ಭಗವಂತನ ದಿವ್ಯರೂಪವು ಮನದ ಬಯಕೆಗಳನ್ನು ತಣಿಸುತ್ತದೆ; ಒಮ್ಮೆಗೇ ಮಾನಸಿಕ ವೈರುಧ್ಯಗಳನ್ನು ತೊಡೆದು ಹಾಕುತ್ತದೆ. ಆ ರೂಪವನ್ನು ಕಳೆದುಕೊಂಡು ಉದ್ವಿಗ್ನನಾಗಿ ತತ್ಕ್ಷಣ ಎದ್ದುನಿಂತೆ. ತನ್ನ ಇಷ್ಟವನ್ನು ಕಳೆದುಕೊಂಡವರಿಗೆಲ್ಲ ಅದು ಸಾಮಾನ್ಯವಷ್ಟೆ.
– (ಭಾಗವತ 1.6.18 )
ಈ ಸಂವಾದದಲ್ಲಿ ನಾರದ ಮುನಿಗಳು ಭಗವಂತನ ಅಲೌಕಿಕ ರೂಪ ಕುರಿತ ತಮ್ಮ ಧ್ಯಾನದ ಅನುಭವವನ್ನು ವ್ಯಾಸರಿಗೆ ಹೇಳುತ್ತಿದ್ದಾರೆ. ಅವರಿಗೆ ದೇವೋತ್ತಮನ ಅಲೌಕಿಕ ನೋಟವು ಹೃದಯದಲ್ಲಿ ಲಭ್ಯವಾಯಿತು ಮತ್ತು ಅವರ ಅಂಗ ಅಂಗವೂ ಆನಂದದಿಂದ ಪುಳಕಿತವಾಯಿತು. ದೇವರಿದ್ದಾನೆ ಮತ್ತು ಅವನಿಗೆ ಅಲೌಕಿಕ ರೂಪವಿದೆ ಎಂದು ಭಾಗವತವು ಹೇಳುತ್ತದೆ. ಆ ರೂಪವನ್ನು ನೋಡಲು ನಮಗೆ ಸತ್ ಚಿತ್ ಆನಂದದ ಕಣ್ಣುಗಳು ಬೇಕು. ದೇವರಿಗೆ ಆಕಾರವಿಲ್ಲ ಎಂದು ಕೆಲವರು ಹೇಳುತ್ತಾರೆ, ಏಕೆಂದರೆ, ಅವನಿಗೆ ರೂಪವಿದ್ದರೆ ಅವನು ಸೀಮಿತ. ಲೌಕಿಕ ರೂಪಗಳು ವಸ್ತುವಿನಿಂದ ಮಾಡಲ್ಪಟ್ಟಿವೆ. ಆಧ್ಯಾತ್ಮಿಕ ರೂಪಗಳು ಚಿತ್ ಶಕ್ತಿಯಿಂದ ಮಾಡಲ್ಪಟ್ಟಿವೆ. ಚಿತ್ ಎಂದರೆ ಜ್ಞಾನದಿಂದ ತುಂಬಿದ ಎಂದು ಅರ್ಥ. ಭಗವಂತನಿಗೆ ಆಕಾರ ಇಲ್ಲವೆಂದು ಹೇಳುವವರನ್ನು ಮಾಯಾವಾದಿಗಳೆಂದು ಕರೆಯುತ್ತಾರೆ. ಅಂತಿಮವಾಗಿ ಆಕಾರ ರಹಿತ ಶಕ್ತಿ ಇದೆ, ಅದರಿಂದ ಈ ಎಲ್ಲ ರೂಪಗಳು ಮತ್ತು ಕೃಷ್ಣನ ರೂಪ ಮೂಡಿಬಂದಿದೆ ಎಂದು ಮಾಯಾವಾದಿಗಳು ಹೇಳುತ್ತಾರೆ. ಅಂದರೆ, ದೇಹವಿದ್ದರೆ ಅದು ಮಾಯೆಯಿಂದ ಮಾಡಲ್ಪಟ್ಟಿರಬೇಕು. ಮಾಯಾ ಎಂದರೆ ರಜೋ ಗುಣ, ತಮೋ ಗುಣ, ಸತ್ತ್ವ ಗುಣ. ಅವರು ಹೇಳುವ ಒಂದೇ ವ್ಯತ್ಯಾಸವೆಂದರೆ, ಕೃಷ್ಣನ ರೂಪವು ಸತ್ತ್ವ ಗುಣ, ಆದರೆ ಅದಕ್ಕೂ, ಮೂರು ಲೌಕಿಕ ಗುಣಗಳಿಗೂ ಏನೇನೂ ಸಂಬಂಧವಿಲ್ಲ. ಭಗವಂತನ ಅಲೌಕಿಕ ರೂಪವು ವಿಶುದ್ಧ ಸತ್ತ್ವ, ಅದು ಅಲೌಕಿಕ ವಸ್ತು ಅಥವಾ ತತ್ತ್ವ.
ಬ್ರಹ್ಮನ್ ಜಿಜ್ಞಾಸೆ ಇಲ್ಲ
ಬ್ರಹ್ಮನ್ನಲ್ಲಿ ವೈವಿಧ್ಯ ಇಲ್ಲ ಎಂದು ಮಾಯಾವಾದಿಗಳು ಹೇಳುತ್ತಾರೆ. ಆದರೆ ಭಾಗವತ ಸಿದ್ಧಾಂತ – ನಾನು ಶಾಶ್ವತವಾಗಿ ಕೃಷ್ಣನ ಒಂದು ಅಂಶ, ಪೂರ್ಣ ಬ್ರಹ್ಮನ್ ಅಲ್ಲ. ಆ ಪೂರ್ಣ ಬ್ರಹ್ಮನ್, ಪರ ಬ್ರಹ್ಮನ್ ಪ್ರತ್ಯೇಕ. ಅವನು ಭಗವಂತ, ಮತ್ತೊಬ್ಬ ವ್ಯಕ್ತಿ. ನಾನು ಇನ್ನೊಂದು ವ್ಯಕ್ತಿ ಹಾಗೂ ನನಗೆ ಆ ವ್ಯಕ್ತಿಯೊಂದಿಗೆ ಶಾಶ್ವತ ಬಾಂಧವ್ಯವಿದೆ. ಆಧ್ಯಾತ್ಮಿಕ ಲೋಕವು ವಿಶೇಷದಿಂದ ಕೂಡಿದೆ, ನಿರ್ವಿಶೇಷದಿಂದ ಅಲ್ಲ. ಐಹಿಕ ಲೋಕವು ಭ್ರಮೆಯಂತೆ ಎಂದು ಮಾಯಾವಾದಿಗಳು ಹೇಳುತ್ತಾರೆ. ಅದು ಹೇಗೆಂದರೆ, ಹಗ್ಗವನ್ನು ನೋಡಿದಾಗ ಅದನ್ನು ಹಾವೆಂದು ತಪ್ಪಾಗಿ ಭಾವಿಸುವುದು. ಎಲ್ಲೋ ಒಂದು ಕಡೆ ಹಾವು ಇದೆ, ಮತ್ತೆಲ್ಲೋ ಒಂದು ಕಡೆ ಹಗ್ಗವೂ ಇದೆ, ಎರಡೂ ನಿಜ ಎಂದು ವೈಷ್ಣವರು ಹೇಳುತ್ತಾರೆ. ಇದು ಆಧ್ಯಾತ್ಮಿಕದ ಅನುಕರಣೆ ಮಾತ್ರ, ಒಂದು ಜನ್ಮದಲ್ಲಿ ನೀವು ಪುರುಷನಾಗಿರಬಹುದು, ಮತ್ತೊಂದು ಜನ್ಮದಲ್ಲಿ ಸ್ತ್ರೀಯಾಗಿರಬಹುದು.

ಮಾಯಾವಾದಿಗಳೂ ಅಲೌಕಿಕವಾದಿಗಳು. ಅವರು ಭಗವಂತನ ಆಕಾರವನ್ನು ಒಪ್ಪುವುದಿಲ್ಲ, ಆದರೆ ಬ್ರಹ್ಮನ್ ಇದ್ದಾನೆ ಎಂದಾದರೂ ಹೇಳುತ್ತಾರೆ ಎಂದು ಪ್ರಭುಪಾದರು ಹೇಳಿದ್ದಾರೆ. ಮಾಯಾವಾದಿಗಳು ಹೇಳುವುದು ಏನು? ಕೃಷ್ಣ, ರಾಮ, ವಿಷ್ಣು ಈ ವ್ಯಕ್ತಿಗಳೆಲ್ಲ ಬ್ರಹ್ಮನ್ನಿಂದ ವಿಕಸಿತ ಅಥವಾ ಉತ್ಪತ್ತಿಯಾಗಿರುವವರು, ನಮ್ಮ ನಿಮಗಿಂತ ಸ್ವಲ್ಪ ಹೆಚ್ಚು ವಿಕಸಿತಗೊಂಡಿರುವವರು ಮತ್ತು ಈ ರೂಪಗಳನ್ನು ನೀವು ಪೂಜಿಸಬಹುದು. ನಿಮ್ಮ ಇಷ್ಟ ದೇವತೆಯ ಈ ಪೂಜೆಯು ನಿಮ್ಮ ಏಕಾಗ್ರತೆಗೆ ಮಾತ್ರ, ಕೃಷ್ಣನೆಂಬ ವ್ಯಕ್ತಿ ಇದ್ದಾನೆಂದಲ್ಲ. ಇದು ಮಾಯಾವಾದಿಗಳ ಹೇಳಿಕೆ.
ಗುರುವು ಸೀಮಿತವಾಗಿರುವುದರಿಂದ ನೀವು ಗುರುವಿನ ರೂಪದ ಆಚೆಗೆ ಹೋಗಬೇಕು ಎಂದೂ ಮಾಯಾವಾದಿಗಳು ಹೇಳುತ್ತಾರೆ. ವೈಷ್ಣವರಿಗೆ ಗುರುವು ಕೃಷ್ಣನ ಶಾಶ್ವತ ಸೇವಕರು ಮತ್ತು ಅವರು ಸದ್ಗುರುವಿನ ಮೂಲಕ ಶಾಶ್ವತವಾಗಿ ಕೃಷ್ಣನ ಸೇವೆ ಕೈಗೊಳ್ಳುವರು. ಶಂಕರರು ಅರ್ಥಮಾಡಿಕೊಂಡಿರುವಂತೆ ಬ್ರಹ್ಮನ್ ಆಗಿ ನೀವು ಶಕ್ತಿ ನೀಡಿದರೆ ಮಾತ್ರ ವಿಗ್ರಹಗಳಿಗೆ ಶಕ್ತಿ. ಆದರೆ ನಿಮ್ಮಿಂದ ವಿಗ್ರಹಗಳು ಹೆಚ್ಚು ಅಥವಾ ಕಡಮೆ ಶಕ್ತಿಹೊಂದುವುದಿಲ್ಲ. ನೀವು ವಿಗ್ರಹಗಳನ್ನು ಪ್ರೀತಿಸಿದರೆ ಅವು ಪ್ರತಿಯಾಗಿ ತೋರುತ್ತವೆ, ಏಕೆಂದರೆ ಅಲ್ಲಿ ಒಂದು ವ್ಯಕ್ತಿ ಇದೆ, ನಿಮ್ಮ ಸಂಕಲ್ಪದಿಂದ ಅಲ್ಲ. ಆತ್ಮಕ್ಕೆ ಮೂರು ಶಕ್ತಿಗಳಿವೆ – ಸತ್, ಚಿತ್ ಮತ್ತು ಆನಂದ. ಸತ್ ಎಂದರೆ ಅಸ್ತಿತ್ವ ರೂಪ, ಚಿತ್ ಎಂದರೆ ಆ ರೂಪಕ್ಕೆ ಜ್ಞಾನವಿದೆ ಮತ್ತು ಆನಂದ ಎಂದರೆ ಆ ರೂಪಕ್ಕೆ ಆನಂದವಿದೆ. ಇದು ಬ್ರಹ್ಮನ್ನ ಸ್ವಭಾವ, ಲಕ್ಷಣ. ಮಾಯಾವಾದಿಗಳ ಪ್ರಕಾರ, ಒಂದೇ ಆನಂದ ಇರುವುದು – ಬ್ರಹ್ಮನ್, ಬ್ರಹ್ಮಾನಂದ, ನಾನು ಅಸ್ತಿತ್ವದಲ್ಲಿರುವೆ.
ಆಧುನಿಕ ವಿಜ್ಞಾನಿಗಳು ಅನೇಕ ಸಿದ್ಧಾಂತಗಳನ್ನು ಸೃಷ್ಟಿಸುತ್ತಾ ಹೋಗುವರು. ಅನಂತರ ಅವರು ಅದನ್ನು ಬದಲಿಸುವರು ಮತ್ತು ವಿಜ್ಞಾನದ ಸುಧಾರಣೆ ಮಾಡುತ್ತಾ ಹೋಗುವರು. ಭಾಗವತದಲ್ಲಿ ಅದು ಸುಧಾರಣೆಯಾಗುತ್ತಾ ಹೋಗುವುದಿಲ್ಲ. ಅದು ಶಬ್ದ ಬ್ರಹ್ಮನ್, ಅದು ಪರಂಪರೆಯ ಮೂಲಕ ಕೃಷ್ಣನಿಂದ ಬರುತ್ತಿರುವುದು. ಪ್ರಭುಪಾದರು ವಿವರಿಸುತ್ತಾರೆ, ನೀವು ಇಂದ್ರಿಯಗಳ ಮೇಲೆ ಅವಲಂಬಿತರಾದರೆ ಅದು ಕಷ್ಟ. ನೀವು ಸೂರ್ಯನತ್ತ ನೋಡಿದರೆ, ಅದು ಚಕ್ರದಂತೆ ಅಥವಾ ತಟ್ಟೆಯಂತೆ ಕಾಣುತ್ತದೆ. ಆದರೆ ವಿದ್ಯಾವಂತರಾದ ನಿಮಗೆ ಅದು ಚಕ್ರವಲ್ಲ, ದೊಡ್ಡ ಬೆಂಕಿಯ ಚೆಂಡು ಎಂಬುವುದು ತಿಳಿದಿರುತ್ತದೆ.
ಭಾಗವತದಲ್ಲಿ ಉತ್ತರವಿದೆ

ಭಗವದ್ಗೀತೆಯಲ್ಲಿ ಕೃಷ್ಣ ಹೇಳುವುದು ಪರಿಶುದ್ಧ ಚಿತ್. ನಾನು ಯಾರು? ದೇವರು ಯಾರು? ಈ ಬದುಕು ಏನು? ಇವೆಲ್ಲವೂ ಭಾಗವತದಲ್ಲಿ ಇದೆ. ನಾನು ಅಂಶ. ನಾನು ಕೃಷ್ಣನ ಒಂದು ಭಾಗ. ಲೌಕಿಕ ಲೋಕದಲ್ಲಿ ಎಲ್ಲರೂ ಕೂಡ ನೋವು ತಡೆಗೆ ಅಥವಾ ಆನಂದಕ್ಕಾಗಿ ಶ್ರಮಿಸುತ್ತಿದ್ದಾರೆ. ಅದಕ್ಕೆ ತಡೆಯಾಗಬಾರದು. ಒಂದು ಸಣ್ಣ ಮಗುವಿನಂತೆ. ಮಗುವಿಗೆ ನೀವು ಐಸ್ ಕ್ರೀಂ ನೀಡಿದರೆ ಕೊನೆಯಲ್ಲಿ ಅದು ಮುಗಿದುಹೋಯಿತು ಎಂದು ಹೇಳುತ್ತದೆ. ಆತ್ಮದ ಪ್ರವೃತ್ತಿಯು ಅಸೀಮಿತ ಆನಂದ. ಐಹಿಕ ಲೋಕದಲ್ಲಿ ಪರಿಶುದ್ಧ ಆನಂದ, ನಿತ್ಯ ಆನಂದ, ತಡೆ ಇಲ್ಲದ ಆನಂದ ಎಂಬುದಿಲ್ಲ. ಲೌಕಿಕ ಜಗತ್ತಿನಲ್ಲಿ ಆನಂದದ ಅನಿತ್ಯ ಅನುಭವವಿರುತ್ತದೆ. ಸಿಹಿ ಅನ್ನವನ್ನು ಮರಳಿನಲ್ಲಿ ಮಿಶ್ರಣ ಮಾಡಿದಂತೆ ಅದು. ಈ ಐಹಿಕ ಲೋಕದ ಯಾವುದೇ ಬಾಂಧವ್ಯವು ನಮಗೆ ಆನಂದವನ್ನು ನೀಡಲಾರದು.
ಈ ಲೌಕಿಕ ಲೋಕದಲ್ಲಿ ಪ್ರೀತಿಯು ತಾತ್ಕಾಲಿಕ, ಎಲ್ಲವೂ ಸಾವಿನ ಸಮಯದಲ್ಲಿ ಅಂತ್ಯಗೊಳ್ಳುತ್ತದೆ. ಆಗ ನಿಮ್ಮ ಮನಸ್ಸು ಕೇಳುತ್ತದೆ, ಈ ಪ್ರೀತಿಯು ಎಷ್ಟು ಸುಂದರ, ಅಂತ್ಯಗೊಳ್ಳದಂತಹ ಶಾಶ್ವತ ಪ್ರೇಮವಿದೆಯೇ? ನಿಮ್ಮ ಆತ್ಮವನ್ನು ತೃಪ್ತಿಪಡಿಸುವಂತಹ ಶುದ್ಧ ಸತ್, ಚಿತ್ ಮತ್ತು ಆನಂದ ನಿಮಗೆ ಬೇಕಾಗಿದ್ದರೆ ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಿ. ಅದು ಅಂತಿಮವಾಗಿ ಭಗವಂತನ ಪರಿಶುದ್ಧ ಪ್ರೀತಿ ಇರುವ ಆಧ್ಯಾತ್ಮಿಕ ಲೋಕಕ್ಕೆ ಒಯ್ಯುವುದು. ಅದು ನಾವು ನಮ್ಮ ಹೃದಯದಲ್ಲಿ ಅಪೇಕ್ಷಿಸುತ್ತಿರುವ ಪರಿಪೂರ್ಣತೆ. ಕೃಷ್ಣನು ಸತ್ ಚಿತ್ ಆನಂದದ ಸಾಗರ. ಭಕ್ತಿ ಎಂದರೆ ನಿಜವಾದ ಆನಂದ. ಆ ಸತ್ ಚಿತ್ ಆನಂದ ಸಾಗರದಲ್ಲಿ ಹೇಗೆ ಮುಳುಗಿ ಶುದ್ಧಗೊಳಿಸಿಕೊಳ್ಳಬೇಕೆಂಬುದೇ ನಿಜವಾದ ಆನಂದ. ಪ್ರತಿ ದಿನ ಹರೇ ಕೃಷ್ಣ ಮಂತ್ರವನ್ನು ಲಕ್ಷ್ಯವಿಟ್ಟು ಕೇಳಿ ಮತ್ತು ಜಪಿಸಿ. ಪರಿಶುದ್ಧ ಸತ್ ಚಿತ್ ಆನಂದವು ನಿಮ್ಮ ಆತ್ಮಕ್ಕೆ ವರ್ಗಾವಣೆಗೊಳ್ಳುತ್ತದೆ. ಪ್ರಭುಪಾದರು ಒಂದು ಉದಾಹರಣೆ ನೀಡುತ್ತಾರೆ. ಒಂದು ಕಬ್ಬಿಣದ ತುಂಡನ್ನು ಬೆಂಕಿಯಲ್ಲಿ ಇಟ್ಟರೆ ಅದು ಶಾಖದ ವರ್ಗಾವಣೆಯಿಂದ ಕಾದ ಕೆಂಡದಂತಾಗುತ್ತದೆ, ಅದು ಬೆಂಕಿಯಾಗುತ್ತದೆ.
ಅವತರಿಸಿರುವ ಮಂತ್ರ

ಅದೇ ರೀತಿ ಈಗ ನಮ್ಮ ಸತ್ ಚಿತ್ ಆನಂದವು ಈ ದೇಹದಿಂದ ಮುಚ್ಚಲ್ಪಟ್ಟಿದೆ. ನಾವು ಶಾಖ ಪಡೆದುಕೊಳ್ಳಲು ಸತ್ ಚಿತ್ ಆನಂದದ ಬೆಂಕಿಯಲ್ಲಿ ಬೀಳಬೇಕಷ್ಟೇ. ಕಲಿಯುಗದಲ್ಲಿ ಈ ಸತ್ ಚಿತ್ ಆನಂದ ಸಾಗರವು ಹರೇ ಕೃಷ್ಣ ಮಹಾ ಮಂತ್ರವಾಗಿ ಅವತರಿಸಿದೆ. ನಿಮ್ಮ ನಾಲಿಗೆಯ ಮುಂದೆಯೇ ಆ ಸಾಗರವು ಬಂದಿದೆ. ಈಗ ನೀವು ಅದನ್ನು ಒಳಕ್ಕೆ ಬರಮಾಡಿಕೊಳ್ಳಬೇಕಷ್ಟೇ. ಆದುದರಿಂದ, ಹರೇ ಕೃಷ್ಣ ಮಂತ್ರವನ್ನು ಲಕ್ಷ್ಯವಿಟ್ಟು ಕೇಳಿಸಿಕೊಳ್ಳಿ. ಆಗ ನೀವು ನಿಮ್ಮ ಅನಂತತೆಯನ್ನು ಅನುಭವಿಸಲಾರಂಭಿಸುವಿರಿ. ಅದೇ ಮೊದಲ ಲಕ್ಷಣ. ನಾನು ಈ ದೇಹವಲ್ಲ, ನಾನು ಶಾಶ್ವತ, ಅನಂತರ ಶುದ್ಧ ಚಿತ್ ಬರುತ್ತದೆ. ಪ್ರತಿ ಬಾರಿ ನೀವು ಕೇಳಿದಾಗಲೂ ನೀವು ಶಬ್ದವನ್ನು, ಹರೇ ಕೃಷ್ಣ ಮಂತ್ರವನ್ನು ಕೇಳಬೇಕು. ನೀವು ನಿಮ್ಮ ಆತ್ಮವನ್ನು ಆ ಸತ್ ಚಿತ್ ಆನಂದ ಸಾಗರಕ್ಕೆ ಸಂಪರ್ಕಿಸುತ್ತಿರುವಿರಿ.






Leave a Reply