ಕೃಷ್ಣ ಪಾಕಶಾಲೆ
– ಎಸ್.ವಿ.ಗಾಯತ್ರಿ ಶೆಣೈ
ಪ್ರಿಯ ಓದುಗರಿಗಾಗಿ ಈ ಬಾರಿ ರಸಭರಿತ ಹಣ್ಣುಗಳ ವಿಶೇಷ ಪಾನಕವನ್ನು ಕೊಡಲಾಗಿದೆ. ತಾವು ಮಾಡಿ ಶ್ರೀ ರಾಧಾಕೃಷ್ಣಚಂದ್ರರಿಗೆ ಅರ್ಪಿಸಿ, ಸ್ವೀಕರಿಸಿ.
ಕಿತ್ತಲೆ ಶುಂಠಿ ಐಸ್ ಪಾನಕ

ಬೇಕಾಗುವ ಪದಾರ್ಥಗಳು:
ಕಿತ್ತಲೆ ರಸ – 3 ಬಟ್ಟಲು
ಬಿಸಿನೀರು – 2 ಬಟ್ಟಲು
ಬೇಕಾದಲ್ಲಿ ಮಂಜುಗಡ್ಡೆ
(ಐಸ್ ಗಡ್ಡೆ ಪುಡಿ) – 3 ಬಟ್ಟಲು
ಲಿಂಬೆರಸ – 4 ರಿಂದ 5 ಚಿಕ್ಕ ಚಮಚ
ಜೇನುತುಪ್ಪ – 4 ರಿಂದ 5 ಚಿಕ್ಕ ಚಮಚ
ಶುಂಠಿ – 1 ½ ಇಂದಿನಷ್ಟು ಚಿಕ್ಕ ಚೂರು
ಪುದೀನ ಸೊಪ್ಪು – ¼ ಬಟ್ಟಲು
ಏಲಕ್ಕಿ ಪುಡಿ – ½ ಚಿಕ್ಕ ಚಮಚ
ಮಾಡುವ ವಿಧಾನ: ಶುಚಿಗೊಳಿಸಿದ ಶುಂಠಿ ಹಾಗೂ ಪುದೀನ ಸೊಪ್ಪನ್ನು ಚೆನ್ನಾಗಿ ರುಬ್ಬಿ ಬಿಸಿನೀರಿನಗೆ ಹಾಕಿ, 30 ನಿಮಿಷಗಳ ಅನಂತರ ಬಿಸಿನೀರಿನೊಂದಿಗೆ ಬೆರೆತಿರುವ ಪುದೀನ, ಶುಂಠಿ ರಸವನ್ನು ಸೋಸಿ, ಅನಂತರ ಲಿಂಬೆರಸ, ಕಿತ್ತಳೆರಸ, ಜೇನುತುಪ್ಪ, ಏಲಕ್ಕಿಪುಡಿ ಮತ್ತು ಐಸ್ ಗಡ್ಡೆ ಎಲ್ಲವನ್ನು ಬೆರೆಸಿ, ಕಿತ್ತಲೆ – ಶುಂಠಿ ಐಸ್ ಪಾನಕ ಸಿದ್ಧ.
ಕಿತ್ತಳೆ ಮಜ್ಜಿಗೆ ಪಾನಕ

ಬೇಕಾಗುವ ಪದಾರ್ಥಗಳು:
ಕಡೆದ (ಬೆಣ್ಣೆತೆಗೆದ) ಮಜ್ಜಿಗೆ – 2 ಬಟ್ಟಲು
ತಾಜಕಿತ್ತಲೆ ರಸ – 2 ಬಟ್ಟಲು
ಸಕ್ಕರೆ – 2 ದೊಡ್ಡ ಚಮಚ
ಬೇಕಾದಲ್ಲಿ ಐಸ್ಗಡ್ಡೆ ಪುಡಿ – 2 ಬಟ್ಟಲು
ಮಾಡುವ ವಿಧಾನ: ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಸೇರಿಸಿ, ಐಸ್ಗಡ್ಡೆ ಚೆನ್ನಾಗಿ ಕರಗುವಂತೆ ಮಾಡಿ, ಪಾನೀಯ ಸಿದ್ಧ. ಬೇಕಾದಲ್ಲಿ ಎಲ್ಲ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಕಡೆದರೂ (ಬ್ಲೆಂಡ್ ಮಾಡಿದರೂ) ಚೆನ್ನಾಗಿ ಬೆರೆಯುತ್ತದೆ.
ಬಾಳೆ ಹಣ್ಣಿನ – ಹಾಲಿನ ರಸ

ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು (ಪಚ್ಚಬಾಳೆ) – 3
ಕಾದಾರಿಸಿದ ಹಾಲು – 2 ಬಟ್ಟಲು
ಜೇನುತುಪ್ಪ – 1 ರಿಂದ 2 ದೊಡ್ಡ ಚಮಚ
ಜಾಕಾಯಿಪುಡಿ – 2 ಚಿಟಿಕೆ
ಬೇಕಾದಲ್ಲಿ ಐಸ್ಗಡ್ಡೆ ಪುಡಿ – 1 ಬಟ್ಟಲು
ಮಾಡುವ ವಿಧಾನ: ಮಿಕ್ಸಿಯಲ್ಲಿ ಬಾಳೆಹಣ್ಣಿನ ಚೂರು, ಜೇನುತುಪ್ಪ ಮತ್ತು ಹಾಲನ್ನು ಹಾಕಿ ಸುಮಾರು 2 ನಿಮಿಷ ಕಡೆಯಿರಿ (ಬ್ಲೆಂಡ್ಮಾಡಿ). ಅನಂತರ ಐಸ್ಗಡ್ಡೆಪುಡಿ ಬೆರೆಸಿ ಮತ್ತೆ 1 ನಿಮಿಷ ಕಡೆಯಿರಿ. ಲೋಟದಲ್ಲಿ (ಗ್ಲಾಸ್) ಬಾಳೆ ಹಣ್ಣಿನ ರಸ ಹಂಚುವಾಗ ಪ್ರತಿ ಲೋಟಕ್ಕೂ ಮೇಲೆ ಸ್ವಲ್ಪ ಜಾಕಾಯಿಪುಡಿಯನ್ನು ಹಾಕಿ ಕೊಡಿ.
ಕೇಸರಿ ಮತ್ತು ಲಿಂಬೆ ಶರಬತ್ತು

ಬೇಕಾಗುವ ಪದಾರ್ಥಗಳು:
ಕೇಸರಿ – 7 ರಿಂದ 8 ದಳ
ಲಿಂಬೆರಸ – 4 ಚಿಕ್ಕ ಚಮಚ
ಸಕ್ಕರೆ – 6 ದೊಡ್ಡ ಚಮಚ
ಏಲಕ್ಕಿ ಪುಡಿ – ¼ ಚಿಕ್ಕ ಚಮಚ
ತಣ್ಣನೆಯ (ಐಸ್) ನೀರು – 4 ½ ಬಟ್ಟಲು
ಉಪ್ಪು – ¼ ಚಿಕ್ಕ ಚಮಚ
ಮಾಡುವ ವಿಧಾನ: ಕೇಸರಿದಳಗಳನ್ನು ಪುಡಿ ಮಾಡಿ 1 ರಿಂದ 2 ಚಿಕ್ಕ ಚಮಚದಷ್ಟು ಬಿಸಿನೀರಿನಲ್ಲಿ ಕರಗಿಸಿ. ಅನಂತರ ದೊಡ್ಡಪಾತ್ರೆಯಲ್ಲಿ ಕೇಸರಿ ರಸ ಹಾಗೂ ನಿಂಬೆರಸವನ್ನು ಬೆರೆಸಿ. ಎರಡೂ ಚೆನ್ನಾಗಿ ಬೆರೆತನಂತರ, ನೀರು, ಸಕ್ಕರೆ ಏಲಕ್ಕಿ ಪುಡಿ ಹಾಗೂ ಉಪ್ಪನ್ನು ಬೆರೆಸಿ. ಫ್ರಿಜ್ನಲ್ಲಿಟ್ಟು ತಣ್ಣಗಾಗಿಸಿ ಕುಡಿಯಬಹುದು. ಇಲ್ಲದಿದ್ದಲ್ಲಿ ಹಾಗೇ ಸ್ವೀಕರಿಸಬಹುದು.






Leave a Reply