– ಡಾ.ಎಚ್.ಆರ್.ವಿಶ್ವಾಸ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರ ‘ಭಗವದ್ಗೀತಾ ಯಥಾರೂಪ’ ಪುಸ್ತಕ ಪ್ರಕಾಶನದ ಇತಿಹಾಸದಲ್ಲೇ ಹೊಸ ವಿಕ್ರಮ ಸಾಧಿಸಿದ ಕೃತಿ. ಆ ಮಹಾನ್ ಕೃತಿಯ ಸುದೀರ್ಘವೂ ವಿಚಾರಪೂರ್ಣವೂ ಆದ ಪ್ರಸ್ತಾವನೆಯ ಆಯ್ದಭಾಗಗಳ ಸಂಗ್ರಹವೇ ಈ ಕಿರು ಹೊತ್ತಗೆ ಗೀತಾಸಾರ.

ವೈದಿಕಜ್ಞಾನದ ಸಾರಸರ್ವಸ್ವವೇ ಭಗವದ್ಗೀತೆ. ಗೀತೋಪನಿಷತ್ತು ಎಂದು ಪ್ರಸಿದ್ಧವಾಗಿರುವ ಅದು ಭಾರತೀಯ ತತ್ತ್ವಜ್ಞಾನದ ಸಾರವನ್ನೆಲ್ಲ ಹಿಡಿಯೊಳಗಡಗಿಸಿಕೊಂಡಿದ್ದು ಜಿಜ್ಞಾಸುಗಳಿಗೆ ಅಂಗೈ ನೆಲ್ಲಿಕಾಯಿಯಂತೆ ತನ್ನನ್ನು ತೆರೆದು ತೋರಿಸಿಕೊಳ್ಳಬಲ್ಲದು.
ಗೀತೆಯ ಬಗೆಗೆ ಇಲ್ಲಿಯವರೆಗೆ ಬಂದಿರುವ ವ್ಯಾಖ್ಯಾನಗಳು ಅದೆಷ್ಟೋ. ಇಂದಿಗೂ ಹೊಸ ಹೊಸ ವ್ಯಾಖ್ಯಾನಗಳು ಹುಟ್ಟಿಕೊಳ್ಳುತ್ತಲೇ ಇವೆ. ಆದರೆ ‘ಭಗವದ್ಗೀತಾ ಯಥಾರೂಪ’ ಅನೇಕ ಕಾರಣಗಳಿಂದ ವಿಶಿಷ್ಟವಾಗಿದೆ. ‘ಗೀತೆ ಅರ್ಜುನನ ಮೂಲಕ ಜಗದ್ಗುರು ಶ್ರೀ ಕೃಷ್ಣ ಜಗತ್ತಿಗೇ ನೀಡಿದ ಸಂದೇಶ.
ಅದು ನಿಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು. ಆದರೆ ವೈದ್ಯನು ಸೂಚಿಸಿದ ಔಷಧಿ ಫಲಕಾರಿಯಾಗಬೇಕಾದರೆ ಆತ ಹೇಳಿದ ಕ್ರಮದಲ್ಲಿಯೇ ಅದನ್ನು ಸೇವಿಸಬೇಕು. ಹಾಗೆಯೇ ಗೀತೋಪದೇಶವೂ ಫಲಕಾರಿಯಾಗಬೇಕಾದರೆ ಅದನ್ನು ಗೀತಾಚಾರ್ಯನು ಅನುಸರಿಸಬೇಕು: ಶ್ರೀ ಕೃಷ್ಣನನ್ನು ದೇವೋತ್ತಮು ಪರಮಪುರುಷನೆಂದು ತಾತ್ವಿಕವಾಗಿಯಾದರೂ ಒಪ್ಪಿಕೊಳ್ಳಬೇಕು.
ವಿನಯಭಾವದಿಂದ ಓದದಿದ್ದರೆ ಗೀತೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ.” – ಈ ಭಾವನೆಯ ಹಿನ್ನೆಲೆಯಲ್ಲೇ ರಚನೆಯಾಗಿರುವ ದೊಡ್ಡ ಗ್ರಂಥದ ಸಂಕ್ಷಿಪ್ತರೂಪವಾದ ಈ ಹೊತ್ತಗೆ ಓದುಗನಿಗೆ ‘ಭಗವದ್ಗೀತಾ ಯಥಾರೂಪ’ದ ಓದಿಗೆ ಬೇಕಾದ ಪೂರ್ವ ಸಿದ್ಧತೆಯನ್ನು ಒದಗಿಸಿಕೊಡುತ್ತದೆ.
ಮಹಾಗ್ರಂಥದ ಸಂಬಂಧವನ್ನು ಬದಿಗಿರಿಸಿ ಓದಿದರೂ ಸ್ವತಂತ್ರವಾಗಿಯೇ ಪರಿಪೂರ್ಣತೆಯ ಅನುಭವವನ್ನು ಕೊಡುವುದು ಈ ಸಣ್ಣ ಹೊತ್ತಗೆಯ ಮತ್ತೊಂದು ವೈಶಿಷ್ಟ್ಯ.






Leave a Reply