ಅಕ್ಷಯ ಪಾತ್ರಾ ಪ್ರತಿಷ್ಠಾನವು 500 ಕೋಟಿ ಊಟ ಬಡಿಸಿದ ಮೈಲಿಗಲ್ಲನ್ನು ತಲಪಿದೆ. ಕಳೆದ 25 ವರ್ಷಗಳ ಪರಿಶ್ರಮದಫಲವಿದು. ಈ ಸಾಧನೆಯನ್ನು ಗುರುತಿಸಲು ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಷ್ಟ್ರಪತಿ ಪದಾಸೀನಾ ದ್ರೌಪದಿ ಮುರ್ಮು ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕಾಂಶ ಸುಧಾರಣೆ ಮಾಡಲು ಮತ್ತು ಶೈಕ್ಷಣಿಕ ಬೆಂಬಲ ನೀಡಲು ಬಿಸಿಯೂಟದ ಕಾರ್ಯಕ್ರಮ ಮಹತ್ತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು. ಅಕ್ಷಯ ಪಾತ್ರೆಯ 25 ವರ್ಷಗಳ ಸೇವೆಯನ್ನು ಅವರು ಶ್ಲಾಘಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಮಕ್ಕಳ ಪೌಷ್ಟಿಕಾಂಶದ ನಡುವಣ ಸಂಬಂಧವನ್ನು ಒತ್ತಿ ಹೇಳಿದರು.

“ವಿಕಸಿತ ಭಾರತಕ್ಕಾಗಿ ಸುಪೋಷಿತ, ಸುಶಿಕ್ಷಿತ ಭಾರತ” ಇದೇ ಧ್ಯೇಯ ಮಂತ್ರ. ಅಂದರೆ ಭಾರತದ ಅಭಿವೃದ್ಧಿ ಮಕ್ಕಳ ಪೌಷ್ಟಿಕಾಂಶ ಮತ್ತು ಶಿಕ್ಷಣದ ಮೇಲೆ ಅವಲಂಬಿತವಾಗಿದೆ.
ಪ್ರತಿಷ್ಠಾನದ ಸೇವೆಯನ್ನು ವಿಸ್ತರಿಸುವ ಧ್ಯೇಯವನ್ನು ಅಕ್ಷಯ ಪಾತ್ರಾದ ಪ್ರತಿನಿಧಿಗಳು ಪುನರುಚ್ಚರಿಸಿದರು. ಮತ್ತು ಸರಕಾರಿ ಸಂಸ್ಥೆಗಳು, ದಾನಿಗಳು ಮತ್ತು ಸಹವರ್ತಿಗಳ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಿದರು.

2000 ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಅಕ್ಷಯಪಾತ್ರಾ ಕಾರ್ಯಕ್ರಮ ಇತರ ರಾಜ್ಯಗಳಿಗೆ ವಿಸ್ತರಣೆಗೊಂಡಿತು. 2012 ರಲ್ಲಿ ಶತಕೋಟಿ ಊಟ ಬಡಿಸಿದ ಮೈಲಿಗಲ್ಲನ್ನು ತಲಪಿತು.
500 ಕೋಟಿ ಊಟ ಬಡಿಸಿದ ಸಂದರ್ಭದಲ್ಲಿ ರಾಷ್ಟ್ರಪತಿ ಪದಾಸೀನಾ ದ್ರೌಪದಿ ಮುರ್ಮು ಅವರು ಮಕ್ಕಳಿಗೆ ಊಟ ಮಾಡಿಸಿದರು. ಸಂಸ್ಥೆಯ ಸ್ಥಾಪಕರಾದ ಶ್ರೀ ಮಧುಪಂಡಿತ ದಾಸ, ಚಂಚಲಾಪತಿ ದಾಸ, ಟ್ರಸ್ಟಿಗಳು, ಅಧಿಕಾರಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.






Leave a Reply