ಭೋರ್ಗರೆವ ಅಲೆಗಳಿಂದ ಸಾಗರವು ಪ್ರವಹಿಸುತ್ತಿತ್ತು. ವಿವಿಧ ಜಲಚರಗಳ ಆಶ್ರಯಸ್ಥಾನವೂ, ಹಲವು ನದಿಗಳ ಸಂಗಮಸ್ಥಾನವೂ ಆದ ಸಾಗರವು, ಪರಮಪ್ರಭುವಿನ ಒಂದು ವಿಭೂತಿಯೇ ಹೌದು! ಅಗಾಧ ಜಲರಾಶಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದ ಸಾಗರವು ಕೆಲವೊಮ್ಮೆ ಪ್ರಶಾಂತವಾಗಿಯೂ ಕೆಲವೊಮ್ಮೆ, ಬಿರುಗಾಳಿ ಮಳೆಗಳಿಂದ ಕೆರಳುತ್ತಲೂ ಇತ್ತು. ಆದರೆ ಇದಾವುದನ್ನೂ ಲೆಕ್ಕಿಸದೆ, ಮುನಿಗಳಂತೆ ಕಾಣುತ್ತಿದ್ದ ಹತ್ತು ಜನರು, ಈ ಸಾಗರ ಮಧ್ಯದಲ್ಲಿ ನಿಂತು ಉಗ್ರವಾದ ತಪಸ್ಸನ್ನಾಚರಿಸುತ್ತಿದ್ದರು! ಅವರು ಪ್ರಣವಸಹಿತವಾಗಿ ಪಠಿಸುತ್ತಿದ್ದ ಒಂದು ದಿವ್ಯಸ್ತುತಿ, ವೇದಘೋಷದಂತೆ ಕೇಳುತ್ತಾ ದಶದಿಕ್ಕುಗಳಲ್ಲೂ ಮಾರ್ದನಿಸುತ್ತಿತ್ತು! ಸಮುದ್ರದ ಅಲೆಗಳಂತೆ ಅವರ ವದನಗಳಿಂದ ಹೊರಡುತ್ತಿದ್ದ ಆ ದಿವ್ಯಸ್ತುತಿಯ ನಾದತರಂಗಗಳು ಅವರ ಮನಸ್ಸುಗಳನ್ನು ತಲ್ಲೀನಗೊಳಿಸಿ, ಹಸಿವು ನಿದ್ರೆಗಳ, ಹಗಲು ರಾತ್ರಿಗಳ ಪರಿವೆಯೇ ಇಲ್ಲದಂತೆ ಮಾಡಿದ್ದವು!

ಯಾರು ಆ ಹತ್ತು ಮುನಿಗಳು? ಏಕೆ ಇಂಥ ದುಷ್ಕರ ತಪವನ್ನಾಚರಿಸುತ್ತಿದ್ದರು? ಯಾವ ದಿವ್ಯ ಸ್ತುತಿಯನ್ನು ಅವರು ಹಾಡುತ್ತಿದ್ದರು? ಯಾರನ್ನು ಕುರಿತು ಸ್ತುತಿಸುತ್ತಿದ್ದರು?
ನೋಡಲು ಮುನಿಗಳಂತೆ ಕಾಣುತ್ತಿದ್ದರೂ ಅವರು ಮುನಿಗಳಾಗಿರದೆ ರಾಜಪುತ್ರರಾಗಿದ್ದರು. ಪ್ರಾಚೀನಬರ್ಹಿಯೆಂಬ ರಾಜನ ಹತ್ತು ಮಕ್ಕಳು ಅವರು. ಅವರೆಲ್ಲರನ್ನೂ ಪ್ರಚೇತಸರೆಂದು ಕರೆಯುತ್ತಿದ್ದರು.
ಸೃಷ್ಟಿಕರ್ತನಾದ ಬ್ರಹ್ಮನು ಜಗತ್ಸೃಷ್ಟಿ ಮಾಡಿದಾಗ ಸ್ವಾಯಂಭುವ ಮನು ಮತ್ತು ಶತರೂಪೆಯರನ್ನು ಸೃಷ್ಟಿಸಿದನು. ಇವರ ಪುತ್ರನಾದ ಉತ್ತಾನಪಾದನ ಮಗ, ಭಕ್ತಶ್ರೇಷ್ಠ ಧ್ರುವನ ವಂಶದಲ್ಲಿ ಆದಿರಾಜನೆಂದು ಖ್ಯಾತನಾದ ಪೃಥುವು ಜನಿಸಿದನು. ಈ ಪೃಥುವಿನ ವಂಶದಲ್ಲಿ ಬರ್ಹಿಷತ್ ಎಂಬ ರಾಜನು ಹುಟ್ಟಿದನು. ಈ ರಾಜನು ಕಾಮ್ಯಕರ್ಮಗಳ ಆಚರಣೆಯಲ್ಲೂ ಯೋಗಾಭ್ಯಾಸದಲ್ಲೂ ನಿಷ್ಣಾತನಾಗಿದ್ದನು. ಪ್ರಜಾಪತಿಯ ಸ್ಥಾನವನ್ನು ಪಡೆದ ಇವನು, ಭೂಮಂಡಲದಲ್ಲೆಲ್ಲಾ ಅನೇಕ ಯಜ್ಞಗಳನ್ನಾಚರಿಸಿ ಕುಶಗಳೆಂಬ ದರ್ಭೆಗಳನ್ನು ಪೂರ್ವಾಗ್ರಹವಾಗಿ ಹರಡಿ ಬಿಟ್ಟನು. ಇದರಿಂದ ಇವನಿಗೆ ಪ್ರಾಚೀನಬರ್ಹಿ ಎಂಬ ಹೆಸರಾಯಿತು. ಇವನು ಬ್ರಹ್ಮನ ಅಪ್ಪಣೆಯಂತೆ, ಸಮುದ್ರರಾಜನ ಮಗಳಾದ ಶತದ್ರುತಿಯೆಂಬ ಅಪೂರ್ವ ಸುಂದರಿಯನ್ನು ವರಿಸಿದನು. ಇವಳು ಎಂಥ ಲಾವಣ್ಯವತಿಯೆಂದರೆ, ಇವಳ ವಿವಾಹದ ಸಮಯದಲ್ಲಿ, ಇವಳನ್ನು ನೋಡಿದೊಡನೆಯೇ ದೇವಾಸುರ ಯಕ್ಷಗಂಧರ್ವ ಕಿನ್ನರರಲ್ಲದೆ, ಸ್ವಯಂ ಅಗ್ನಿಯೇ ಇವಳ ಸೌಂದರ್ಯಕ್ಕೆ ಮರುಳಾದನು! ಇಂಥ ಸುಂದರ ಪತ್ನಿಯಲ್ಲಿ ಪ್ರಾಚೀನ ಬರ್ಹಿಯು ಹತ್ತು ಪುತ್ರರನ್ನು ಪಡೆದನು. ಸಮಾನ ಧರ್ಮವುಳ್ಳವರಾಗಿದ್ದ ಅವರೇ ಪ್ರಚೇತಸರು.
“ಪ್ರಜಾಸೃಷ್ಟಿಯನ್ನು ಮಾಡಿ!” ಎಂದು ಪ್ರಾಚೀನ ಬರ್ಹಿಯು ಅವರಿಗೆ ಆಜ್ಞೆ ಮಾಡಿದನು. ಸೃಷ್ಟಿ ರಹಸ್ಯವನ್ನರಿಯಲು ಅವರೆಲ್ಲರೂ ತಪಸ್ಸನ್ನಾಚರಿಸಲು ಪಶ್ಚಿಮ ದಿಕ್ಕಿಗೆ ಹೊರಟರು. ಆಗ ಅವರು, ಸಮುದ್ರಕ್ಕೆ ಸಮೀಪದಲ್ಲಿದ್ದ ಒಂದು ವಿಶಾಲ ಸರೋವರವನ್ನು ಕಂಡರು. ಸಜ್ಜನರ ಮನಸ್ಸಿನಂತೆ ನಿರ್ಮಲವಾದ ನೀರನ್ನುಳ್ಳ ಆ ಸರೋವರದಲ್ಲಿ, ಕೆಂದಾವರೆಗಳೂ, ಕನ್ನೈದಿಲೆಗಳೂ ಸುಂದರವಾಗಿ ಅರಳಿದ್ದವು. ಅವುಗಳ ಪರಾಗವು ಗಾಳಿಯಲ್ಲಿ ಹರಡಿ ಎಲ್ಲೆಲ್ಲೂ ಸುಗಂಧವನ್ನು ಪಸರಿಸುತ್ತಿತ್ತು. ಆ ಸುಗಂಧದಿಂದ ಆಕರ್ಷಿತವಾದ ಭ್ರಮರ ಸಮೂಹವು ಝೇಂಕರಿಸುತ್ತಾ ಮಕರಂದವನ್ನು ಪಾನಮಾಡುತ್ತಿತ್ತು. ಆ ತಿಳಿನೀರ ಸರೋವರದಲ್ಲಿ ಹಂಸ-ಸಾರಸಕಾರಂಡವ ಚಕ್ರವಾಕ ಪಕ್ಷಿಗಳು ಜಲಕೇಳಿಯಾಡುತ್ತಾ ನಲಿನಲಿದಾಡುತ್ತಿದ್ದವು. ಸರೋವರದ ಸನಿಹವಿದ್ದ ತರುಲತೆಗಳು ರಮಣೀಯವಾಗಿದ್ದವು. ಬಹು ಪ್ರಶಾಂತವಾಗಿದ್ದ ಆ ಪ್ರದೇಶ, ಕಂಗಳಿಗೆ ಹಬ್ಬವನ್ನುಂಟು ಮಾಡುತ್ತಿತ್ತು.
ಆಗ ಅಲ್ಲಿ ಮೃದಂಗ ಪಣವಗಳ ದಿವ್ಯನಾದದೊಂದಿಗೆ, ಮಧುರವಾದ ಗಂಧರ್ವಗಾನ ಕೇಳಿಬಂದಿತು! ಪ್ರಚೇತಸರು ವಿಸ್ಮಿತರಾಗಿ ನೋಡುತ್ತಿರಲು, ಅನುಚರರಿಂದ ಸ್ತುತಿಸಲ್ಪಡುತ್ತಾ ನೀಲಕಂಠನೂ, ತ್ರಿಲೋಚನನೂ, ದೇವತೆಗಳಲ್ಲಿ ಶ್ರೇಷ್ಠನೂ, ಆದ ಪರಶಿವನು ನೀರಿನಿಂದ ಪ್ರತ್ಯಕ್ಷನಾದನು!
ಮಹಾದೇವನಾದ ಶಿವನು ಆತ್ಮಾರಾಮನು. ಸತತವಾಗಿ ಘೋರ ಶಕ್ತಿಗಳಿಂದೊಡಗೂಡಿ ಸಂಚರಿಸುವ ಅವನ ದರ್ಶನವು ಮಹಾಮುನಿಗಳಿಗೂ ಅತಿದುರ್ಲಭವಾದುದು. ಇನ್ನು ಸಾಮಾನ್ಯ ಜನರ ವಿಷಯವೇನು!?
ಆದರೆ ಅಂಥ ಪರಮೇಶ್ವರನು ಪ್ರಚೇತಸರಿಗೆ ಕರುಣೆ ತೋರಲೆಂದು ಪ್ರತ್ಯಕ್ಷನಾದನು. ಅವನ ದೇಹವು ಹೊನ್ನಿನ ಕಾಂತಿಯಿಂದ ಕೂಡಿದ್ದು, ಅವನ ಮುಖವು ಕರುಣಾಮಯವಾಗಿತ್ತು. ಅವನ ದರ್ಶನವಾದ ಕೂಡಲೇ ಪ್ರಚೇತಸರು ಅವನಿಗೆ ಸಾಷ್ಟಾಂಗವೆರಗಿದರು.

ಧರ್ಮಜ್ಞರಲ್ಲಿ ಬಹಳ ಪ್ರೀತಿಯುಳ್ಳ ಶಿವನು ಅವರ ಪ್ರಣಾಮಗಳಿಂದ ಸಂತುಷ್ಟನಾಗಿ ಹೇಳಿದನು, “ರಾಜಪುತ್ರರೇ! ನೀವು ಪ್ರಾಚೀನಬರ್ಹಿಯ ಮಕ್ಕಳೆಂದು ನಾನು ಬಲ್ಲೆ. ಅಂತೆಯೇ ನೀವೀಗ ಯಾವ ಕಾರ್ಯಾರ್ಥವಾಗಿ ಹೊರಟಿರುವಿರೆಂಬುದನ್ನೂ ನಾನು ಬಲ್ಲೆ. ನಿಮ್ಮನ್ನು ಅನುಗ್ರಹಿಸಲೆಂದೇ ನಿಮ್ಮ ಮುಂದೆ ನಾನೀಗ ಪ್ರತ್ಯಕ್ಷನಾಗಿರುವೆ. ಯಾರು ಜೀವಜಡಗಳೆರಡಕ್ಕೂ ನಿಯಾಮಕನಾದ ವಾಸುದೇವನಿಗೆ ಭಕ್ತರಾಗಿರುವರೋ ಅವರು ನನಗೆ ಅತ್ಯಂತ ಪ್ರಿಯರು. ಯಾರು ನೂರು ಜನ್ಮಗಳವರೆಗೆ ಸ್ವಧರ್ಮನಿಷ್ಠರಾಗಿರುವರೋ ಅವರು ಬ್ರಹ್ಮಲೋಕವನ್ನು ತಲಪಲು ಅರ್ಹರಾಗುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಅರ್ಹತೆಯುಳ್ಳವರು ನನ್ನ ಲೋಕ ಪಡೆಯುತ್ತಾರೆ. ಆದರೆ ನಾನೂ ದೇವತೆಗಳೂ ಯಾವ ಪರಮಪದವನ್ನು ಪ್ರಳಯದ ಬಳಿಕ ಸೇರುವೆವೋ, ಅಂತಹ ವಿಷ್ಣುಪದವನ್ನು ಭಾಗವತರು ಬಹುಬೇಗನೇ ತಲಪುತ್ತಾರೆ. ಆದ್ದರಿಂದಲೇ ನಿಮ್ಮಂತಹ ಭಾಗವತರಲ್ಲಿ ನನಗೆ ಭಗವಂತನಲ್ಲಿರುವಷ್ಟೇ ಪ್ರೀತಿ. ನನಗೆ ಭಾಗವತರಿಗಿಂತಲೂ ಪ್ರಿಯರಾದವರು ಯಾರೂ ಇಲ್ಲ.
“ಪ್ರಚೇತಸರೇ, ನಾನು ನಿಮಗೆ ಪವಿತ್ರವೂ ಪರಮಮಂಗಳಕರವೂ ಆದ ಒಂದು ಮಂತ್ರವನ್ನು ಉಪದೇಶಿಸುತ್ತೇನೆ. ಇದು ಪರಮ ಶ್ರೇಯಸ್ಸನ್ನುಂಟುಮಾಡುತ್ತದೆ. ಶ್ರದ್ಧೆಯಿಂದ ಅದನ್ನು ಕೇಳಿ.”
ಹೀಗೆ ಹೇಳಿದ ಭಗವಾನ್ ಶಿವನು, ಶ್ರೀಮನ್ನಾರಾಯಣನಲ್ಲಿ ಭಕ್ತಿಯನ್ನುಂಟು ಮಾಡುವ ಒಂದು ದಿವ್ಯಸ್ತೋತ್ರವನ್ನು ಪ್ರಚೇತಸರಿಗೆ ಉಪದೇಶಿಸಿದನು. ರುದ್ರನು ಹಾಡಿದ ಈ ಸ್ತುತಿಯೇ ರುದ್ರಗೀತೆ.
“ಪರಮಾತ್ಮನೇ! ನಿನಗೆ ಜಯವಾಗಲಿ! ಆತ್ಮಜ್ಞರಲ್ಲಿ ಶ್ರೇಷ್ಠನಾದ ಓ ದೇವದೇವನೇ, ಆತ್ಮಜ್ಞಾನಿಗಳಿಗೆ ಸದಾ ಶ್ರೇಯಸ್ಸನ್ನುಂಟು ಮಾಡುವ ನೀನು ನನಗೂ ಶ್ರೇಯಸ್ಸನ್ನುಂಟುಮಾಡು. ಪಂಕಜನಾಭ! ವಾಸುದೇವ! ಪಂಚಭೂತಗಳಿಗೂ, ಇಂದ್ರಿಯಗಳಿಗೂ ನಿಯಾಮಕನಾದ, ಶಾಂತನೂ, ವಿಕಾರಹೊಂದದವನೂ, ಸ್ವಯಂಪ್ರಕಾಶನೂ ಆದ ನಿನಗೆ ನಮೋ ನಮಃ!”
“ಸಂಕರ್ಷಣರೂಪಿಯೇ! ಮನಸ್ಸು, ಬುದ್ಧಿ, ಅಹಂಕಾರಗಳೆಂಬ ಸೂಕ್ಷ್ಮ ಭೌತಿಕ ಅಂಶಗಳಿಗೆ ಒಡೆಯನೂ ವಿಶ್ವದ ಪ್ರಳಯವನ್ನು ಮಾಡುವವನೂ ಆದ ನಿನಗೆ ನಮಸ್ಕಾರ!”
“ಪ್ರದ್ಯುಮ್ನರೂಪಿಯೇ! ಸಕಲ ಜೀವಿಗಳ ಅಂತರಾತ್ಮನೂ ವಿಶ್ವವು ಅಭಿವ್ಯಕ್ತಗೊಳ್ಳಲು ಕಾರಣನೂ ಆದ ನಿನಗೆ ನನ್ನ ನಮಸ್ಕಾರ!”
“ಅನಿರುದ್ಧರೂಪಿಯೇ! ಪರಮಹಂಸನೂ, ಪರಿಪೂರ್ಣನೂ, ಅಪ್ರಾಕೃತನೂ, ಮನಸ್ಸು ಇಂದ್ರಿಯಗಳ ನಿರ್ದೇಶಕನೂ ಆದ ನಿನಗೆ ನಮೋ ನಮಃ!”
ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ದೇವೋತ್ತಮ ಪರಮ ಪುರುಷನು ತನ್ನನ್ನು ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧರೆಂಬ ನಾಲ್ಕು ರೂಪಗಳಲ್ಲಿ ವಿಸ್ತರಿಸಿಕೊಳ್ಳುತ್ತಾನೆ. ಇದಕ್ಕೆ ಚತುರ್ವ್ಯೂಹವೆಂದು ಹೆಸರು. ಶಿವನು ಈ ಚತುವ್ಯೂರ್ಹವನ್ನು ಸ್ತುತಿಸಿದನು.
“ಸ್ವರ್ಗಮೋಕ್ಷಗಳೆರಡಕ್ಕೂ ದಾರಿ ತೋರುವವನೂ, ನಿತ್ಯನೂ, ಪರಮಪವಿತ್ರನೂ ಆದ ನಿನಗೆ ನಮಸ್ಕಾರ. ಚಿನ್ನದಂಥ ವೀರ್ಯವನ್ನು ಪಡೆದಿರುವ ನೀನು, ಅಗ್ನಿಯ ರೂಪದಲ್ಲಿ ಚಾತುಹೋತ್ರವೇ ಮೊದಲಾದ ಎಲ್ಲ ಯಜ್ಞಗಳನ್ನೂ ನಡೆಸುವೆ. ಪಿತೃಲೋಕಗಳಿಗೂ ದೇವತೆಗಳಿಗೂ ಶಕ್ತಿದಾಯಕನಾದ ನೀನು ಚಂದ್ರನಿಗೆ ಅಧಿದೇವತೆ. ಮೂರು ವೇದಗಳ ಒಡೆಯನೂ ಸಕಲ ಜೀವಿಗಳಿಗೆ ಮೂಲ ತೃಪ್ತಿದಾಯಕನೂ ಆದ ನಿನಗೆ ನನ್ನ ನಮಸ್ಕಾರ. ಜೀವಿಗಳ ಶರೀರಗಳನ್ನೊಳಗೊಂಡಿರುವ ವಿಶ್ವರೂಪವಾಗಿರುವ ನೀನು ಮೂರು ಲೋಕಗಳಿಗೂ ಜೀವಿಗಳ ಮನಸ್ಸು, ಇಂದ್ರಿಯಗಳು, ದೇಹ ಮತ್ತು ಪ್ರಾಣವಾಯುವಿಗೆ ಪಾಲಕನಾಗಿರುವೆ. ಶಬ್ದ ಬ್ರಹ್ಮ ಅಥವಾ ವೇದಗಳ ಮೂಲಕ ನೀನು ಎಲ್ಲದರ ಗೂಡಾರ್ಥವನ್ನು ಗೋಚರಿಸುತ್ತಿರುವೆ. ಒಳಗೂ ಹೊರಗೂ ತುಂಬಿರುವ ಆಕಾಶವಾಗಿರುವೆ. ಸಕಲ ಪುಣ್ಯಕಾರ್ಯಗಳ ಅಂತಿಮ ಗುರಿಯಾಗಿರುವ ನಿನಗೆ ನಮಸ್ಕಾರ.”
“ಪರಮ ಪ್ರಭು! ಪ್ರವೃತ್ತಿಯೂ ನೀನೇ, ನಿವೃತ್ತಿಯೂ ನೀನೇ ಮತ್ತು ಅದರ ಕಾರ್ಯಗಳೂ ನೀನೇ. ಪುಣ್ಯಕರ್ಮಗಳ ಸಾಕ್ಷಿಯು ನೀನೇ. ಅಂತೆಯೇ, ಅಧರ್ಮ ಕಾರ್ಯಗಳಿಗೆ ದುಃಖದಾಯಕ ಫಲಗಳನ್ನು ನೀಡುವವನೂ, ಮೃತ್ಯುವೂ ನೀನೇ!”
“ಅನುಗ್ರಹಿಸುವವರಲ್ಲಿ ಶ್ರೇಷ್ಠನಾದವನೇ, ಪರಮಭೋಕ್ತೃವೇ, ಸಕಲ ಕಾರಣಗಳಿಗೂ ಕಾರಣನೇ, ಪರಮೋನ್ನತ ಧರ್ಮತತ್ತ್ವವೇ, ಎಂದೆಂದಿಗೂ ನಿನ್ನ ದಿವ್ಯಸ್ಥಿತಿಯಿಂದ ವಿಚಲಿತನಾಗದ ಶ್ರೀಕೃಷ್ಣನೇ, ಪುರಾಣ ಪುರುಷನೇ, ಯೋಗೇಶ್ವರನೇ, ಸಾಂಖ್ಯದರ್ಶನ ಪ್ರತಿಪಾದಕನೇ, ನಿನಗೆ ನನ್ನ ಭಕ್ತಿಯುತ ನಮಸ್ಕಾರ. ಪ್ರಭು, ನೀನೇ ಕರ್ತನು. ಇಂದ್ರಿಯ ಕ್ರಿಯೆಗಳ ಹಾಗೂ ಅವುಗಳ ಫಲಗಳ ನಿಯಾಮಕನು ನೀನೇ! ದೇಹ, ಮನಸ್ಸು, ಇಂದ್ರಿಯಗಳ ನಿಯಾಮಕನಾದ ನೀನು ಅಹಂಕಾರದ ಅಧಿದೇವತೆಯಾದ ರುದ್ರನಿಗೂ ನಿಯಾಮಕನು! ಜ್ಞಾನಕರ್ಮಗಳೆರಡಕ್ಕೂ ನಿಯಾಮಕನು!”
“ಹೇ ಭಗವಂತನೇ! ನಿನ್ನ ಪರಮ ಭಕ್ತರು ಅರ್ಚಿಸುವ ನಿನ್ನ ಮಂಗಳಮಯ ದಿವ್ಯ ರೂಪವನ್ನು ನಮಗೆ ತೋರಿಸು. ಸರ್ವೇಂದ್ರಿಯಗಳಿಗೂ ಆಹ್ಲಾದವುಂಟುಮಾಡುವ ಆ ಸುಂದರತಮ ರೂಪವನ್ನು ನಾವು ನೋಡಬಯಸುವೆವು.”
ದೇವವರೇಣ್ಯನಾದ ಶಿವನು ಪರಮ ವೈಷ್ಣವನೆಂದು ನಿರೂಪಿತನಾಗಿದ್ದಾನೆ (ವೈಷ್ಣವಾನಾಂ ಯಥಾ ಶಂಭುಃ). ಭಕ್ತರ ಮನೋಭೀಷ್ಟಗಳನ್ನೀಡೇರಿಸುವ ಅವನು, ಭಕ್ತಿಯನ್ನು ಉದ್ದೀಪನಗೊಳಿಸುವ ಭಾಗವತ ಪ್ರಿಯನೂ ಜಗದ್ಗುರುವೂ ಹೌದು. ಪ್ರಚೇತಸರ ಮನಸ್ಸಿನಲ್ಲಿ ಭಕ್ತಿಯು ಮೂಡಲೆಂದು ಅವನು ಭಗವಂತನ ದಿವ್ಯರೂಪವನ್ನು ವರ್ಣಿಸತೊಡಗಿದನು.
“ಭಗವಂತನ ತನುವು ಮಳೆಗಾಲದ ಕಪ್ಪು ಮೋಡದಂತೆ ಬಹು ಸುಂದರವಾಗಿದೆ. ಮಳೆಯ ನೀರು ತಳತಳಿಸುವಂತೆ ಅವನ ತನುವಿನ ಲಕ್ಷಣಗಳು ತಳತಳಿಸುತ್ತಿದೆ. ನಿಜವಾಗಿಯೂ ಆತ ಸಕಲ ಸೌಂದರ್ಯಗಳ ಆಗರ. ಆತನಿಗೆ ಸುಂದರವಾದ ನಾಲ್ಕು ತೋಳುಗಳಿವೆ. ಕಮಲದ ಹೂವಿನ ಎಸಳಂತಿರುವ ಕಣ್ಣುಗಳನ್ನು ಉಳ್ಳ ಅತಿ ಸುಂದರವಾದ ಮುಖ. ಸುಂದರವಾದ ಎತ್ತರವಾದ ಮೂಗು. ಮನಸೆಳೆಯುವ ನಗೆ. ಸುಂದರವಾದ ಹಣೆ ಮತ್ತು ಅಷ್ಟೇ ಸುಂದರವಾಗಿ ಸಂಪೂರ್ಣವಾಗಿ ಅಲಂಕೃತವಾದ ಕಿವಿಗಳು. ಮುದ್ದಾದ ಕೆನ್ನೆಗಳು, ಸೊಗಸಾದ ಚತುರ್ಬಾಹುಗಳಿರುವ ಅವನ ದಿವ್ಯರೂಪ, ಸದಾ ಕಂಗೊಳಿಸುತ್ತಿರುತ್ತದೆ. ಪ್ರೀತಿಯಿಂದ ಕೂಡಿರುವ ಅವನ ಕಟಾಕ್ಷವೀಕ್ಷಣದಿಂದಲೂ, ಕರುಣಾಪೂರ್ಣ ಮುಗುಳ್ನಗೆಯಿಂದಲೂ ಅವನ ರೂಪ ಶೋಭಿಸುತ್ತದೆ. ಗಾಳಿಯಲ್ಲಿ ತೇಲಾಡುವ ಅವನ ಪೀತಾಂಬರವು, ಕಮಲಪುಷ್ಪದ ಕೇಸರದಂತೆ ಬಹಳ ಸೊಗಸಾಗಿದೆ. ತಳತಳಿಸುವ ಕುಂಡಲಗಳು, ಅವನ ಸುಂದರ ಕಿರೀಟ, ಕೈಬಳೆಗಳು, ಹಾರ, ನೂಪುರ, ಡಾಬುಗಳು ಬಹಳ ಸುಂದರವಾಗಿವೆ. ಶಂಖಚಕ್ರಗದಾಪದ್ಮಗಳು ಅವನ ಚತುರ್ಬಾಹುಗಳಲ್ಲಿ ಮೆರೆಯುತ್ತಿರುತ್ತವೆ. ಅಂತೆಯೇ ಉತ್ತಮ ಮಣಿಗಳನ್ನು ಪೋಣಿಸಲಾಗಿರುವ ಭವ್ಯ ಮೂಲಾಭರಣಗಳೂ, ದಿವ್ಯ ಕೌಸ್ತುಭ ಮಣಿಯೂ ಅವನ ಕೊರಳಿನಲ್ಲಿ ಶೋಭಿಸುತ್ತವೆ. ಸಿಂಹಸ್ಕಂಧಗಳಂತಿರುವ ಅವನ ಹೆಗಲುಗಳ ಮೇಲೆ ಸುವರ್ಣಮಾಲೆಗಳೂ, ಭುಜಕೀರ್ತಿಗಳೂ ಶೋಭಿಸುತ್ತವೆ. ಅವನ ಸುಂದರ, ವಿಶಾಲ ವಕ್ಷಸ್ಥಳದಲ್ಲಿ ಶ್ರೀವತ್ಸವೆಂಬ ರೇಖೆಯಿದೆ. ಇದರ ಹೊಳಪು ಸುವರ್ಣನಿಕಷವನ್ನೂ ಧಿಕ್ಕರಿಸುತ್ತದೆ.”
“ಭಗವಂತನು ಉಚ್ಛ್ವಾಸ-ನಿಶ್ವಾಸ ಮಾಡುವಾಗ, ವಟಪತ್ರದಂತೆ ಮೃದುವಾಗಿರುವ ಅವನ ಸುಂದರ ಉದರದ ಮೇಲೆ ತ್ರಿವಳಿಗಳು ಮೂಡಿ ಅದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ನದಿಯ ಸುಳಿಯಂತೆ ಆಳವಾಗಿರುವ ಅವನ ಸುಂದರ ನಾಭಿಯಿಂದ ಸಮಸ್ತ ವಿಶ್ವವೂ ಹೊರಹೊಮ್ಮಿ ಒಳಹೋಗಲು ಇಚ್ಛಿಸುವಂತೆ ಕಾಣುತ್ತದೆ. ಅವನ ಶ್ಯಾಮಲ ವರ್ಣದ ನಡುವು ಪೀತಾಂಬರದಿಂದಲೂ, ಹೊನ್ನಿನ ಮೇಖಲೆಯಿಂದಲೂ ಆವೃತವಾಗಿದೆ. ಅವನ ಅಂಘ್ರಿಯುಗ್ಮಗಳೂ, ಜೆಂಜಾನೂರುಗಳೂ ಸುಮನೋಹರವಾಗಿವೆ. ನಿಜವಾಗಿಯೂ ಭಗವಂತನ ತನು ಸುಂದರವಾಗಿ ನಿರ್ಮಿತವಾಗಿದೆ. ಭಗವಂತನ ಪಾದಗಳು ಶರತ್ಕಾಲದ ಸರೋವರದಲ್ಲಿ ಅರಳಿರುವ ಸುಂದರ ಕಮಲಗಳ ದಳಗಳಂತೆ ಶೋಭಿಸುತ್ತವೆ. ಅವನ ಪಾದಗಳ ನಖಮಣಿಗಳ ಅನುಪಮ ಕಾಂತಿಯು ನಮ್ಮ ಪಾಪಗಳೆಂಬ ಕತ್ತಲನ್ನು ಒಮ್ಮೆಲೇ ನಿವಾರಿಸುತ್ತದೆ.”
“ಆತ್ಮಶುದ್ಧಿಯನ್ನು ಬಯಸುವವರೂ, ಸ್ವಧರ್ಮವನ್ನಾಚರಿಸುವವರೂ, ಭಗವಂತನ ಇಂಥ ದಿವ್ಯ ಸುಂದರ ರೂಪವನ್ನು ಧ್ಯಾನಿಸಬೇಕು. ಅಭಯಪ್ರದವಾದ ಇಂಥ ಭಕ್ತಿಯೋಗವನ್ನಾಶ್ರಯಿಸಬೇಕು.”
ಯೋಗವೆಂದರೆ, ಭಗವಂತನೊಡನೆ ನಮಗಿರುವ ಸಂಬಂಧವನ್ನು ಪುನಃ ಸ್ಥಾಪನೆಗೊಳಿಸುವುದು. ಜೀವಿಗಳಾದ ನಾವೆಲ್ಲರೂ ನಿಜವಾಗಿ ಭಗವಂತನ ಅಂಶಗಳು. ಆದರೆ ಇದನ್ನು ಮರೆತು ನಾವು ಭೌತಿಕ ಪ್ರಕೃತಿಯೊಡನೆ ಸಂಬಂಧ ಕಲ್ಪಿಸಿಕೊಳ್ಳುತ್ತೇವೆ. ಭಗವಂತನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದೇ ಎಲ್ಲ ಆಧ್ಯಾತ್ಮಿಕ ಆಚಾರಗಳ ಹಿಂದಿನ ಗುರಿ. ಆದ್ದರಿಂದ ಧ್ಯಾನವೆಂದರೆ, ಭಗವಂತನ ಸುಂದರ ರೂಪವನ್ನು ಮನನ ಮಾಡುವುದು. ಇದನ್ನು ಇಲ್ಲಿ ಧ್ಯಾನಿಗಳಲ್ಲೇ ಶ್ರೇಷ್ಠನಾದ ಶಿವನೇ ದೃಢೀಕರಿಸುತ್ತಿದ್ದಾನೆ.
ಭಗವಂತನ ಸುಂದರ ರೂಪವನ್ನು ವರ್ಣಿಸಿದ ಶಿವನು ಪುನಃ ಅವನನ್ನು ಸ್ತುತಿಸುತ್ತಾನೆ,
“ಹೇ ಪ್ರಭು! ಎಲ್ಲ ದೇಹಿಗಳಿಗೂ ಬಹು ದುರ್ಲಭನಾದ ನೀನು ಭಕ್ತಿಯಿಂದ ಮಾತ್ರ ಲಭ್ಯನು! ಸ್ವರ್ಗಾಧಿಪತಿಗಾಗಲೀ, ಸಾಧು ಸತ್ಪುರುಷರಿಗೂ ಇತರ ಆಧ್ಯಾತ್ಮಿಕ ಮಾರ್ಗಗಳಿಂದ ಪಡೆಯಲು ಕಷ್ಟವಾಗಿರುವ ನಿನ್ನನ್ನು ಅನನ್ಯಭಕ್ತಿಯಿಂದ ಆರಾಧಿಸಿದ ಯಾವನು ತಾನೇ ನಿನ್ನ ಪಾದಪದ್ಮಗಳ ಹೊರತಾಗಿ ಬೇರೇನನ್ನಾದರೂ ಆಶಿಸಿಯಾನು? ಯಾವ ಕಾಲ ಪುರುಷನು ಕೇವಲ ತನ್ನ ಹುಬ್ಬುಗಳನ್ನಾಡಿಸುವುದರಿಂದಷ್ಟೇ ಇಡಿಯ ವಿಶ್ವವನ್ನೇ ಧ್ವಂಸಗೊಳಿಸಬಲ್ಲನೋ, ಅಂಥವನು ನಿನ್ನ ಭಕ್ತನ ಬಳಿ ಬರುವುದಿಲ್ಲ! ಹೇ ಪ್ರಭು, ಅಂಥ ಭಕ್ತರ ಕ್ಷಣಾರ್ಧದಷ್ಟು ಹೊತ್ತಿನ ಸಂಗವನ್ನೂ ನಾನು ಸ್ವರ್ಗ ಅಥವಾ ಮೋಕ್ಷದೊಂದಿಗೆ ಹೋಲಿಸಲಾರೆ! ಇಂಥ ಭಕ್ತಜನರ ಸಂಗವಲ್ಲದೆ ಮನುಷ್ಯರಿಗೆ ಇನ್ನೇನು ತಾನೇ ಬೇಕು? ಅಂಥ ಭಕ್ತರು ಪಾಪಗಳನ್ನು ತೊಡೆದು ಹಾಕುವ ನಿನ್ನ ಪಾದಪದ್ಮಗಳ ಹಾಗೂ ನಿನ್ನ ಕೀರ್ತಿಯೆಂಬ ಪವಿತ್ರತೀರ್ಥದಲ್ಲಿ ಮಿಂದು ಬಾಹ್ಯಾಂತರಗಳೆರಡರಲ್ಲೂ ಶುದ್ಧರಾಗಿರುತ್ತಾರೆ. ಸಕಲ ಜೀವಿಗಳಲ್ಲಿಯೂ ಅನುಗ್ರಹವನ್ನು ತೋರುವ ಅಂತಹ ಸತ್ವಶಾಲಿಗಳ, ಭಕ್ತರ ಸಂಗವು ಸದಾ ನನಗೆ ದೊರೆಯಲಿ ಎಂದು ಪ್ರಾರ್ಥಿಸುವೆ. ಅಂತಹ ಶುದ್ಧ ಭಕ್ತರ ಮನಸ್ಸು ತಮಸ್ಸೆಂಬ ಅಂಧಕಾರದಿಂದ ದೂರವಾಗಿರುವುದರಿಂದ ಮಾಯೆಯ ಭ್ರಾಂತಿಗೆ ಒಳಗಾಗುವುದಿಲ್ಲ. ಭಕ್ತಿಯೋಗದಿಂದ ಅನುಗ್ರಹಿಸಲ್ಪಟ್ಟ ಅವರು, ನಿನ್ನ ದಿವ್ಯ ಲೀಲೆಗಳ ಮರ್ಮವನ್ನು ಗ್ರಹಿಸಬಲ್ಲವರಾಗುತ್ತಾರೆ.”
ಶಿವನು ಇಲ್ಲಿ ಭಕ್ತಿಯ ಹಾಗೂ ಭಕ್ತರ ಮಹಿಮೆಯನ್ನು ಒತ್ತಿ ಹೇಳುವನು. ಭಗವಂತನ ಕರುಣೆಯಿಲ್ಲದೇ ಅವನನ್ನು ಅರಿಯುವುದಾಗಲೀ, ಅವನನ್ನು ಪಡೆಯುವುದಾಗಲೀ ಸಾಧ್ಯವಿಲ್ಲ. ಕರ್ಮಯೋಗ, ಜ್ಞಾನಯೋಗಗಳಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ ಭಕ್ತಿಯಿಲ್ಲದಿದ್ದರೆ ಆಧ್ಯಾತ್ಮಿಕವಾಗಿ ಮುಂದುವರಿಯುವುದು ಕಷ್ಟ. ಅವನ ಕರುಣೆ ಪಡೆಯಲು ಭಕ್ತಿಸೇವೆಯೊಂದೇ ದಾರಿ. ಈ ಭಕ್ತಿಯ ಪಥವನ್ನು ತೋರಿಸುವ ಭಕ್ತರ ಸಂಗ ಅತ್ಯಗತ್ಯ. ಭಕ್ತರ ಸಂಗದಿಂದ ನಮ್ಮ ಮನಸ್ಸು ಪಾಪಗಳಿಂದ ದೂರವಾಗಿ ಶುದ್ಧವಾಗುತ್ತದೆ. ಇಂಥ ಭಕ್ತಸಂಗ, ಸ್ವರ್ಗಕ್ಕಿಂತಲೂ, ಪರಮ ಪುರುಷಾರ್ಥವಾದ ಮೋಕ್ಷಕ್ಕಿಂತಲೂ ದೊಡ್ಡದೆಂದು ಹೇಳುತ್ತಾನೆ ಶಿವ.

ಶಿವನು ತನ್ನ ಸ್ತುತಿಯನ್ನು ಮುಂದುವರಿಸಿದನು.
“ಯಾವುದರಲ್ಲಿ ಈ ವಿಶ್ವವು ವ್ಯಕ್ತವಾಗಿದೆಯೋ, ಈ ವಿಶ್ವದಲ್ಲಿ ಯಾವುದು ಪ್ರಕಾಶಿಸುವುದೋ, ಆಕಾಶದಂತೆ ಎಲ್ಲೆಲ್ಲೂ ವಿಸ್ತೃತವಾಗಿರುವ ಆ ನಿರಾಕಾರ ಬ್ರಹ್ಮನ್ ನೀನೇ ಆಗಿರುವೆ. ಮಾಯೆಯೆಂಬ ನಿನ್ನ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ನೀನೇ ಅದನ್ನು ಪಾಲಿಸಿ, ಕಡೆಗೆ ನೀನೇ ಅದನ್ನು ಸಂಹರಿಸುವೆ. ಆದರೆ ಈ ಕಾರ್ಯಗಳಿಂದ ನೀನೇನೂ ವಿಕಾರ ಹೊಂದದೆ ಸ್ವತಂತ್ರನಾಗಿರುತ್ತೀಯೆ. ಜೀವಿಗಳಾದರೋ, ಈ ವಿಶ್ವದ ಬದಲಾವಣೆಗಳೇ ಸತ್ಯವೆಂಬ ಭ್ರಮೆಗೆ ಸಿಲುಕಿ ಕ್ಷೋಭೆಗೊಳ್ಳುತ್ತಾರೆ. ವೇದಗಳಿಂದಾಗಲೀ, ಮಂತ್ರತಂತ್ರಗಳಿಂದಾಗಲೀ ಪೂಜಿಸಲ್ಪಡುವವನು ನೀನೇ ಆಗಿರುವೆ.”
“ಪ್ರಭು, ನೀನು ಆದಿಪುರುಷನು. ನಿನ್ನ ಶಕ್ತಿಯು ಈ ವಿಶ್ವಸೃಷ್ಟಿಗೆ ಮೊದಲು ಸುಪ್ತವಾಗಿದ್ದು, ನಿನ್ನ ಸಂಕಲ್ಪದಿಂದಲೇ ಕ್ರಿಯಾಶೀಲವಾಗಿ, ಸತ್ತ್ವ, ರಜೋ ತಮೋ ಗುಣಗಳೆಂಬ ಮೂರು ಗುಣಗಳಾಗಿ ಮೂಡಿತು. ಈ ವಿಕಾರಗಳಿಂದ ಮಹತ್ತತ್ತ್ವವೂ, ಅದರಿಂದ ಅಹಂಕಾರವೂ, ಅದರಿಂದ ಆಕಾಶ, ವಾಯು, ಅಗ್ನಿ, ನೀರು, ಪೃಥ್ವಿ ಎಂಬ ಪಂಚಭೂತಗಳೂ, ದೇವತೆಗಳೂ, ಋಷಿಗಳೂ, ಜೀವಗಣಗಳೂ ಅಭಿವ್ಯಕ್ತಗೊಂಡವು. ಹೀಗೆ ಈ ವಿಶ್ವದ ಸೃಷ್ಟಿಯಾಯಿತು. ವಿಶ್ವವು ಸೃಷ್ಟಿಯಾಗಲು, ನೀನು, ನಾಲ್ಕು ಬಗೆಯ ದೇಹಗಳನ್ನು (ಅಂಡಜ ಅಥವಾ ಮೊಟ್ಟೆಯಿಂದ ಹುಟ್ಟಿದ, ಜರಾಯುಜ ಅಥವಾ ಗರ್ಭದಿಂದ ಜನಿಸಿದ, ಸ್ವೇದಜ ಅಥವಾ ಬೆವರಿನಿಂದ ಹುಟ್ಟಿದ ಮತ್ತು ಉದ್ಭಿಜ ಅಥವಾ ಬೀಜದಿಂದ ಹುಟ್ಟಿದ ವೃಕ್ಷಾದಿಗಳು) ವಿಭಿನ್ನಾಂಶಗಳಾದ ಜೀವಕಲೆಗಳ ಮೂಲಕವೂ, ಸ್ವಾಂಶವಾದ ಪರಮಾತ್ಮ ರೂಪದಲ್ಲೂ ಪ್ರವೇಶಿಸುವೆ. ಜೇನುಗೂಡಿನಲ್ಲಿ ಜೇನುಗಳು ಮಧುವನ್ನು ಸವಿಯುವಂತೆ, ಜೀವಿಗಳು ಇಂದ್ರಿಯ ಸುಖವನ್ನು ಅನುಭವಿಸುತ್ತಾರೆ. ಅಂತೆಯೇ ನೀನು ಈ ವಿಶ್ವವನ್ನು ಚಂಡವೇಗದಲ್ಲಿ ನಾಶಪಡಿಸುವ ಕಾಲರೂಪಿಯೂ ಆಗಿರುವೆ! ಒಂದು ಪ್ರಾಣಿಯು ಇನ್ನೊಂದು ಪ್ರಾಣಿಯನ್ನು ತಿನ್ನುವಂತೆ, ಗಾಳಿಯು ಮೋಡಗಳನ್ನು ಚದುರಿಸಿ ಬಿಡುವಂತೆ, ಈ ವಿಶ್ವವನ್ನು ಚದುರಿಸಿಬಿಡುವೆ! ಜೀವಿಗಳು ಲೋಭದಿಂದಲೂ ಅತಿಯಾದ ವಿಷಯಲೋಲುಪ್ತತೆಯಿಂದಲೂ ಕೂಡಿ ಪ್ರಮತ್ತರಾಗಿ ವಿವಿಧ ಕಾರ್ಯಗಳ ಚಿಂತನೆಯಲ್ಲಿ ತೊಡಗಿರುವಾಗಲೇ, ಅಪ್ರಮತ್ತನಾದ ನೀನು, ಹಸಿದ ಹಾವು ಇಲಿಯನ್ನು ನುಂಗುವಂತೆ ಅವರನ್ನು ನಿನ್ನ (ಕಾಲ) ವಶಮಾಡಿಕೊಳ್ಳುವೆ!”
“ಪರಮ ಪ್ರಭುವೇ! ನಿನ್ನ ಪದಾಬ್ಜಗಳನ್ನು ಪೂಜಿಸದಿದ್ದರೆ ಜೀವನವೇ ವ್ಯರ್ಥಗೊಳ್ಳುವುದೆಂದು ಅರಿತಿರುವ ಯಾವ ಪಂಡಿತನು ತಾನೇ ಈ ಪೂಜೆಯನ್ನು ನಿರ್ಲಕ್ಷಿಸುತ್ತಾನೆ? ನನ್ನ ತಂದೆಯೂ ಜಗದ್ಗುರುವೂ ಆಗಿರುವ ಬ್ರಹ್ಮದೇವನೇ, ನಿಶ್ಶಂಕೆಯಿಂದ ನಿನ್ನನ್ನು ಅರ್ಚಿಸುತ್ತಾನೆ. ಅವನನ್ನನುಸರಿಸಿ ಹದಿನಾಲ್ಕು ಮನುಗಳೂ ನಿನ್ನನ್ನು ಪೂಜಿಸುತ್ತಾರೆ. ಪ್ರಭು! ನೀನೇ ಪರಮಾತ್ಮನು! ನೀನೇ ಪರಬ್ರಹ್ಮನು! ಇದು ಎಲ್ಲ ಜ್ಞಾನಿಗಳ ನಿರ್ಣಯವಾಗಿದೆ. ಇಡೀ ವಿಶ್ವವು ರುದ್ರಭಯಗ್ರಸ್ತವಾಗಿರಲು, ಭಕ್ತರಿಗೆ ನೀನು ಅಭಯಪ್ರದ ಗತಿಯಾಗಿರುವೆ.”
ಶಿವನು, ಭಗವಂತನ ನಿರಾಕಾರ, ಪರಮಾತ್ಮ, ವಿಶ್ವರೂಪಗಳನ್ನು ಸ್ತುತಿಸಿದನು. ತನ್ನ ನಿರಾಕಾರ ಜ್ಯೋತಿಸ್ವರೂಪದ ಮೂಲಕ, ಅವನು ಎಲ್ಲೆಲ್ಲೂ ಆಕಾಶದಂತೆ ವಿಸ್ತೃತನಾಗಿದ್ದಾನೆ. ಪರಮಾತ್ಮನಾಗಿ ಅವನು ಪ್ರತಿಯೊಂದು ಜೀವಿಯ ಹೃದಯವನ್ನೂ ಪ್ರವೇಶಿಸುತ್ತಾನೆ. ಜೀವಿಗಳೂ ಅವನ ವಿಭಿನ್ನ ಅಂಶಗಳೇ ಆಗಿದ್ದಾರೆ. ಬೆಂಕಿಯಿಂದ ಬಂದ ಕಿಡಿಗಳು ತಾವೇ ಬೆಂಕಿಯಲ್ಲದಿದ್ದರೂ, ಮೂಲ ಬೆಂಕಿಯಿಂದ ಬೇರೆಯಲ್ಲ. ಅಂತೆಯೇ ಜೀವಿಗಳು ಅಜ್ಞಾನವಶವಾಗಿ ಮಾಯೆಗೆ ಸಿಲುಕುವ ಸಾಧ್ಯತೆಯಿರುತ್ತದೆ. ಆದ್ದರಿಂದ, ವಿಷಯಭೋಗಕ್ಕಾಗಿ ಮತ್ತೆ ಮತ್ತೆ ವಿವಿಧ ದೇಹಗಳಲ್ಲಿ ಹುಟ್ಟುತ್ತವೆ. ಪಂಚಭೂತಾತ್ಮಕವಾದ ಈ ವಿಶ್ವವು ಭಗವಂತನ ಬಹಿರಂಗ ಶಕ್ತಿ, ಮಾಯೆಯಿಂದುಂಟಾಗಿದೆ. ಹೀಗೆ ಅವನು ವಿಶ್ವರೂಪ. ಈ ವಿಶ್ವರೂಪವು ಸಮಸ್ತ ವಿಶ್ವ, ಪಶುಪಕ್ಷಿಮಾನವ ದಾನವ ದೇವತೆಗಳನ್ನೊಳಗೊಂಡಿದೆ. ವಿಶ್ವಪ್ರಳಯ ಮಾಡುವ ಕಾಲವೂ ಭಗವಂತನ ರೂಪ. ಈ ಕಾಲನು ಲಯಕರ್ತನಾದ ರುದ್ರ. ಸಮಸ್ತ ವಿಶ್ವವೂ ಎಲ್ಲ ಜೀವಿಗಳೂ ರುದ್ರನಿಗೆ ಅಥವಾ ಕಾಲನಿಗೆ ಹೆದರುತ್ತಾರೆ. ಆದರೆ ಭಗವದ್ಭಕ್ತರ ಬಳಿ ಕಾಲವು ಬರುವುದಿಲ್ಲ. ಆದ್ದರಿಂದ ಅವರು ಹೆದರುವ ಅಗತ್ಯವಿಲ್ಲ. ಭಕ್ತರಿಗೆ ಭಗವಂತನು ಅಭಯಪ್ರದನಾಗಿದ್ದಾನೆ.
ಸಮಸ್ತ ಸೃಷ್ಟಿಯು ಭಗವಂತನಿಂದ ಏಕಕಾಲದಲ್ಲೇ ಭಿನ್ನವೂ, ಅಭಿನ್ನವೂ ಆಗಿರುತ್ತದೆ. ಇದು ಭಗವಂತನ ಅಚಿಂತ್ಯ ಲೀಲೆ. ಅವನಿಗೆ ಭಕ್ತಿಸೇವೆ ಸಲ್ಲಿಸುವುದೇ ಎಲ್ಲರ ಪರಮಧ್ಯೇಯ.
ಪರಮೇಶ್ವರನು ಹೇಳಿದನು, “ಪ್ರಚೇತಸರೇ, ಈ ಸ್ತೋತ್ರವನ್ನು ಜಪಿಸಿರಿ. ನಿಮಗೆ ಮಂಗಳವಾಗುವುದು. ಭಗವದರ್ಪಣಾಭಾವದಿಂದ ನಿಮ್ಮ ಸ್ವಧರ್ಮವನ್ನಾಚರಿಸಿರಿ. ಎಲ್ಲಾ ಜೀವಿಗಳ ಹೃದಯಾಂತರಾಳದಲ್ಲಿ ನೆಲೆಸಿರುವ ಆ ಪರಮಾತ್ಮನನ್ನು ಪೂಜಿಸಿರಿ. ಅವನನ್ನು ಧ್ಯಾನಿಸಿರಿ. ಸದಾ ಅವನ ಮಹಿಮೆಯ ಗುಣಗಾನ ಮಾಡಿ. ನಾನು ಉಪದೇಶಿಸಿದ ಈ ಯೋಗವಿದ್ಯೆ ಸ್ತೋತ್ರವನ್ನು ಮೊದಲಿಗೆ ಬ್ರಹ್ಮದೇವನು ನನಗೂ ಸೃಷ್ಟಿಕಾರ್ಯದ ನಿರ್ವಹಣೆ ಹೊತ್ತ ಭೃಗುವಾದಿಯಾಗಿ ತನ್ನ ಇತರ ಪುತ್ರರಿಗೂ ಬೋಧಿಸಿದನು. ಈ ಪ್ರಾರ್ಥನೆಯನ್ನು ಹಾಡಿ ದೇವೋತ್ತಮ ಪರಮ ಪುರುಷನನ್ನು ತೃಪ್ತಿಪಡಿಸಿದ ಪ್ರಜಾಪತಿಗಳೆಲ್ಲರೂ ಸೃಷ್ಟಿ ಮಾಡಲು ಶಕ್ತರಾದರು. ವಿವಿಧ ಜೀವವರ್ಗಗಳನ್ನು ಸೃಷ್ಟಿಸಿದರು.”
“ಈ ಸ್ತೋತ್ರವನ್ನು ದಿನವೂ ಭಕ್ತಿಯಿಂದ ಜಪಿಸಲು, ವ್ಯಕ್ತಿಯು ಬಹುಬೇಗನೇ ಶ್ರೀಕೃಷ್ಣನ ಅನುಗ್ರಹವನ್ನು ಪಡೆಯುವನು. ಈ ಪ್ರಪಂಚದಲ್ಲಿರುವ ಶ್ರೇಯಸ್ಕರವಾದ ವಿಷಯಗಳಲ್ಲೆಲ್ಲಾ ಜ್ಞಾನವು ಪರಮ ಶ್ರೇಯಸ್ಕರವಾದುದು. ದಾಟಲಾಗದ ದುಃಖಾರ್ಣವವನ್ನು ಜ್ಞಾನವೆಂಬ ದೋಣಿಯು ದಾಟಿಸಿ ಸುಖವನ್ನುಂಟುಮಾಡುತ್ತದೆ. ಭಗವಂತನ ಸ್ತುತಿಯೇ ಆಗಿರುವ ನನ್ನ ಈ ಗೀತೆಯನ್ನು (ರುದ್ರಗೀತೆ) ಜಪಿಸಿ, ಆರಾಧಿಸಲು ಬಹುಕಷ್ಟವಾಗಿರುವ ಶ್ರೀಹರಿಯನ್ನು ಸುಲಭವಾಗಿ ಆರಾಧಿಸಬಹುದು. ಈ ಗೀತೆಯನ್ನು ಹಾಡಿದರೆ, ಶ್ರೇಯಾನುಗ್ರಹಗಳಿಗೆ ಒಡೆಯನಾದ ಆ ಪರಮಪುರುಷನಿಂದ ವ್ಯಕ್ತಿಯು ಏನನ್ನು ಅಪೇಕ್ಷಿಸಿದರೂ ಅದನ್ನು ಪಡೆಯುತ್ತಾನೆ. ಯಾರು ಇದನ್ನು ಪ್ರಾತಃಕಾಲದಲ್ಲಿ ಎದ್ದು ಕೇಳುವನೋ ಅಥವಾ ಇತರರಿಗೆ ಕೇಳಿಸುವನೋ, ಅವನು ಕರ್ಮಗಳ ಬಂಧನದಿಂದ ಮುಕ್ತನಾಗುತ್ತಾನೆ. ಆದ್ದರಿಂದ ರಾಜಪುತ್ರರೇ, ಈ ಗೀತೆಯನ್ನು ಏಕಾಗ್ರತೆಯಿಂದ ಜಪಿಸುತ್ತಾ ಆ ಪರಮಪುರುಷನನ್ನು ಕುರಿತು ತಪಸ್ಸನ್ನಾಚರಿಸಿ. ನೀವೇನು ಬಯಸುವಿರೋ ಅದನ್ನು ಖಂಡಿತ ಪಡೆಯುವಿರಿ.”
ಹೀಗೆ ಉಪದೇಶ ಮಾಡಿ ಶಿವನು ಅಂತರ್ಧಾನನಾದನು. ಪ್ರಚೇತಸರು ಮುನ್ನಡೆದು ಸಮುದ್ರವನ್ನು ಪ್ರವೇಶಿಸಿ, ಆ ದಿವ್ಯಸ್ತೋತ್ರವನ್ನು ಜಪಿಸುತ್ತಾ ಹತ್ತು ಸಹಸ್ರ ವರ್ಷಗಳ ಕಾಲ ಉಗ್ರ ತಪಸ್ಸನ್ನಾಚರಿಸಿದರು.
ಪ್ರಚೇತಸರ ತಪಸ್ಸಿಗೆ ಮೆಚ್ಚಿ ಶ್ರೀಮನ್ನಾರಾಯಣನು ಪ್ರತ್ಯಕ್ಷನಾದನು. ಗರುಡನ ಹೆಗಲಿನ ಮೇಲೆ ಕುಳಿತಿದ್ದ ಅವನು, ಮೇರು ಪರ್ವತದ ಮೇಲೆ ಕುಳಿತ ಮೋಡದಂತೆ ಕಂಗೊಳಿಸುತ್ತಿದ್ದನು. ಅವನು ಧರಿಸಿದ್ದ ಪೀತಾಂಬರವೂ, ಶಿರವನ್ನಲಂಕರಿಸಿದ್ದ ಕಿರೀಟವೂ, ಕಪೋಲಗಳ ಮೇಲೆ ಮೆರೆಯುತ್ತಿದ್ದ ಕರ್ಣಕುಂಡಲಗಳೂ ಕೊರಳಿನ ವೈಜಯಂತಿಯೇ ಮೊದಲಾದ ಮೂಲಾಭರಣಗಳೂ ದಶದಿಕ್ಕುಗಳ ಕತ್ತಲನ್ನು ತೊಲಗಿಸಿದವು. ವಿವಿಧ ಆಯುಧಗಳನ್ನು ಧರಿಸಿದ್ದ ಅಷ್ಟಭುಜಗಳು, ಎದೆಯಲ್ಲಿ ನೆಲೆಸಿದ್ದ ಲಕ್ಷ್ಮಿಯ ಸೌಂದರ್ಯದೊಂದಿಗೆ ಸ್ಪರ್ಧಿಸುತ್ತಿದ್ದ ವನಮಾಲೆ, ತುಳಸಿಗಳಿಂದ ಯುಕ್ತನಾಗಿ ಭಗವಂತನು ಬಹು ಸುಂದರವಾಗಿ ಕಾಣುತ್ತಿದ್ದನು. ದೇವ ಋಷಿಗಂಧರ್ವರಿಂದ ಅವನು ಪರಿವೃತನಾಗಿ ಸತತವಾಗಿ ಸ್ತುತಿಸಲ್ಪಡುತ್ತಿದ್ದನು. ಭಗವಂತನ ಕಂದರ್ಪಕೋಟಿಕಮನೀಯ ರೂಪವನ್ನು ನೋಡಿ ಪ್ರಚೇತಸರ ಮನಸ್ಸು ಪ್ರಫುಲ್ಲವಾಯಿತು. ಅವರು ಭಕ್ತಿಯಿಂದ ಸಾಷ್ಟಾಂಗವೆರಗಿ ಕೈಜೋಡಿಸಿ ನಿಂತರು. ಆಗ ಭಗವಂತನು ಮೇಘಗಂಭೀರ ಧ್ವನಿಯಿಂದ ಹೇಳಿದನು.
“ರಾಜಕುಮಾರರೇ, ನಿಮ್ಮ ಸೌಹಾರ್ದತೆಯಿಂದ ನಾನು ಸಂತುಷ್ಟನಾಗಿದ್ದೇನೆ ತಾವೆಲ್ಲರೂ ಭಕ್ತಿಸೇವೆ ಎಂಬ ಒಂದೇ ವೃತ್ತಿಯಲ್ಲಿ ತೊಡಗಿದ್ದೀರಿ. ನಿಮಗೆ ಮಂಗಳವಾಗಲಿ. ನನ್ನಿಂದ ಯಾವುದಾದರೂ ವರವನ್ನು ನೀವೀಗ ಪಡೆಯಿರಿ.”
“ರಾಜಪುತ್ರರೇ, ಯಾರು ನಿಮ್ಮನ್ನು ಪ್ರತಿದಿನ ಸಂಜೆಯೂ ಸ್ಮರಿಸುವರೋ, ಅವರು ತಮ್ಮ ಸಹೋದರರೊಂದಿಗೆ ಒಮ್ಮತದಿಂದಿದ್ದು ಎಲ್ಲ ಜೀವಿಗಳಲ್ಲೂ ಸ್ನೇಹಭಾವವನ್ನು ತೋರುವರು. ನೀವೀಗ ಹಾಡಿದ ರುದ್ರಗೀತೆಯಿಂದ ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಯಾರು ನನ್ನನ್ನು ಸ್ತುತಿಸುವರೋ ಅವರು ನನ್ನಿಂದ ಎಲ್ಲ ಅಪೇಕ್ಷೆಗಳನ್ನೂ ಪೂರೈಸಿಕೊಳ್ಳುವರು ಹಾಗೂ ಸದ್ಬುದ್ಧಿಯನ್ನು ಪಡೆಯುವರು. ನೀವು ನಿಮ್ಮ ತಂದೆಯ ಆಜ್ಞೆಯನ್ನು ಸಂತೋಷದಿಂದ ಶಿರಸಾವಹಿಸಿ ಪಾಲಿಸಿದ್ದೀರಿ. ಆದ್ದರಿಂದ ನಿಮ್ಮ ಕೀರ್ತಿ ಲೋಕಾದ್ಯಂತ ಪಸರಿಸುತ್ತದೆ. ಬ್ರಹ್ಮದೇವನಿಗೆ ಯಾವ ಗುಣದಲ್ಲೂ ಕಡಮೆಯಿಲ್ಲದ ಸತ್ಪುತ್ರನೊಬ್ಬನು ನಿಮಗೆ ಜನಿಸಿ, ತನ್ನ ಸಂತತಿಯನ್ನು ಮೂರು ಲೋಕಗಳಲ್ಲೂ ತುಂಬುವನು.”
“ರಾಜಪುತ್ರರೇ, ಹಿಂದೆ, ಕಂಡು ಎಂಬ ಮಹರ್ಷಿಯು ಪ್ರಮ್ಲೋಚೆಯೆಂಬ ಅಪ್ಸರೆಯಿಂದ ಕಮಲಲೋಚನೆಯಾದ ಸುಂದರ ಮಗಳೊಬ್ಬಳನ್ನು ಪಡೆದುಕೊಂಡನು. ಅಪ್ಸರೆಯಿಂದ ತ್ಯಜಿಸಲ್ಪಟ್ಟ ಆ ಮಗಳನ್ನು ಅರಣ್ಯದ ಮರಗಳೇ ಸಾಕಿದವು! ಹಸಿವಿನಿಂದ ಅಳುತ್ತಿದ್ದ ಆ ಮಗುವನ್ನು ಪೋಷಿಸಲು ಚಂದ್ರನು ತನ್ನ ಅಮೃತಮಯವಾದ ಬೆರಳನ್ನು ಅದರ ಬಾಯಲ್ಲಿಟ್ಟನು. ಹೀಗೆ ಚಂದ್ರನ ಮತ್ತು ವೃಕ್ಷಗಳ ಮಗಳಾಗಿ ಬೆಳೆದ ಆ ಸುಂದರ ಕನ್ಯೆಯನ್ನು ನೀವೆಲ್ಲರೂ ವರಿಸಬೇಕು. ನೀವು ಪ್ರಜಾಸೃಷ್ಟಿಮಾಡಬೇಕೆಂಬ ನಿಮ್ಮ ತಂದೆಯ ಆಜ್ಞೆಯನ್ನು ಪಾಲಿಸ ಹೊರಟಿರುವಿರಿ. ನೀವು ನನ್ನ ಭಕ್ತರೂ ಆಗಿರುವಿರಿ. ಆದ್ದರಿಂದ ನನ್ನ ಮಾತನ್ನು ಪರಿಗಣಿಸಿ ಅವಳನ್ನು ವಿವಾಹವಾಗಿ. ನೀವೆಲ್ಲರೂ ಸಮಾನಧರ್ಮಿಗಳೂ ಸುಶೀಲವಂತರೂ ಆಗಿರುವಿರಿ. ಈ ಕನ್ಯೆಯು ನಿಮ್ಮೆಲ್ಲರಲ್ಲೂ ಸಮಾನವಾದ ಪೂಜ್ಯಭಾವನೆ ತೋರುತ್ತಾಳೆ. ಹಾಗಾಗಿ ಅವಳು ನಿಮ್ಮೆಲ್ಲರಿಗೂ ಸಮಾನ ಪತ್ನಿಯಾಗುತ್ತಾಳೆ. ಒಂದು ದಶಲಕ್ಷ ದಿವ್ಯವರ್ಷಗಳವರೆಗೆ ನೀವು ಈ ಲೋಕದ ಹಾಗೂ ಸ್ವರ್ಗಲೋಕದ ಸಮಸ್ತ ಭೋಗಭಾಗ್ಯಗಳನ್ನು ಅನುಭವಿಸುವಿರಿ. ಅನಂತರ, ನನ್ನಲ್ಲಿ ಅನನ್ಯಭಕ್ತಿಯುಳ್ಳವರಾದ ನೀವು ಭೌತಿಕ ಸುಖದಲ್ಲಿ ಅನಾಸಕ್ತರಾಗಿ ನನ್ನ ಪರಂಧಾಮವನ್ನು ಪಡೆಯುವಿರಿ.”
“ರಾಜಪುತ್ರರೇ, ಸದಾ ನನ್ನ ಲೀಲೆಗಳನ್ನು ಕುರಿತ ವಿಚಾರಗಳನ್ನು ಚಿಂತಿಸುತ್ತಾ ನನ್ನಲ್ಲಿ ಭಕ್ತಿಯನ್ನು ಹೊಂದಿದ್ದರೆ, ಗೃಹಕಾರ್ಯಗಳಲ್ಲಿ ತೊಡಗಿದ್ದರೂ ವ್ಯಕ್ತಿಯು ಕರ್ಮಗಳಿಂದ ಬಂಧನಕ್ಕೊಳಗಾಗುವುದಿಲ್ಲ. ನನ್ನ ಭಕ್ತರು ಬ್ರಹ್ಮಸ್ಥಿತಿಯನ್ನು ತಲಪಿದವರಾಗಿ ದಿನವೂ ನವೋಲ್ಲಾಸಭರಿತರಾಗಿರುತ್ತಾರೆ. ಇತರ ಲೌಕಿಕ ವಿಷಯಗಳಿಂದ ಭ್ರಾಂತರಾಗುವುದಿಲ್ಲ. ಅವುಗಳ ಮೋಹಕ್ಕೊಳಗಾಗಿ ಶೋಕಿಸುವುದಿಲ್ಲ. ಹಾಗೂ ಹಿಗ್ಗುವುದಿಲ್ಲ.”
ಭಗವಂತನಾದ ಶ್ರೀ ಹರಿಯು ಹೀಗೆ ಹೇಳಲು, ಪ್ರಚೇತಸರ ತಮಸ್ಸಿನ ಕೊಳೆಯು ತೊಳೆದುಹೋಯಿತು. ಅವನ ದಿವ್ಯದರ್ಶನದಿಂದ ಪುಳಕಿತರಾದ ಅವರು, ಅಂಜಲೀಬದ್ಧರಾಗಿ ಗದ್ಗದ ಸ್ವರದಿಂದ ಭಗವಂತನನ್ನು ಸ್ತುತಿಸಿದರು.
“ಕ್ಲೇಶಗಳನ್ನು ಪರಿಹರಿಸುವ ಭಗವಂತನೇ, ನಿನಗೆ ನಮೋ ನಮಃ! ಉದಾರಗುಣಗಳಿಗೆ ಆಶ್ರಯಸ್ಥಾನನೆಂದು ನಿರೂಪಿತನಾದವನೇ, ನಿನಗೆ ನಮಸ್ಕಾರ! ಮನಸ್ಸು ಮಾತುಗಳಿಗಿಂತಲೂ ವೇಗವಾಗಿ ಚಲಿಸುವನೇ, ಇಂದ್ರಿಯಗಳಿಗೆ ಗೋಚರನಾಗದವನೇ, ನಿನಗೆ ನಮ್ಮ ನಮಸ್ಕಾರ! ಶುದ್ಧನೂ ಶಾಂತನೂ ಆದ ನಿನಗೆ ನಮಸ್ಕಾರ! ನಿನ್ನಲ್ಲಿ ಮನಸ್ಸಿಡಲು ಈ ದ್ವೈತಮಯ ವಿಶ್ವವು ಅರ್ಥಹೀನವಾಗಿ ಕಾಣುತ್ತದೆ. ಪ್ರಭು! ಗುಣಾತೀತನಾಗಿದ್ದರೂ ನೀನು ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ಗುಣಾತ್ಮಕವಾದ ರೂಪಗಳನ್ನು ಸ್ವೀಕರಿಸುವೆ.”
“ಹೇ ಪ್ರಭು! ವಾಸುದೇವ! ಶ್ರೀಕೃಷ್ಣ! ವಿಶುದ್ಧಸತ್ತ್ವಮಯ ದೇವನೇ! ಸಾತ್ವತರ ಪತಿಯೇ! ಶ್ರೀಹರಿಯೇ! ಭಕ್ತರ ಸಂಕಷ್ಟಗಳನ್ನು ತೊಡೆದುಹಾಕುವವನೇ! ನಿನಗೆ ನಮಸ್ಕಾರ!”
“ಕಮಲನಾಭ! ನಿನಗೆ ನಮೋ ನಮಃ! ಕಮಲಗಳ ಮಾಲೆಯನ್ನು ಧರಿಸಿರುವವನೇ, ನಿನಗೆ ನಮಸ್ಕಾರ! ಕಮಲಗಳಂತಹ ಪಾದಗಳನ್ನು ಪಡೆದಿರುವವನೇ, ಕಮಲನಯನ, ನಿನಗೆ ನಮ್ಮ ಭಕ್ತಿಪೂರ್ವಕ ನಮಸ್ಕಾರ! ಕಮಲಕರ್ಣಿಕೆಯ ಕೇಸರದಂಥ ವರ್ಣವುಳ್ಳ ಸುಂದರ ಉಡುಪನ್ನು ಧರಿಸಿರುವವನೇ, ನಿನಗೆ ನಮಸ್ಕಾರ! ಹೇ ಪ್ರಭು! ಸಕಲ ಜೀವಿಗಳಲ್ಲೂ ವಾಸಿಸುವ ಪರಮಾತ್ಮನೇ, ಸರ್ವಕರ್ಮಸಾಕ್ಷಿಯೇ, ನಿನಗೆ ನಮಸ್ಕಾರ!”
“ಹೇ ಭಗವಂತ! ಈ ನಿನ್ನ ದಿವ್ಯ ರೂಪವು ನಮ್ಮ ಕ್ಲೇಶಗಳೆಲ್ಲವೂ ತೊಡೆದು ಹಾಕುವಂತಹುದಾಗಿದೆ! ನಿನ್ನ ದರ್ಶನದಿಂದ ನಮ್ಮ ಸಂಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ! ಇದಕ್ಕಿಂತಲೂ ಇನ್ನೇನು ಬೇಕು? ನಿನ್ನ ಅರ್ಚಾವಿಗ್ರಹದ ವಿಸ್ತರಣೆಯಿಂದ ಎಲ್ಲ ಅಮಂಗಲಗಳ ನಾಶ ಮಾಡುತ್ತಾ ನಿನ್ನ ದೀನಭಕ್ತರಿಗೆ ಕರುಣೆ ತೋರುವೆ. ಪ್ರಭು! ಅತ್ಯಂತ ಕ್ಷುಲ್ಲಕ ಜೀವಿಗಳ ಆಶಯಗಳನ್ನೂ ತಿಳಿದಿರುವ ನಿನ್ನಲ್ಲಿ ಭಕ್ತಿಯನ್ನಾಚರಿಸುವುದರಿಂದ ಅವರ ಆಸೆಗಳೂ ಪೂರೈಸುತ್ತವೆ. ನೀನು ಎಲ್ಲರ ಹೃದ್ಗತ ಪರಮಾತ್ಮ. ಹೀಗಿರಲು ನೀನು ನಮ್ಮ ಆಸೆಯನ್ನು ತಿಳಿದಿರಲಾರೆಯಾ?”
“ಜಗತ್ಪತಿಯೇ! ಭಕ್ತಿಗೂ, ಮುಕ್ತಿಗೂ ಗುರುವಾದ ನೀನು ನಮ್ಮಲ್ಲಿ ಸದಾ ಪ್ರಸನ್ನನಾಗಿರು. ಇದೇ ನಾವು ಬೇಡುವ ವರ. ಭ್ರಮರವು ಪಾರಿಜಾತ ಪುಷ್ಪವನ್ನು ಪಡೆದ ಬಳಿಕ ಬೇರೇನನ್ನೂ ಸೇವಿಸಲಿಚ್ಛಿಸುವುದಿಲ್ಲ. ಅಂತೆಯೇ ನಿನ್ನ ದಿವ್ಯ ಅಂಘ್ರಿಯುಗ್ಮಗಳನ್ನೇ ಪಡೆದ ಬಳಿಕ ಇನ್ನೇನು ಪಡೆಯಲಿದೆ?! ಆದರೂ, ಪರತತ್ತ್ವವನ್ನೂ ಮೀರಿದ ನಿನ್ನಲ್ಲಿ ನಾವು ವರವೊಂದನ್ನು ಯಾಚಿಸುವೆವು. ಎಂದಿನವರೆಗೆ ನಿನ್ನ ಮಾಯೆಯಿಂದ ಭ್ರಮಿತರಾಗಿ ಕರ್ಮಗಳ ಬಂಧನದಲ್ಲಿ ಸಿಲುಕಿರುವೆವೋ, ಅಂದಿನವರೆಗೂ, ಪ್ರತಿ ಜನ್ಮದಲ್ಲಿಯೂ ನಿನ್ನ ಭಕ್ತರ ಸಂಗ ನಮಗೆ ದೊರೆಯುತ್ತಿರಲಿ. ಪ್ರಭೋ! ನಿನ್ನ ಭಕ್ತರ ಸಂಗದ ಕ್ಷಣಕಾಲವೂ ಸ್ವರ್ಗ ಅಥವಾ ಮೋಕ್ಷಕ್ಕೆ ಸಮವಲ್ಲ. ಮನುಷ್ಯರಿಗೆ ಇಂಥ ಭಕ್ತರ ಸಂಗಕ್ಕಿಂತಲೂ ಮಿಗಿಲಾದುದು ಬೇರೇನಿದೆ? ನಿನ್ನ ಭಕ್ತರ ಸಂಗದಲ್ಲಿರುವಾಗ, ಅಮೃತಮಯವಾದ ನಿನ್ನ ಕಥಾ ಪ್ರಸಂಗಗಳು ಚರ್ಚಿಸಲ್ಪಡುತ್ತವೆ. ಇವನ್ನು ಕೇಳುವುದರಿಂದ ಭೌತಿಕ ಹಂಬಲಗಳು ತಾತ್ಕಾಲಿಕವಾಗಿಯಾದರೂ ಮರೆಯಾಗುತ್ತವೆ. ಉದ್ವೇಗ, ಭಯ, ದ್ವೇಷಗಳು ಕಡಮೆಯಾಗುತ್ತವೆ. ಅಂತಹ ಸತ್ಸಂಗ ಸಭೆಯಲ್ಲಿ ವಿರಾಗಿಗಳ ಗತಿಯಾದ ನೀನು ಭಕ್ತರಿಂದ ಸ್ತುತಿಸಲ್ಪಡುತ್ತಾ ಸಾಕ್ಷಾತ್ಕಾಗಿ ನೆಲೆಸಿರುತ್ತೀಯೆ ಪ್ರಭು! ನಿನ್ನ ಭಕ್ತರು ತೀರ್ಥಕ್ಷೇತ್ರಗಳನ್ನೂ ಪಾವನಗೊಳಿಸಲೆಂದು ಜಗತ್ತಿನಾದ್ಯಂತ ಸಂಚರಿಸುತ್ತಾರೆ. ಭವಭಯದಿಂದ ಸಂತ್ರಸ್ತಗೊಂಡ ಯಾರಿಗೆ ತಾನೇ ಅಂಥವರ ಸಂಗ ಆನಂದ ತರದು? ನಾವಾದರೋ, ನಿನಗೆ ಅತ್ಯಂತ ಪ್ರಿಯಸಖನಾದ ಶಿವನ ಕ್ಷಣಕಾಲದ ಸಂಗದಿಂದ ಮಹತ್ತರವಾದ ಲಾಭ ಪಡೆದೆವು. ಚಿಕಿತ್ಸೆ ಮಾಡಲು ಬಹು ಕಷ್ಟವಾದ ಭವರೋಗಕ್ಕೆ ಅತ್ಯುತ್ತಮ ವೈದ್ಯನಾದ ನಿನ್ನನ್ನು ಪಡೆಯುವ ಭಾಗ್ಯವಂತರಾದೆವು.”
“ಪ್ರಭು! ನಾವು ವೇದಾಧ್ಯಯನ ಮಾಡಿದ್ದೇವೆ. ಗುರುಹಿರಿಯರ ಸೇವೆ ಮಾಡಿದ್ದೇವೆ. ಒಳ್ಳೆಯ ಗುಣ, ನಡತೆಗಳನ್ನುಳ್ಳವರಾಗಿದ್ದೇವೆ. ಸಹೋದರರಾದ ನಮ್ಮ ನಮ್ಮಲ್ಲಿ ಮೈತ್ರಿಯಿಂದಿರುತ್ತಾ ಸಕಲ ಜೀವಿಗಳ ವಿಷಯದಲ್ಲೂ ಅಸೂಯಾರಹಿತರಾಗಿದ್ದೇವೆ. ಇಷ್ಟು ಕಾಲವೂ ಅನ್ನಾಹಾರಗಳಿಲ್ಲದೆ ನೀರಿನಲ್ಲಿ ನಿಂತು ತಪಸ್ಸನ್ನಾಚರಿಸಿದ್ದೇವೆ. ಇವೆಲ್ಲವನ್ನೂ ನಿನ್ನ ತೃಪ್ತಿಗಾಗಿಯೇ ಮಾಡಿದ್ದೇವೆ. ಆದ್ದರಿಂದ ಪ್ರಭು, ನಮ್ಮಲ್ಲಿ ಪ್ರಸನ್ನನಾಗು.”
“ಪ್ರಭು, ಮನುಕುಲದ ಪಿತನಾದ ಸ್ವಾಯಂಭುವ ಮನುವೂ, ಬ್ರಹ್ಮದೇವನೂ, ಶಿವನೂ, ಇನ್ನಿತರ ಮಹಾತ್ಮರೂ ನಿನ್ನ ಮಹಿಮೆಗಳನ್ನು ಸಂಪೂರ್ಣವಾಗಿ ಅರಿಯರು. ಆದರೂ ಅವರು ತಮ್ಮ ಶಕ್ತ್ಯನುಸಾರವಾಗಿ ನಿನ್ನನ್ನು ಸ್ತುತಿಸುವಂತೆ, ನಾವು ಅಜ್ಞರಾದರೂ ನಮಗೆ ಸಾಧ್ಯವಾದಷ್ಟು ನಿನ್ನನ್ನು ಸ್ತುತಿಸುತ್ತಿದ್ದೇವೆ. ಸರ್ವರಿಗೂ ಸಮಾನನೂ, ಶುದ್ಧನೂ, ಪರಮ ಪುರುಷನೂ, ಅಪ್ರಾಕೃತನೂ ಆದ ಭಗವಾನ್ ವಾಸುದೇವನೇ, ನಿನಗೆ ನಮಸ್ಕಾರ.”
ಪ್ರಚೇತಸರ ಪ್ರಾರ್ಥನೆಯನ್ನು ಕೇಳಿ ಸಂತುಷ್ಟನಾದ ಪುರುಷೋತ್ತಮನು “ತಥಾಸ್ತು”, ಎಂದು ಹೇಳಿ, ಅವನನ್ನಗಲಲು ಅವರಿಗೆ ಸ್ವಲ್ಪವೂ ಮನಸ್ಸಿಲ್ಲದಿದ್ದರೂ ತನ್ನ ಧಾಮಕ್ಕೆ ಹಿಂದಿರುಗಿದನು.
ಪ್ರಚೇತಸರು ಭಗವದ್ದರ್ಶನಕ್ಕೆ ಮತ್ತೆ ಮತ್ತೆ ಹಂಬಲಿಸುತ್ತಾ ನೀರಿನಿಂದ ಹೊರಬಂದರು. ಆಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಇಡಿಯ ಭೂಮಂಡಲವೇ ಎತ್ತರವಾದ, ಮುಗಿಲು ಮುಟ್ಟುತ್ತಿದ್ದ ಮರಗಳಿಂದ ತುಂಬಿಹೋಗಿತ್ತು! ಪ್ರಚೇತಸರಿಗೆ ಮುಂದೆ ಹೋಗಲು ದಾರಿಯೇ ಇರಲಿಲ್ಲ. ಇದರಿಂದ ಅವರು ಬಹಳ ಕುಪಿತರಾದರು. ಪ್ರಳಯಕಾಲದಲ್ಲಿ ಶಿವನ ಕಣ್ಣಿನಿಂದ ವಾಯ್ವಗ್ನಿಗಳು ಹೊರಡುವಂತೆ, ಅವರ ಮುಖದಿಂದ ವಾಯ್ವಗ್ನಿಗಳು ಹೊರಟು, ಮರಗಳನ್ನು ಸುಡಲಾರಂಭಿಸಿದವು! ಅನೇಕ ವೃಕ್ಷಗಳು ಭಸ್ಮವಾಗಲು ಬ್ರಹ್ಮದೇವನು ಧರೆಗಿಳಿದು ಬಂದು ಪ್ರಚೇತಸರನ್ನು ತನ್ನ ಸವಿಮಾತುಗಳಿಂದ ಸಾಂತ್ವನಗೊಳಿಸಿ ಅವರಿಂದಾಗುತ್ತಿದ್ದ ಮರಗಳ ನಾಶವನ್ನು ನಿಲ್ಲಿಸಿದನು. ಆಗ ವೃಕ್ಷದೇವತೆಗಳು ಹೆದರಿ, ತಮ್ಮ ಮಗಳಾದ ಮಾರಿಷೆಯನ್ನು ಪ್ರಚೇತಸರಿಗೆ ಒಪ್ಪಿಸಿದವು.
ಹಿಂದೆ, ಕಂಡುವೆಂಬ ಮಹರ್ಷಿಯು ಉಗ್ರತಪಸ್ಸನ್ನಾಚರಿಸುತ್ತಿದ್ದನು. ಅವನ ತಪಸ್ಸು ತನ್ನ ಪದವಿಗಾಗಿರಬಹುದೆಂದು ಹೆದರಿದ ಇಂದ್ರನು ಅವನ ತಪಸ್ಸನ್ನು ಹಾಳುಗೆಡವಲು ಪ್ರಮ್ಲೋಚೆಯೆಂಬ ಅಪ್ಸರೆಯನ್ನು ಕಳಿಸಿದನು. ಪ್ರಮ್ಲೋಚೆಯ ಸೌಂದರ್ಯಕ್ಕೆ ಮರುಳಾದ ಕಂಡು ಮಹರ್ಷಿ, ಅವಳೊಡನೆ ಅನೇಕ ವರ್ಷಗಳ ಕಾಲ ರಮಿಸಿದ. ಕಾಲಕ್ರಮದಲ್ಲಿ ತನ್ನ ತಪ್ಪಿನ ಅರಿವಾಗಿ ಅವನು ತಪಸ್ಸಿಗೆ ಹಿಂದಿರುಗಿದ. ಗರ್ಭಿಣಿಯಾಗಿದ್ದ ಪ್ರಮ್ಲೋಚೆಯು ಒಂದು ಹೆಣ್ಣು ಶಿಶುವನ್ನು ಹೆತ್ತು ಸ್ವರ್ಗಕ್ಕೆ ಮರಳಿದಳು. ಅನಾಥವಾಗಿದ್ದ ಆ ಶಿಶುವನ್ನು ಕಾಡಿನ ಮರಗಳು ಪೋಷಿಸಿದವು. ಚಂದ್ರನು ತನ್ನ ಅಮೃತಮಯವಾಗಿದ್ದ ಬೆರಳನ್ನೇ ಅದರ ಬಾಯಲ್ಲಿಟ್ಟು ಪೋಷಿಸಿದನು. ಮಾರಿಷಾ ಎಂದು ಕರೆಯಲ್ಪಟ್ಟ ಆ ಕನ್ಯೆ ಸುಂದರ ತರುಣಿಯಾಗಿ ಬೆಳೆದಳು. ವೃಕ್ಷಗಳ ಪುತ್ರಿಯಾಗಿ ಬೆಳೆದು ವಾರ್ಕ್ಷೀ ಎಂದೂ ಹೆಸರಾದಳು.
ಬ್ರಹ್ಮದೇವನ ಆದೇಶದಂತೆ ಪ್ರಚೇತಸರೆಲ್ಲರೂ ಮಾರಿಷೆಯನ್ನು ತಮ್ಮ ಸಮಾನ ಪತ್ನಿಯಾಗಿ ಸ್ವೀಕರಿಸಿದರು.
ಹಿಂದೆ, ಪುರುಷರು, ಅದರಲ್ಲೂ ರಾಜಕುಲದವರು ಹೆಚ್ಚು ಪತ್ನಿಯರನ್ನು ಪಡೆದಿರಬಹುದಿತ್ತಾದರೂ ಸ್ತ್ರೀಯರು ಒಬ್ಬರಿಗಿಂತ ಹೆಚ್ಚು ಪತಿಯನ್ನು ಪಡೆಯುವಂತಿರಲಿಲ್ಲ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ, ದೇವೋತ್ತಮ ಪರಮ ಪುರುಷನೇ ನಿಯೋಜಿಸಿದಾಗ ಇದು ನಡೆಯುತ್ತಿತ್ತು. ದ್ರೌಪದಿ ಪಾಂಡವರೈವರನ್ನೂ ಮದುವೆಯಾದುದು ಒಂದು ವಿಶೇಷ ಸಂದರ್ಭ. ಅಂತೆಯೇ ಆ ಘಟನೆಗಿಂತಲೂ ಪೂರ್ವದಲ್ಲಿಯೇ ನಡೆದ ಇದೂ ಅಂತಹ ಒಂದು ವಿಶೇಷ ಸಂದರ್ಭ. ಪ್ರಚೇತಸರೆಲ್ಲರೂ ಸಮಾನ ಧರ್ಮವುಳ್ಳವರಾದ್ದರಿಂದ ಅವರೆಲ್ಲರನ್ನೂ ಸಮಾನದೃಷ್ಟಿಯಿಂದ ಪ್ರೀತಿಸುವಂತಹ ಒಬ್ಬ ಪತ್ನಿಯ ಆವಶ್ಯಕತೆಯಿತ್ತು. ಮಾರಿಷೆಗೆ ಈ ಶಕ್ತಿಯಿದ್ದುದರಿಂದ ಅವಳು ಎಲ್ಲರಿಗೂ ಪತ್ನಿಯಾದಳು.

ಪ್ರಚೇತಸರ ಪತ್ನಿಯಾದ ಮಾರಿಷೆಯ ಗರ್ಭದಲ್ಲಿ ದಕ್ಷನು ಹುಟ್ಟಿದನು. ಹಿಂದೆ, ಪ್ರಜಾಪತಿಯಾಗಿದ್ದ ದಕ್ಷನು ಮಹಾದೇವನಾದ ಶಿವನನ್ನು ನಿಂದಿಸಿ ಅಪಚಾರವೆಸಗಿದ್ದನು. ಈ ಕಾರಣಕ್ಕಾಗಿ, ಬ್ರಹ್ಮ ಪುತ್ರನಾಗಿದ್ದ ಅವನು ಮತ್ತೊಮ್ಮೆ ಭೂಮಿಯಲ್ಲಿ ಹುಟ್ಟಬೇಕಾಯಿತು. ಹುಟ್ಟಿದ ಕೂಡಲೇ ದಕ್ಷನು ತನ್ನ ಅಪೂರ್ವ ತೇಜಸ್ಸಿನಿಂದ ಬೆಳಗುತ್ತಾ ಇತರರೆಲ್ಲರ ತೇಜಸ್ಸನ್ನು ಅಪಹರಿಸಿದನು! ಕಾಮ್ಯಕರ್ಮಾಚರಣೆಯಲ್ಲಿ ಬಹು ಚಾಣಾಕ್ಷನಾಗಿದ್ದ ಅವನಿಗೆ ಈಗಲೂ ದಕ್ಷನೆಂದೇ ಹೆಸರಾಯಿತು. ಬ್ರಹ್ಮದೇವನು ದಕ್ಷನನ್ನು ಪ್ರಜೆಗಳ ಸೃಷ್ಟಿ ಮತ್ತು ಪಾಲನೆಯ ಕಾರ್ಯದಲ್ಲಿ ನಿಯೋಜಿಸಿದನು. ಕ್ರಮೇಣ ಅವನು ಇತರ ಪ್ರಜಾಪತಿಗಳನ್ನೂ ಈ ಕಾರ್ಯದಲ್ಲಿ ತೊಡಗಿಸಿದನು. ಚಾಕ್ಷುಷ ಮನ್ವಂತರವು ಪ್ರಾಪ್ತವಾಗಲು, ದಕ್ಷನು ವಿಧಿಯಿಂದ ಪ್ರಚೋದಿತನಾಗಿ ವಿವಿಧ ಜೀವಿಗಳನ್ನು ಸೃಷ್ಟಿಸಿದನು.
ಪ್ರಚೇತಸರು ಸಹಸ್ರಾರು ವರ್ಷಗಳ ಕಾಲ ಸುಖಭೋಗಗಳನ್ನನುಭವಿಸಿ ಕ್ರಮೇಣ ಅಧ್ಯಾತ್ಮ ಜ್ಞಾನವನ್ನು ಪೂರ್ಣವಾಗಿ ಬೆಳೆಸಿಕೊಂಡರು. ಆಗ ಅವರು ಹಿಂದೆ ಶ್ರೀಹರಿಯು ತಮಗೆ ಹೇಳಿದ್ದ ಮಾತನ್ನು ಸ್ಮರಿಸಿಕೊಂಡು, ತಮ್ಮ ಪತ್ನಿಯನ್ನು ಮಗನ ವಶಕ್ಕೊಪ್ಪಿಸಿ ಗೃಹಸ್ಥಾಶ್ರಮವನ್ನು ತೊರೆದರು. ಬ್ರಹ್ಮಜ್ಞಾನಿಗಳಾಗಲೆಂದು, ಅವರು ಪಶ್ಚಿಮ ದಿಕ್ಕಿನಲ್ಲಿದ್ದ ಸಮುದ್ರತೀರಕ್ಕೆ ಹೋಗಿ, ಮಹರ್ಷಿ ಜಾಜಲಿಗಳು ವಾಸಿಸುತ್ತಿದ್ದ ಆಶ್ರಮವನ್ನು ಸೇರಿದರು. ಅಲ್ಲಿ ಅವರು ಅಷ್ಟಾಂಗಯೋಗವನ್ನು ಅಭ್ಯಾಸ ಮಾಡಿಕೊಂಡು ಪ್ರಾಣ, ಮನಸ್ಸು, ಮಾತು, ದೃಷ್ಟಿಗಳನ್ನು ನಿಯಂತ್ರಿಸಿದರು. ಪರಬ್ರಹ್ಮನಲ್ಲಿ ತಮ್ಮ ಮನಸ್ಸನ್ನು ಕೇಂದ್ರೀಕರಿಸಿದರು. ಆಗ, ಸುರಾಸುರವರೇಣ್ಯರಾದ ನಾರದ ಮಹರ್ಷಿಗಳು ಪ್ರತ್ಯಕ್ಷರಾದರು.
ನಾರದರು ಆಗಮಿಸಿದ ಕೂಡಲೇ ಪ್ರಚೇತಸರು ಎದ್ದು ಅವರಿಗೆ ನಮಸ್ಕರಿಸಿ ಯಥಾವತ್ತಾಗಿ ಸತ್ಕರಿಸಿ ಹೇಳಿದರು, “ಮಹರ್ಷಿಗಳೇ! ನಿಮಗೆ ಸ್ವಾಗತ! ನೀವು ನಮಗೆ ದರ್ಶನ ನೀಡುತ್ತಿರುವುದು ನಮ್ಮ ಸೌಭಾಗ್ಯ! ನಿಮ್ಮ ಸಂಚಾರವು, ಸೂರ್ಯನ ಸಂಚಾರವು ಕತ್ತಲನ್ನೋಡಿಸುವಂತೆ ಎಲ್ಲ ಭಯಗಳನ್ನೂ ತೊಡೆದುಹಾಕುತ್ತದೆ. ದೇವರ್ಷಿಗಳೇ! ಹಿಂದೆ, ಮಹಾದೇವನಾದ ಶಿವನೂ, ಶ್ರೀಮನ್ನಾರಾಯಣನೂ, ನಮಗೆ ಅನೇಕ ಉಪದೇಶಗಳನ್ನು ನೀಡಿದ್ದರು. ಆದರೆ ಬಹುಕಾಲ ಗೃಹಾಸಕ್ತರಾಗಿದ್ದ ನಾವು ಪ್ರಾಯಃ ಅವೆಲ್ಲವನ್ನೂ ಮರೆತುಬಿಟ್ಟಿದ್ದೇವೆ. ಆದ್ದರಿಂದ, ಪರಮ ಸತ್ಯದ ಅರಿವುಂಟುಮಾಡಿಸುವ ಆ ಅಧ್ಯಾತ್ಮಜ್ಞಾನವನ್ನು ನಮಗೆ ಪುನಃ ನೀಡಿ. ಅದನ್ನು ತಿಳಿಯುವುದರಿಂದ ಈ ಭವಸಾಗರವನ್ನು ಬಹು ಸುಲಭವಾಗಿ ದಾಟಬಹುದು.”
“ಪ್ರಚೇತಸರೇ,” ನಾರದರು ಹೇಳಿದರು, “ವಿಶ್ವಾತ್ಮನೂ ಪರಮಪುರುಷನೂ ಆದ ಶ್ರೀಹರಿಯನ್ನು ಸೇವಿಸುವುದೇ ಜನ್ಮದ ಸಾರ್ಥಕ್ಯ. ಅವನ ಸೇವೆಗಾಗಿ ಆಡುವ ಮಾತುಗಳು ನಿಜವಾಗಿ ಮಾತುಗಳು, ಅವನಿಗಾಗಿ ಮಾಡುವ ಕರ್ಮವೇ ನಿಜವಾದ ಕರ್ಮ. ಅವನಿಗಾಗಿ ಮುಡಿಪಾದ ಆಯುಷ್ಯವೇ ನಿಜವಾದ ಆಯುಷ್ಯ. ಭಗವಂತನನ್ನು ತೃಪ್ತಿಪಡಿಸದ ಮೂರು ಬಗೆಯ ಜನ್ಮಗಳಿಂದೇನು ಉಪಯೋಗ? (ತಾಯ್ತಂದೆಯರಿಂದ ಪಡೆಯುವ ಶೌಕ್ರಜನ್ಮ, ಉಪನಯನದ ಬಳಿಕ ಸಾವಿತ್ರಜನ್ಮ, ಯಜ್ಞದೀಕ್ಷಿತನಾದಾಗ ಯಾಜ್ಞಕ ಜನ್ಮ) ಮೂರು ವೇದೋಪದೇಶಗಳಿಂದೇನು ಪ್ರಯೋಜನ? ವೇದೋಕ್ತಕರ್ಮಗಳ ಆಚರಣೆಯಿಂದೇನುಪಯೋಗ? ಅಥವಾ, ತೀವ್ರವಾದ ತಪಸ್ಸು, ವಾಕ್ಚಾತುರ್ಯ, ಬುದ್ಧಿವಂತಿಕೆ, ಬಲ, ಇಂದ್ರಿಯಶಕ್ತಿಗಳಿದ್ದೇನು ಪ್ರಯೋಜನ? ಯೋಗ, ಸಾಂಖ್ಯ, ಸಂನ್ಯಾಸ, ಸ್ವಾಧ್ಯಾಯ, ಇವಾವುದೂ ಹರಿಯನ್ನು ತೃಪ್ತಿಪಡಿಸದಿದ್ದರೆ ಸುಮ್ಮನೆ ವ್ಯರ್ಥ! ಎಲ್ಲ ಮಂಗಳಕಾರ್ಯಗಳ ಉದ್ದೇಶ, ಸಕಲ ಜೀವಿಗಳಿಗೂ ಅಂತರಾತ್ಮನೂ ಅತ್ಯಂತ ಪ್ರಿಯನೂ ಆದ ಹರಿಯನ್ನು ತೃಪ್ತಿಪಡಿಸುವುದೇ ಆಗಿದೆ.
“ಪ್ರಚೇತಸರೇ, ಒಂದು ಮರದ ಬೇರಿಗೆ ನೀರೆರೆದರೆ, ಆ ಮರದ ರೆಂಬೆ, ಕೊಂಬೆಗಳು ಸಹಜವಾಗಿಯೇ ಪೋಷಿಸಲ್ಪಡುತ್ತವೆ. ಹೊಟ್ಟೆಗೆ ಆಹಾರ ನೀಡುವುದರಿಂದ ಇತರ ಎಲ್ಲ ಇಂದ್ರಿಯಗಳೂ ತಾವಾಗಿಯೇ ತೃಪ್ತಿಹೊಂದುತ್ತವೆ. ಅಂತೆಯೇ ಶ್ರೀಹರಿಯನ್ನು ಅರ್ಚಿಸಿದರೆ, ಎಲ್ಲರನ್ನೂ ಅರ್ಚಿಸಿದಂತಾಗುತ್ತದೆ. ಸೂರ್ಯನಿಂದ ಭೂಮಿಗೆ ನೀರು ಬರುತ್ತದೆ. ಪುನಃ ನೀರು ಕಾಲಾಂತರದಲ್ಲಿ ಸೂರ್ಯನಲ್ಲೇ ಸೇರಿ ಹೋಗುತ್ತದೆ. ಅಂತೆಯೇ ಸ್ಥಾವರ ಜಂಗಮಗಳಾದ ಸಕಲ ಜೀವಿಗಳೂ ಭಗವಂತನಾದ ಶ್ರೀಹರಿಯಿಂದ ಉತ್ಪನ್ನರಾಗಿ, ಕಾಲಕ್ರಮದಲ್ಲಿ ಅವನಲ್ಲೇ ಲೀನವಾಗುತ್ತಾರೆ. ಸೂರ್ಯನ ಪ್ರಭೆಯು ಸೂರ್ಯನಿಂದ ಹೇಗೆ ಬೇರೆಯಲ್ಲವೋ ಹಾಗೆಯೇ ಈ ಜಗತ್ತು ಆ ಪರಮಪ್ರಭುವಿನಿಂದ ಬೇರೆಯಲ್ಲ. ಇಂದ್ರಿಯಗಳು ಎಚ್ಚೆತ್ತ ಸ್ಥಿತಿಯಲ್ಲಿ ಕ್ರಿಯಾಶೀಲವಾಗಿರುತ್ತಾ, ಸುಪ್ತಾವಸ್ಥೆಯಲ್ಲಿ ಕ್ರಿಯಾಹೀನವಾಗಿರುತ್ತವೆ. ಅಂತೆಯೇ ಈ ಜಗತ್ತೂ ಅವನಿಂದ ಪ್ರಕಟವಾಗಿ, ಪ್ರಳಯವಾದಾಗ ಅವನಲ್ಲೇ ಲೀನವಾಗಿರುತ್ತದೆ. ಹೀಗೆ ಈ ವಿಶ್ವವು ಅವನಿಂದ ಭಿನ್ನವೂ ಅಭಿನ್ನವೂ ಆಗಿದೆ. ಆಕಾಶದಲ್ಲಿ ಕೆಲವೊಮ್ಮೆ ಬೆಳಕು, ಕತ್ತಲೆ, ಮತ್ತು ಮೋಡಗಳು ಕಾಣಿಸಿಕೊಳ್ಳುತ್ತವೆ; ಮತ್ತೆ ಕೆಲವೊಮ್ಮೆ ಅವು ಮರೆಯಾಗುತ್ತವೆ. ಅಂತೆಯೇ ಪರಬ್ರಹ್ಮನಲ್ಲಿ ಸತ್ತ್ವ, ರಜಸ್, ತಮಸ್ಸುಗಳೆಂಬ ಗುಣಗಳು ಕಾಣಿಸಿಕೊಳ್ಳುತ್ತಲೂ, ಮರೆಯಾಗುತ್ತಲೂ ಇರುತ್ತವೆ. ಈ ಎಲ್ಲ ಗುಣಗಳನ್ನು ಮೀರಿದವನೂ, ಸಕಲ ಜೀವಿಗಳ ಪರಮಾತ್ಮನೂ, ನೇರಕಾರಣನೂ, ದೂರಕಾರಣನೂ, ಕಾಲರೂಪನೂ, ತನ್ನ ತೇಜಸ್ಸಿನಿಂದ ಸದಾ ಬೆಳಗುವವನೂ ಆದ ಆ ಒಬ್ಬನೇ ವಿಶ್ವದೊಡೆಯನೊಡನೆ ಗುಣಾತ್ಮಕವಾಗಿ ನೀವು ಒಂದೆಂದು ಭಾವಿಸಿ ಅವನನ್ನು ಭಜಿಸಿರಿ.”
“ಸಕಲ ಜೀವರಾಶಿಯಲ್ಲೂ ದಯೆ, ಏನೇ ದೊರೆತರೂ ಅದರಲ್ಲಿ ಸಂತುಷ್ಟರಾಗಿರುವುದು, ಇಂದ್ರಿಯನಿಗ್ರಹದಿಂದ ಶಾಂತರಾಗಿರುವುದರಿಂದ ಶ್ರೀಹರಿಯು ಸಂತೃಪ್ತನಾಗುತ್ತಾನೆ. ಎಲ್ಲ ಆಸೆಗಳಿಂದಲೂ ದೂರವಾಗಿ ನಿರ್ಮಲ ಚಿತ್ತರಾಗಿರುವ ಭಕ್ತರ ಪ್ರೇಮಭಕ್ತಿಯು ಹೆಚ್ಚಿದಂತೆ, ಭಗವಂತನು ತಾನು ಭಕ್ತ ಪರಾಧೀನನೆಂದು ತಿಳಿದು, ಆಕಾಶವು ಎಂದಿಗೂ ಮರೆಯಾಗದಂತೆ, ಅವರ ಹೃತ್ಕಮಲಗಳಲ್ಲಿ ಮರೆಯಾಗದೇ ನೆಲೆಸುತ್ತಾನೆ. ಧನಹೀನರಾದರೂ ಭಕ್ತಿಯನ್ನೇ ಧನವನ್ನಾಗಿ ಉಳ್ಳವರ ಸೇವೆಯನ್ನು ಬಹಳ ಪ್ರೀತಿಯಿಂದ ಸ್ವೀಕರಿಸುವ ಆ ಶ್ರೀಹರಿಯು, ವಿದ್ಯೆ, ಕುಲ, ಕಾರ್ಯ, ಧನಗಳಿಂದ ಮದಿಸಿದ ಅಶುದ್ಧ ಮನಸ್ಸಿನ ಜನರ ಪೂಜೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಸದಾ ತನ್ನನ್ನೇ ಅನುಸರಿಸುವ ಲಕ್ಷ್ಮಿಯನ್ನಾಗಲೀ, ಅವಳನ್ನು ಐಶ್ವರ್ಯ ಪ್ರಾಪ್ತಿಗಾಗಿ ಪೂಜಿಸುವ ಇಂದ್ರಾದಿ ದೇವತೆಗಳನ್ನಾಗಲೀ ಹೆಚ್ಚು ಆದರಿಸದ ಆ ಶ್ರೀಹರಿ, ಭಕ್ತರಿಗೆ
ಅಧೀನನಾಗಿರುತ್ತಾನೆ! ಇಂಥ ದೇವೋತ್ತಮ ಪುರುಷನನ್ನು ಯಾರು ತಾನೇ ಪೂಜಿಸರು!?”

ಹೀಗೆ ನಾರದ ಮಹರ್ಷಿಗಳು ಪ್ರಚೇತಸರಿಗೆ ಬೋಧಿಸಿ ಅನೇಕ ಭಗವತ್ಕಥೆಗಳನ್ನು ಹೇಳಿ ಬ್ರಹ್ಮಲೋಕಕ್ಕೆ ಹೋದರು. ಪ್ರಚೇತಸರು ನಾರದರ ಅಮೃತೋಪಮ ನುಡಿಗಳನ್ನು ಕೇಳಿ ಭಕ್ತಿ ಸಾಗರದಲ್ಲಿ ಮುಳುಗಿ ಹೋದರು. ನಿರಂತರವಾಗಿ ಅವರು ಹರಿಚಿಂತನೆ, ಹರಿಧ್ಯಾನಗಳಲ್ಲಿ ಕಾಲ ಕಳೆದರು. ಕಾಲಕ್ರಮದಲ್ಲಿ ಅವರ ಜೀವಿತಾವಧಿ ಮುಗಿಯಲು ಅವರೆಲ್ಲರೂ ಪರಮ ಪದವನ್ನು ಪ್ರವೇಶಿಸಿದರು.
ಶಿವನು ಹಾಡಿದ ರುದ್ರಗೀತೆಯೆಂಬ ಶ್ರೇಷ್ಠ ಸ್ತುತಿಯನ್ನೊಳಗೊಂಡ ಪ್ರಚೇತಸರ ಈ ಉಪಾಖ್ಯಾನವನ್ನು ಕೇಳುವವರು ಉತ್ತಮ ಆಯಸ್ಸು, ಧನ, ಯಶಸ್ಸು, ಸೌಭಾಗ್ಯಗಳನ್ನು ಪಡೆದು, ತಮ್ಮ ಜೀವಿತಾವಧಿಯ ಬಳಿಕ, ಭಗವದ್ಧಾಮಕ್ಕೆ ಮರಳುತ್ತಾರೆ.