ಸಂಕೀರ್ತನ ಯಶೋಗಾಥೆಗಳು
ಶ್ರೀಲ ಪ್ರಭುಪಾದರು ತಮ್ಮ ಗುರು ಮಹಾರಾಜರ ಆದೇಶವನ್ನು ಶಿರಸಾವಹಿಸಿ ಕೃಷ್ಣಪ್ರಜ್ಞೆಯ ಪ್ರಸಾರದಲ್ಲಿ ತೊಡಗಿದರು. ಭಗವಾನ್ ಶ್ರೀ ಕೃಷ್ಣನ ಬಗ್ಗೆ ಪ್ರಮಾಣೀಕೃತವಾಗಿ ಮಾತನಾಡುತ್ತಿದ್ದ ಅವರು ಇತರ, ತಮ್ಮನ್ನು ತಾವು ಸಾಧು ಸಂತರೆಂದು ಕರೆದುಕೊಳ್ಳುವವರ ಡೋಂಗಿತನವನ್ನು ಸಾರಾಸಗಟಾಗಿ ಖಂಡಿಸುತ್ತಿದ್ದರು.
ಶ್ರೀಲಪ್ರಭುಪಾದರು ತಮ್ಮ ಇಳಿವಯಸ್ಸಿನಲ್ಲಿ ಪಶ್ಚಿಮ ದೇಶಗಳಿಗೆ ತೆರಳಿ, ಆಧುನಿಕತೆಯ ಸ್ವೇಚ್ಛೆಯಲ್ಲಿ ಮುಳುಗಿಹೋಗಿದ್ದವರನ್ನು ಉದ್ಧರಿಸಿದ್ದು ಸಾಮಾನ್ಯ ವಿಷಯವೇನಲ್ಲ. ಅದೊಂದು ಅದ್ಭುತ ಸಾಹಸ.

ಒಮ್ಮೆ ರೋಹಿಣೀಸುತದಾಸರು ಒಬ್ಬ ಮಹಿಳೆಗೆ ‘ಭಗವದ್ಗೀತಾ ಯಥಾರೂಪ’ ಪುಸ್ತಕವನ್ನು ನೀಡಿದರು. ಆ ಮಹಿಳೆ ಹಸ್ತಾಕ್ಷರ ತಜ್ಞೆಯಾಗಿದ್ದು, ಹಸ್ತಾಕ್ಷರಗಳಿಂದ ವ್ಯಕ್ತಿಯ ವಿಶೇಷತೆಗಳನ್ನು ಗುರುತಿಸಬಲ್ಲವಳಾಗಿದ್ದಳು. ಮೊದಲ ಬಾರಿ ಭೇಟಿಯಾದಾಗ ಪುಸ್ತಕ ಪಡೆದಿದ್ದ ಆಕೆ, ಎರಡನೇ ಬಾರಿ ರೋಹಿಣೀಸುತರನ್ನು ಕಾಣುತ್ತಲೇ ಭಗವದ್ಗೀತೆಯನ್ನು ತೆರೆದು ಹಿಡಿಯುತ್ತಾ ಅವರ ಬಳಿ ಸಾಗಿದಳು.
“ಓಹ್ ! ನಾನು ಈವರೆಗೆ ಇಂಥದೊಂದು ಹಸ್ತಾಕ್ಷರವನ್ನು ನೋಡೇ ಇರಲಿಲ್ಲ!!” ಪ್ರಭುಪಾದರ ಸಹಿಯತ್ತ ಬೊಟ್ಟು ಮಾಡುತ್ತ ಆಕೆ ಹೇಳಿದಳು, ”ಈ ರೀತಿ ಸಹಿ ಮಾಡುವ ವ್ಯಕ್ತಿ ಅತೀವ ಸಾಮರ್ಥ್ಯ ಶಾಲಿಯಾಗಿದ್ದು, ಇಡಿಯ ಜಗತ್ತಿನ ಮೇಲೆ ಪ್ರಭಾವ ಬೀರುವಂತಹವರಾಗಿರುತ್ತಾರೆ.
ಹೀಗೆ ಭಕ್ತರು ಮಾತ್ರವಲ್ಲದೆ, ಇತರ ಜನಸಾಮಾನ್ಯರೂ ವಿವಿಧ ಬಗೆಯಿಂದ ಪ್ರಭುಪಾದರ ಶ್ರೇಷ್ಠತೆಯನ್ನು ಅರಿಯತೊಡಗಿದ್ದರು. ಎಷ್ಟೆಂದರೂ ಕೃಷ್ಣಪ್ರಜ್ಞೆಯ ನಾವೆಯಲ್ಲಿ ದುಃಖಸಾಗರವನ್ನು ಪಾರುಗಾಣಿಸ ಹೊರಟಿದ್ದ ನಾವಿಕರಾಗಿರಲಿಲ್ಲವೇ ಅವರು!?
ಇಡಿಯ ಮಾನವ ಸಮಾಜ ದೇವರಲ್ಲಿ ಶ್ರದ್ಧೆಯನ್ನು ಕಳೆದುಕೊಳ್ಳುತ್ತಿದೆ. ಕೆಲವರು ಹತಾಶೆಯಿಂದ ಅರ್ಥಹೀನ ಪಂಥಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಕೊನೆಗಾಣಿಸಲೆಂದೇ ನಾವು ವೈಜ್ಞಾನಿಕ ದೈವಪ್ರಜ್ಞೆಯನ್ನು ಬಿತ್ತಲು ಕೃಷ್ಣ ಪ್ರಜ್ಞಾಂದೋಲನವನ್ನು ಆರಂಭಿಸಿ ಜಗತ್ತಿನಾದ್ಯಂತ ಹರಡುತ್ತಿದ್ದೇವೆ.
– ಶ್ರೀಲ ಪ್ರಭುಪಾದರು, 14 ಮಾರ್ಟ್, 1969, ಮಾಲ್ಕೋಮ್ ಎಫ್. ಮಿಲ್ಲರ್ ಇವರಿಗೆ ಬರೆದ ಪತ್ರದಲ್ಲಿ.






Leave a Reply