– ಆಕರ: ಮಣಿಹರದಾಸರ ಸಂದರ್ಶನ ಟಿಪ್ಪಣಿಗಳು, ತಮಾಲ ಕೃಷ್ಣ ಗೋಸ್ವಾಮಿಯವರ ದಿನಚರಿ. ಆಂಗ್ಲಮೂಲ: ಪ್ರಭುಪಾದ ನೆಕ್ಟರ್, ಸತ್ಸ್ವರೂಪದಾಸ
ಶ್ರೀಲ ಪ್ರಭುಪಾದರು ಬಹುತೇಕ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದುದಲ್ಲದೆ, ಭಕ್ತರಿಗೂ, ಅದನ್ನು ಬೋಧಿಸುತ್ತಿದ್ದರು. ಅಡುಗೆ ಮಾಡುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ತಾವೇ ಸ್ವತಃ ಮಾಡಿತೋರಿಸುತ್ತಿದ್ದರು. ಒಮ್ಮೆ ಪ್ರಭುಪಾದರು ಹೃಷಿಕೇಶದಲ್ಲಿ ತಮ್ಮ ಎಂಟು ಮಂದಿ ಅನುಯಾಯಿಗಳೊಂದಿಗೆ ಉಳಿದುಕೊಂಡಿದ್ದರು. ಆಗ ತಾವೂ ಅವರೊಂದಿಗೆ ಕಲೆತು, ಚಪಾತಿಗಳನ್ನು ಲಟ್ಟಿಸುತ್ತಾ ಅಡುಗೆ ಮಾಡದ ಸೋಮಾರಿಗಳ ಕುರಿತು ಹೇಳಿದ ಕಥೆ ಇದು:

ಒಮ್ಮೆ ಒಬ್ಬ ರಾಜ ತನ್ನ ರಾಜ್ಯದ ಎಲ್ಲ ಸೋಮಾರಿಗಳಿಗೂ ಧರ್ಮಛತ್ರದಲ್ಲಿ ಊಟದ ಏರ್ಪಾಡು ಮಾಡುವುದಾಗಿ ಘೋಷಿಸಿದ. ಅದನ್ನು ಕೇಳುತ್ತಲೇ ನೂರಾರು ಮಂದಿ ಪ್ರಜೆಗಳು ಬಂದು ಸೇರಿದರು. ಅವರೆಲ್ಲರು “ನಾನು ಸೋಮಾರಿ, ನಾನು ಸೋಮಾರಿ” ಎಂದು ಪೈಪೋಟಿಯ ಮೇಲೆ ಕೂಗಾಡುತ್ತ ಛತ್ರದ ಮುಂದೆ ನೆರೆದರು. ಅವರೆಲ್ಲರೂ ಒಳಗೆ ನಡೆದಾಗ, ರಾಜ ತನ್ನ ಮಂತ್ರಿಯನ್ನು ಕುರಿತು ಛತ್ರಕ್ಕೆ ಬೆಂಕಿ ಇಡಲು ಹೇಳಿದ.
ಆಗೊಳ್ಳಿ! ಕೂಡಲೇ ಸೋಮಾರಿಗಳೆಂದು ಹೇಳಿಕೊಂಡು ಬಂದವರೆಲ್ಲ ಚುರುಕಾದರು. ಬೆಂಕಿಯ ಉರಿನಾಲಗೆ ಕಾಣುತ್ತಲೇ ಕಾಲಿಗೆ ಬುದ್ಧಿ ಹೇಳಿದರು!
ಈಗ ಛತ್ರದೊಳಗೆ ಉಳಿದವರು ಇಬ್ಬರು ಮಾತ್ರ. ಅವರು ಮುಖ ಮುಖ ನೋಡಿಕೊಂಡರು. “ನನ್ನ ಬೆನ್ನು ಬೆಂಕಿಯ ಶಾಖದಿಂದ ಸುಡುತ್ತಿದೆ” ಒಬ್ಬ ಹೇಳಿದ “ಹಾಗಾದರೆ ತಿರುಗಿ ನಿಂತು ಬಿಡು!” ಮತ್ತೊಬ್ಬ ಸಲಹೆ ನೀಡಿದ. ಇವರ ಮಾತನ್ನು ಕೇಳಿದ ರಾಜ, ಇವರೇ ನಿಜವಾದ ಸೋಮಾರಿಗಳು ಎಂದು ತೀರ್ಮಾನಿಸಿದ. ಅವರನ್ನು ಹೊರಗೆ ಕರೆತ೦ದು, ಉಣಬಡಿಸಲು ಆದೇಶಿಸಿದ.






Leave a Reply