆಯನ್ನು – `ಏನು ರಾಜಕೀಯ?, ಏನಿದು? ಏನದು’ ಎಂಬಂತಹ ನಿರುಪಯುಕ್ತ ಮಾತುಗಳಿಗೆ ದುರುಪಯೋಗ ಪಡಿಸಿಕೊಳ್ಳಬೇಡಿ. ಅದನ್ನೇ ಪ್ರಜಲ್ಪ ಎನ್ನುವುದು.

ನಿಯಮಾಗ್ರಹಃ ಎಂದರೆ ನಿಯಮ ಮತ್ತು ನಿಯಂತ್ರಣಗಳನ್ನು ಒಪ್ಪದಿರುವುದು. ನಿಯಮಾಗ್ರಹಃ ಎಂದರೆ ನಿಯಮ ಮತ್ತು ನಿಯಂತ್ರಣಗಳನ್ನು ಕಣ್ಣು ಮುಚ್ಚಿ ಅನುಸರಿಸುವುದು ಎಂದೂ ಅರ್ಥ.
ಆದುದರಿಂದ, ಒಂದು ಅತ್ಯಾಹಾರ; ಎರಡು, ಪ್ರಯಾಸ; ಮೂರು ಪ್ರಜಲ್ಪ; ನಾಲ್ಕು ನಿಯಮಾಗ್ರಹಃ; ಐದು, ಲೌಲ್ಯಂ, ದುರಾಸೆ; ಮತ್ತು ಆರು, ಜನಸಂಗಃ. ಜನಸಂಗಃ ಎಂದರೆ ಜನಸಾಮಾನ್ಯರೊಂದಿಗೆ ಬೆರೆಯುವುದು – ಯಾರಿಗೆ ಕೃಷ್ಣ ಪ್ರಜ್ಞೆಯ ಅರಿವಿಲ್ಲವೋ, ಅದೇ ಕರ್ಮಿಯರು, ಜ್ಞಾನಿಗಳು, ಮತು ಯೋಗಿಗಳು ಎಂದೆನಿಸಿಕೊಳ್ಳುವವರು. ಅವರು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅಥವಾ ವಿಜ್ಞಾನಿಗಳು ಮತ್ತು ತತ್ತ್ವ ಜ್ಞಾನಿಗಳು – ಇವರೊಂದಿಗೆ ನಾವು ಜೊತೆಗೂಡಬಾರದು. ಏಕೆಂದರೆ ನಮಗೆ ಗೊತ್ತು, ಹರಾವ್ ಅಭಕ್ತಸ್ಯ ಕುತೋ ಮಹದ್-ಗುಣಾ. ಕೃಷ್ಣ ಅಥವಾ ಕೃಷ್ಣ ಸೇವೆಯನ್ನು ಅರ್ಥ ಮಾಡಿಕೊಳ್ಳದವರು ಸಾಮಾನ್ಯ ಅಂದಾಜಿನಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ನಾವು ಅವರಿಗೆ ಬೆಲೆ ಕೊಡುವುದಿಲ್ಲ. ಏಕೆಂದರೆ ಅವರಂತಹ ವ್ಯಕ್ತಿಗಳು ಮಾನಸಿಕ ಊಹಾಪೋಹ ಮಾಡುವವರು. ಅವರಿಗೆ ಏನೂ ಮೌಲ್ಯವಿಲ್ಲ. ಅವರ ದಾರಿಯಲ್ಲಿ ಅವರಿಗೆ ಬೆಲೆ ಇರಬಹುದು, ಆದರೆ ನಮ್ಮ ಆಲೋಚನೆಯಲ್ಲಿ ನಮಗೆ ಅವರು ಮೌಲ್ಯರಹಿತರು.
ಮಾತನಾಡುವ ಪ್ರವೃತ್ತಿ ಇರುತ್ತದೆ, ಆದ್ದರಿಂದ ಕೃಷ್ಣನ ಬಗೆಗೆ ಮಾತನಾಡಿ. ಅದೇ ಕೃಷ್ಣ ಪ್ರಜ್ಞೆ. ನಾವು, ಕೆಲ ಸ್ನೇಹಿತರು, ಒಂದೆಡೆ ಸೇರುತ್ತೇವೆ ಮತ್ತು ನಮಗೆ ಯಾವುದೋ ಶಬ್ದವನ್ನು ಪ್ರತಿಧ್ವನಿಸಬೇಕೆನಿಸುತ್ತದೆ. ಮಗುವೂ ಕೂಡ ಶಬ್ದ ಮಾಡುತ್ತದೆ. ಅದು ಪ್ರಕೃತಿ ಸಹಜ. ಪಕ್ಷಿ ಪ್ರತಿಧ್ವನಿಸುತ್ತದೆ, ಮೃಗ ಪ್ರತಿಧ್ವನಿಸುತ್ತದೆ. ಆದುದರಿಂದ ನಾವು ಅಲೌಕಿಕ ಶಬ್ದ, ಪದಗಳನ್ನು ಪ್ರತಿಧ್ವನಿಸಬೇಕು. ಆಗ ನಾವು ಸೂರ್ಯನ ಸುಲಿಗೆ ವ್ಯವಹಾರದಿಂದ ಪಾರಾಗಬಹುದು.

ಇದು ರಹಸ್ಯ. ಸದಾ ಕೃಷ್ಣನ ಕುರಿತು ಮಾತನಾಡಿ ಮತ್ತು ನಿಮ್ಮನ್ನು ನೀವು ಕಾಪಾಡುವುದನ್ನು ನೀವು ಅರಿಯಿರಿ. ಏಕೆಂದರೆ ಕೃಷ್ಣನನ್ನು ಕುರಿತು ಮಾತನಾಡುವುದೆಂದರೆ ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳುವಿರೆಂದೇ ಅರ್ಥ. ಕೃಷ್ಣ ಹೇಳುತ್ತಾನೆ, `ಯಾರು ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೋ ಅವರು ಈ ದೇಹ ತ್ಯಜಿಸಿದ ಮೇಲೆ ನನ್ನ ಬಳಿಗೆ ಬರುತ್ತಾರೆ’ ಮತ್ತು ನೀವು ಅವನ ಬಳಿಗೆ ಹೋದ ಕೂಡಲೇ, ನೀವು ಮನೆಗೆ, ಭಗವದ್ಧಾಮಕ್ಕೆ ಮರಳುತ್ತೀರಿ; ನಿಮ್ಮ ಬದುಕು ಶಾಶ್ವತ, ಆನಂದ ಮತ್ತು ಜ್ಞಾನಪೂರ್ಣವಾಗಿರುತ್ತದೆ.
ಈ ಅವಕಾಶವನ್ನು ನಾವು ಯಾಕೆ ಕಳೆದುಕೊಳ್ಳಬೇಕು? ಮೂರ್ಖರು ಇಂತಹ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಅವರು ಕೃಷ್ಣಕಥೆಯ ಲಾಭ ಪಡೆದುಕೊಳ್ಳವುದಿಲ್ಲ. ಆದುದರಿಂದ ಧರ್ಮಗ್ರಂಥಗಳು ಹೇಳುತ್ತವೆ, ಸ್ಮರ್ತವ್ಯಃ ಸತತಂ ವಿಷ್ಣುರ್ ವಿಸ್ಮರ್ತವ್ಯೋ ನ ಜಾತುಚಿತ್. ನಾವು ಸದಾ ಮತ್ತು ಎಲ್ಲೆಡೆ ವಿಷ್ಣುವನ್ನು ಸ್ಮರಿಸಬೇಕು.

ಇದು ಕೃಷ್ಣ ಪ್ರಜ್ಞೆಯ ವಿಧಾನ. ನಾವು ಕೃಷ್ಣನನ್ನು ಕುರಿತು ಕೇಳಬೇಕು, ಕೃಷ್ಣನ ಬಗೆಗೆ ಪಠಿಸಬೇಕು, ಕೃಷ್ಣನನ್ನು ಸ್ಮರಿಸಬೇಕು ಮತ್ತು ಕೃಷ್ಣನನ್ನು ಪೂಜಿಸಬೇಕು. ಇದು ನಮ್ಮ ಆಂದೋಲನ. ನಾವು ಮಂದಿರದಲ್ಲಿ ಕೃಷ್ಣನನ್ನು ಪೂಜಿಸುತ್ತೇವೆ, ನಾವು ಅವನ ಬಗೆಗೆ ಯೋಚಿಸುತ್ತೇವೆ, ಅವನನ್ನು ಕುರಿತು ಮಾತನಾಡುತ್ತೇವೆ ಮತ್ತು ಅವನನ್ನು ಕುರಿತು ಕೇಳುತ್ತೇವೆ.
ಇವುಗಳಿಗೆಲ್ಲ ಯಾವುದೇ ಹಣಕಾಸಿನ ವಿನಿಮಯ ಅಥವಾ ಉನ್ನತ ಶಿಕ್ಷಣದ ಅಗತ್ಯವಿಲ್ಲ. ಪ್ರತಿಯೊಬ್ಬರೂ ಕೃಷ್ಣನನ್ನು ಕುರಿತು ಕೇಳಬಹುದು. ಕೇಳಿದ ಮೇಲೆ. ಕೃಷ್ಣನ ಬಗೆಗೆ ಮಾತನಾಡಬಹುದು. ಹಾಗೆ ಕೇಳುವಾಗ ಮತ್ತು ಮಾತನಾಡುವಾಗ ಕೃಷ್ಣನನ್ನು ಸ್ಮರಿಸಬಹುದು ಮತ್ತು ಪ್ರತಿಯೊಬ್ಬರೂ ದೇವಸ್ಥಾನದಲ್ಲಿ ಕೃಷ್ಣನನ್ನು ಪೂಜಿಸಬಹುದು. ಕಷ್ಟವೆಲ್ಲಿದೆ? ಕೃಷ್ಣ ಪ್ರಜ್ಞೆಯ ಈ ನಾಲ್ಕು ತತ್ತ್ವಗಳನ್ನು ನಿರ್ವಹಿಸುವುದರಿಂದ, ಪಾಲಿಸುವುದರಿಂದ ನೀವು ಅಮರರಾಗುತ್ತೀರಿ.

ಈ ಶ್ಲೋಕ ತುಂಬ ಮುಖ್ಯವಾದುದು. ಬಿಡುವು ಇದ್ದರೆ, ಸುಮ್ಮನೆ ಸೋಮಾರಿಯಾಗಿ ಕೂರಬೇಡಿ. ಪುಸ್ತಕ ಓದಲು ಅಥವಾ ಕೃಷ್ಣನನ್ನು ಕುರಿತು ಮಾತನಾಡಲು ಸೌಲಭ್ಯವಿಲ್ಲದಿದ್ದರೆ, ಹರೇ ಕೃಷ್ಣ, ಹರೇ ಕೃಷ್ಣ, ಹರೇ ಕೃಷ್ಣ, ಹರೇ ಕೃಷ್ಣ ಎಂದು ಪಠಿಸಿ. ಯಾವಾಗಲೂ ಕೃಷ್ಣನಲ್ಲಿ ಮಗ್ನರಾಗಿರಿ. ಸೂರ್ಯನಿಗೆ ನಿಮ್ಮನ್ನು ವಧಿಸುವುದು ಸಾಧ್ಯವಿಲ್ಲ. ನೀವು ಸದಾ ಜೀವಿಸಿರುತ್ತೀರಿ.
ವಂದನೆಗಳು.