ಒಬ್ಬ ಸಜ್ಜನರು ಒಮ್ಮೆ ಕ್ಷೌರ ಮಾಡಿಸಿಕೊಳ್ಳಲು ಕ್ಷೌರಿಕನ ಅಂಗಡಿಗೆ ಹೋದರು. ಕ್ಷೌರಿಕನೋ ಮಾತಿನ ಮಲ್ಲ. ಹಾಗಾಗಿ ಅವರಿಬ್ಬರ ನಡುವೆ ಅನೇಕ ವಿಷಯಗಳ ಬಗ್ಗೆ ಮಾತುಕತೆ ನಡೆಯಿತು. ಕೊನೆಗೆ ಭಗವಂತನ ಕುರಿತು ಮಾತು ಶುರುವಾಯಿತು.

ಕ್ಷೌರಿಕ ಹೇಳಿದ, ” ದೇವರು ಇರುವನು ಎಂದು ನನಗೆ ವಿಶ್ವಾಸವಿಲ್ಲ.” ಎಂದು. “ಏಕೆ ಹೀಗೆ ಹೇಳುವೆ?” ಕುತೂಹಲದಿಂದ ಸಜ್ಜನರು ಕೇಳಿದರು. “ದೇವರೆಲ್ಲಿದ್ದಾನೆ? ದಯವಿಟ್ಟು ಹೊರಗೆ ಹೋಗಿ ರಸ್ತೆಯಲ್ಲಿ ನಿಂತುಕೊಂಡು ಎಲ್ಲ ಕಡೆ ಸ್ವಲ್ಪ ದೃಷ್ಟಿ ಹಾಯಿಸಿ ನೋಡಿ. ದೇವರು ಇದ್ದಿದ್ದರೆ, ಜನರು ಹಸಿವಿನಿಂದ ನರಳುತ್ತಿದ್ದರೆ? ರೋಗ-ರುಜಿನೆಗಳಿಂದ ಪೀಡಿತರಾಗುತ್ತಿದ್ದರೆ? ಇಲ್ಲ ತಾನೆ? ದುಃಖ ದೋಷಗಳು ಹೆಚ್ಚಿನ ಪ್ರಮಾಣದಲ್ಲಿ ಲೋಕದಲ್ಲಿ ಕಾಣಿಸುವುದರಿಂದ ದೇವರು ಇರಲು ಸಾಧ್ಯವೇ ಇಲ್ಲ ಎಂಬುವುದು ಶತಸಿದ್ಧ”
ಸಜ್ಜನರು ಏನು ಉತ್ತರ ನೀಡಲಿಲ್ಲ. ಏಕೆಂದರೆ ವಾದ ಮುಂದುವರೆಸಲು ಅವರಿಗೆ ಇಷ್ಟವಿರಲಿಲ್ಲ. ಕ್ಷೌರ ಕಾರ್ಯ ಮುಗಿಯಿತು. ದುಡ್ಡು ಕೊಟ್ಟು ಸಜ್ಜನರು ಅಂಗಡಿಯಿಂದ ಹೊರಗೆ ಬಂದರು. ಅಷ್ಟು ಹೊತ್ತಿಗೆ ಉದ್ದನೆಯ ಮಲಿನವಾದ ಕೂದಲು, ಮಲಿನ ಗಡ್ಡ ಇರುವ ಯಾರೋ ಒಬ್ಬ ಅವರಿಗೆ ಕಂಡ. ಅವನನ್ನು ನೋಡಿದ ಸಜ್ಜನರಿಗೆ ಒಂದು ಅಂಶ ಹೊಳೆಯಿತು. ಕೂಡಲೇ ಕ್ಷೌರಿಕನ ಅಂಗಡಿಯೊಳಗೆ ಹೋಗಿ, “ನಿಮಗೆ ಗೊತ್ತೇ? ಕ್ಷೌರಿಕರು ಲೋಕದಲ್ಲಿ ಇಲ್ಲವೇ ಇಲ್ಲ.” ಎಂದರು.
“ಏನು ಹೀಗೆ ಹೇಳುತ್ತೀರಿ? ನನ್ನ ಜೊತೆ ಮಾತನಾಡಿದಿರಿ, ನನ್ನಿಂದ ಈಗ ತಾನೆ ಕ್ಷೌರ ಮಾಡಿಸಿಕೊಂಡಿರಿ. ಕ್ಷೌರಿಕರೇ ಇಲ್ಲ ಎಂದರೆ ಏನು ಅರ್ಥ?” ತುಸು ಕೋಪದಿಂದಲೇ ಕೇಳಿದ ಕ್ಷೌರಿಕ.”ಅಲ್ಲ, ಕ್ಷೌರಿಕರಿದ್ದಿದ್ದರೆ, ಲೋಕದಲ್ಲಿ ಉದ್ದನೆಯ ಕೂದಲಿನವರು, ಉದ್ದ ಗಡ್ಡದವರು ಹೇಗೆ ತಾನೆ ಇರುವರು? ಅಂತಹವರು ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಸಿಗುತ್ತಾರೆ ಆದ್ದರಿಂದ ಲೋಕದಲ್ಲಿ ಕ್ಷೌರಿಕರು ಇಲ್ಲ ಎಂಬುದು ಸಿದ್ಧ.” ಎಂದರು ಸಜ್ಜನರು.”
ವಿಚಿತ್ರ ಮಾತು ತಮ್ಮದು. ಅವರು ಕ್ಷೌರಿಕನ ಹತ್ತಿರ ಹೋಗಿಲ್ಲ. ಆದ್ದರಿಂದ ಅವರು ಹಾಗೆ. ಇದರಲ್ಲಿ ಕ್ಷೌರಿಕನ ಅಪರಾಧ ಏನು? ಈ ರೀತಿಯ ತರ್ಕದಿಂದ ಕ್ಷೌರಿಕನ ಅಸ್ತಿತ್ವ ಇಲ್ಲಿ ಎನ್ನಲಾಗದು.” ಕ್ಷೌರಿಕ ಹೇಳಿದ.”ಹಾಗಿದ್ದಲ್ಲಿ, ಇದೇ ನ್ಯಾಯ ದೇವರ ವಿಷಯದಲ್ಲಿ ಕೂಡ ಅನ್ವಯಿಸುತ್ತದೆ.

ಕೆಲವರು ದೇವರು ಹತ್ತಿರ, ದೇವಸ್ಥಾನಕ್ಕೆ ಹೋಗುವುದಿಲ್ಲ, ಅವನ ದರ್ಶನ ಮಾಡುವುದಿಲ್ಲ, ಅವನನ್ನು ಸ್ಮರಿಸುವುದಿಲ್ಲ. ಆದ್ದರಿಂದ ಅವರು ವ್ಯಾಧಿ ದುಃಖಾದಿಗಳಿಂದ ಪೀಡಿತರಾಗುವರು” ಎಂದರು ಸಜ್ಜನರು.
******






Leave a Reply