ಬಡವನಿಗೆ ಒಲಿದ ಅದೃಷ್ಟ

ಒಂದು ನೀತಿ ಕಥೆ

ಮೂವರು ಬಡವರಿಗೆ ಶ್ರೀಮಂತರಾಗುವ ಅಪೇಕ್ಷೆ. ಒಮ್ಮೆ ಅದೃಷ್ಟ ದೇವತೆ ಅವರ ಮನೆ ಬಾಗಿಲಿಗೆ ಬಂದಾಗ ಅವರ ಭಾವನೆ ಹೇಗಿತ್ತು ಎನ್ನುವುದೇ ಈ ಕಥೆಯ ಸಾರಾಂಶ. ಓದಿ ನೋಡಿ.

ಒಂದು ದಿನ ಒಬ್ಬ ಅಂಚೆಯವನು ಮೂವರು ಬಡವರ ಬಳಿಗೆ ಬಂದನು. ಅವರು ಬೇರೆ ಬೇರೆ ಕಡೆ ವಾಸಿಸುತ್ತಿದ್ದರು. ಆದರೆ ಶ್ರೀಮಂತರಾಗುವ ಆಸೆ ಮೂವರಿಗೂ ಇತ್ತು. ಅಂಚೆಯವನು ಮೊದಲ ವ್ಯಕ್ತಿ ಬಳಿ ಬಂದು ಒಂದು ಲಕೋಟೆ (ಎನ್ವಲಪ್) ನೀಡಿದನು. ಅದೇ ರೀತಿ ಎರಡನೆಯ ಮತ್ತು ಮೂರನೆಯ ಬಡವನಿಗೂ ಲಕೋಟೆ (ಎನ್ವಲಪ್) ಕೊಟ್ಟನು. ಅದರೊಳಗೆ ಅದೃಷ್ಟವಿದೆ ಎಂದು ಮೂವರಿಗೂ ಹೇಳಿದನು.

ಮೊದಲನೆಯವನು ಆ ಎನ್ವಲಪ್‌‍ ಬಗೆಗೆ ಆಸಕ್ತಿ ತೋರಲಿಲ್ಲ. “ವಿಶೇಷ ಬಹುಮಾನ ಸ್ವೀಕರಿಸಿ, ಕೋಟ್ಯಧೀಶರಾಗಿ” ಎಂದು ಕೋರದೆಯೇ ಬರುವ ಅನಪೇಕ್ಷಿತ ವಸ್ತು ಅಥವಾ ಅಂಚೆ, ಇದಕ್ಕೆ ಏನೂ ಬೆಲೆ ಇಲ್ಲ ಎಂದು ಅವನು ಅದನ್ನು ತನ್ನ ಕಡತಗಳತ್ತ ಎಸೆದನು.

ಎರಡನೆಯವನು ಎನ್ವಲಪ್‌‍ ಅನ್ನು ತೆರೆದು ನೋಡಿದಾಗ, ಅಲ್ಲಿ ಒಂದು ಚಿನ್ನದ ಕಾರ್ಡ್‌‍ ಇತ್ತು. ಅದನ್ನು ನಿಜವಾದ ಚಿನ್ನವೆಂದು ಭಾವಿಸಿದ ಅವನು ಅಕ್ಕಸಾಲಿಗನ ಬಳಿಗೆ ಓಡಿದ. ಅದರ ಬೆಲೆಯನ್ನು ತಿಳಿದುಕೊಳ್ಳುವುದು ಅವನ ಉದ್ದೇಶವಾಗಿತ್ತು. ಅಕ್ಕಸಾಲಿಗನು ಅದನ್ನು ಪರಿಶೀಲಿಸಿ ನಗಲಾರಂಭಿಸಿದನು. “ಇದು ಪ್ಲಾಸ್ಟಿಕ್‌‍ ಕಾರ್ಡ್. ನೀನು ಎಂತಹ ಮೂರ್ಖ!” ಎಂದು ಪುನಃ ನಕ್ಕನು. ಅಪಮಾನಿತನಾದ ಆ ಬಡವನು ಮೋಸವಾಗಿದೆ ಎಂದು ಭಾವಿಸಿ ಅದನ್ನು ಕಸದ ರಾಶಿಗೆ ಎಸೆದನು.

ಇನ್ನು ಮೂರನೆಯ ಬಡವನ ಸರದಿ. ನಿಮ್ಮ ನಿರೀಕ್ಷೆಯಂತೆ ಇವನು ಭಿನ್ನವಾಗಿ ಯೋಚಿಸಿದನು. ಅವನು ಆ ಎನ್ವಲಪ್‌‍ ಅನ್ನು ತೆರದು ಆ ಕಾರ್ಡ್‌‍ ಅನ್ನು ಪರಿಶೀಲಿಸಿದನು. ಆ ಅಂಚೆಯವನನ್ನು ಅದರ ಬಗೆಗೆ ವಿವರಿಸುವಂತೆ ವಿನಯದಿಂದ ಕೇಳಿದನು. ಕೆಲವು ಸಮಯದ ಹಿಂದೆ ಅವರು ಅರ್ಜಿ ಹಾಕಿದ್ದ ಸ್ಪರ್ಧೆಯ ಬಹುಮಾನವಿದು ಎಂದು ಲಕೋಟೆಯಲ್ಲಿ ಒಂದು ಸಂದೇಶವೂ ಇತ್ತು. ಉಳಿದವರಿಗೂ ಅದನ್ನು ತಿಳಿಸಲಾಗಿತ್ತಾದರೂ ಅವರು ಲಕೋಟೆಯನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ. ಆ ಅಂಚೆಯವನು ಈ ಮೂರನೆಯ ಬಡವನಿಗೆ ಎಲ್ಲ ವಿವರಗಳನ್ನೂ ನೀಡಿದನು. ದಾನಿಯೊಬ್ಬರು ಈ ಸ್ಪರ್ಧೆಯನ್ನು ಪ್ರಾಯೋಜಿಸಿದ್ದರು ಮತ್ತು ಬಡವರ ಹೆಸರುಗಳನ್ನು ಎತ್ತಲಾಯಿತು, ಬಹುಮಾನವು ಒಂದು ಕ್ರೆಡಿಟ್‌‍ ಕಾರ್ಡ್‌‍ ಆಗಿದ್ದು, ಅದಕ್ಕೆ ಯಾವುದೇ ಹಣ ತುಂಬ ಬೇಕಾಗಿಲ್ಲ, ಅಸೀಮಿತವಾಗಿ ಬಳಸಬಹುದು ಮತ್ತು ಆಯ್ದ ವ್ಯಾಪಾರ ಕೇಂದ್ರಗಳಲ್ಲಿ ಮಾತ್ರ ಬಳಸಬಹುದು ಎಂದು ಅವನು ವಿವರಿಸಿದನು. ಆ ಕಾರ್ಡ್‌‍ ಅದೃಷ್ಟ ದೇವತೆಯಾಗಿತ್ತು. ಆ ಬಡವನು ಬಳಸುತ್ತಾ ಶ್ರೀಮಂತನಾದನು.

ಈ ಮೂರೂ ಬಡವರ ರೀತಿಯನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಬಹುದು. ಮೊದಲನೆಯ ಬಡವನ ಪರಿಸ್ಥಿತಿ ಹೇಗೆಂದರೆ, ಕೃಷ್ಣಪ್ರಜ್ಞೆಯ ಸಾಹಿತ್ಯವನ್ನು ಪಡೆದ ಅಥವಾ ಮಂದಿರಕ್ಕೆ ಬರಲು ಆಹ್ವಾನವನ್ನು ಸ್ವೀಕರಿಸಿದಾಗ ಉಂಟಾಗುವ ಸ್ಥಿತಿಯಂತೆ. ಅಂದರೆ, ಅಂತಹ ಆಹ್ವಾನವು ಸಿಕ್ಕರೂ ಕೂಡ ಭಗವತ್‌‍ ಭಕ್ತಿಯ ಸಂಪತ್ತು ಅರ್ಥವಿಲ್ಲದ ತತ್ತ್ವಜ್ಞಾನ ಎಂದು ಅವರು ಭಾವಿಸುತ್ತಾರೆ. ಹೀಗಾಗಿ ಅವರು ಭಕ್ತಿಯೋಗದ ವಿಜ್ಞಾನವನ್ನು ಅಳವಡಿಸಿಕೊಳ್ಳುವುದಿಲ್ಲ.

ಎರಡನೆಯ ಬಡವ ಹೇಗೆಂದರೆ, ಕೃಷ್ಣಪ್ರಜ್ಞೆಯನ್ನು ಸ್ವೀಕರಿಸಿದ್ದರೂ ಅದರ ಮೌಲ್ಯವನ್ನು ಅರಿಯುವ ಸಾಮರ್ಥ್ಯ ಇಲ್ಲದವನಂತೆ. ಇವನು ಕ್ರಮಬದ್ಧವಾಗಿ ಜಪಿಸಬಹುದು. ಆದರೆ ಲೌಕಿಕ ನೋವು ಮತ್ತು ದುಃಖದ ಸಮಯದಲ್ಲಿ ಜಪ ಆಚರಣೆಯ ಫಲದ ಬಗೆಗೆ ಅನುಮಾನ ವ್ಯಕ್ತಪಡಿಸಬಹುದು. ತನಗೇನೋ ಮೋಸವಾಗುತ್ತಿದೆ ಎಂದು ಭಾವಿಸಿ ಭಕ್ತಿಸೇವೆಯ ಅಮೂಲ್ಯ ವರವನ್ನು ತಿರಸ್ಕರಿಸಬಹುದು. ಅಕ್ಕಸಾಲಿಗನು ಭಕ್ತರ ದಿವ್ಯ ಚಟುವಟಿಕೆಗಳನ್ನು ಗೇಲಿ ಮಾಡುವ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಾನೆ. ಈ ಅಕ್ಕಸಾಲಿಗರು ಭಕ್ತಿಸೇವೆಯ ಮೌಲ್ಯವನ್ನು ಅರಿಯದ ಮೂಢರು.

ಮೂರನೆಯ ಬಡವನು ಕೃಷ್ಣಪ್ರಜ್ಞೆಯ ಮೌಲ್ಯವನ್ನು ಅರಿತ ವ್ಯಕ್ತಿಯ ನಿದರ್ಶನವಾಗಿದ್ದಾನೆ. ಒಬ್ಬ ಸಮರ್ಥ ಆಧ್ಯಾತ್ಮಿಕ ವಿಜ್ಞಾನಿಯ ಮಾರ್ಗದರ್ಶನದಲ್ಲಿ ಕೃಷ್ಣಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವುದು ಅವನಿಗೆ ಗೊತ್ತು. ಈ ಬಡವನು ಅಂಚೆಯ ವ್ಯಕ್ತಿಯ ಮಾರ್ಗದರ್ಶನ ಕೋರಿದನು. ನಾವು ಸೂಕ್ತ, ಸಮರ್ಥ ಭಕ್ತರು ಹೇಳುವುದನ್ನು ಕೇಳಬೇಕು. ಭಕ್ತರು, ಆಧ್ಯಾತ್ಮಿಕ ಗುರುಗಳು ಧರ್ಮಗ್ರಂಥಗಳಲ್ಲಿ ಹೇಳಿರುವುದನ್ನು ಬೋಧಿಸುತ್ತಾರೆ ಮತ್ತು ಅದು ನಮಗೆ ಅರ್ಥವಾಗುವಂತೆ ಹೇಳುತ್ತಾರೆ. ಅದು ಆತ್ಮಸಾಕ್ಷಾತ್ಕಾರಕ್ಕೆ ನೆರವಾಗುತ್ತದೆ.

ಶ್ರೀಲ ಪ್ರಭುಪಾದರ ಮಾರ್ಗದರ್ಶನದಿಂದ ಜನರಲ್ಲಿ ಆಧ್ಯಾತ್ಮಿಕತೆಯು ಜಾಗೃತಗೊಂಡಿತು. ಜನರು ಕೃಷ್ಣಪ್ರಜ್ಞೆಯ ಮಹತ್ವವನ್ನು ಅರಿತರು. ಆಧ್ಯಾತ್ಮಿಕ ಗುರುವಿನ ಕೃಪೆಯಿಂದ ಭಕ್ತಿಮಾರ್ಗವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಪರಿಣಾಮಕಾರಿಯಾಗಿ ಅದನ್ನು ಅಳವಡಿಸಿಕೊಳ್ಳಬಹುದು. ದಾನಿಯೊಬ್ಬರ ಪರವಾಗಿ ಅಂಚೆ ವ್ಯಕ್ತಿಯು ಬಹುಮಾನವನ್ನು ಮೂರನೆಯ ಬಡವನಿಗೆ ನೀಡಿದನು. ಕೃಷ್ಣನು ಎಲ್ಲ ಜೀವಿಗಳ ಅಂತಿಮ ಪೋಷಕ. ಅವನು ಅಪಾರವಾದ ಕರುಣೆಯಿಂದ ಜೀವಿಗಳಿಗೆ ಅದೃಷ್ಟ, ಸಂಪತ್ತನ್ನು (ಕೃಷ್ಣಪ್ರಜ್ಞೆ) ನೀಡಲು ತನ್ನ ಪ್ರತಿನಿಧಿಯನ್ನು ಕಳುಹಿಸುತ್ತಾನೆ. ಅಂಚೆ ವ್ಯಕ್ತಿಯೂ ಅಂತಹ ಪ್ರತಿನಿಧಿಯಲ್ಲವೇ? ಭಗವಂತನಿಗೆ ಪರಿಶುದ್ಧ ಪ್ರೇಮವನ್ನು ಅರ್ಪಿಸುವುದೇ ಜೀವಿಯ ಗುರಿ. ಸಕಲ ನಿಯಂತ್ರಕನಾದ ಭಗವಂತನು ಅಂತಹ ಪರಿಶುದ್ಧ ಪ್ರೇಮದ ಭಕ್ತನಿಂದ ನಿಯಂತ್ರಿಸಲ್ಪಡುತ್ತಾನೆ. ಅದಕ್ಕಿಂತ ದೊಡ್ಡ ಸಂಪತ್ತು ಉಂಟೆ?

Featured image courtesy : www.vecteezy.com

ಈ ಲೇಖನ ಶೇರ್ ಮಾಡಿ