
ಬೀದರ್ ನಗರದಿಂದ ಒಂದು ಕಿ.ಮೀ. ದೂರದಲ್ಲಿರುವ ಈ ಝರಣೀ ನರಸಿಂಹ ದೇವಾಲಯ ಒಂದು ಗುಹಾಂತರ ದೇವಾಲಯ. ಸುರಂಗದಂತಿರುವ ಗುಹೆಯ ಇನ್ನೊಂದು ತುದಿಯಲ್ಲಿ ಶ್ರೀ ನರಸಿಂಹದೇವರ ವಿಗ್ರಹವಿದೆ. ಗುಹೆಯೊಳಗೆ ನಮ್ಮ ಎದೆಯ ಮಟ್ಟದವರೆಗೆ ನೀರು ತುಂಬಿರುತ್ತದೆ. ಸದಾ ತುಂಬಿರುವ ಈ ನೀರಿನಲ್ಲೇ ನಡೆದು ಹೋಗಿ ನಾವು ದೇವರ ದರ್ಶನ ಪಡೆಯಬೇಕಾಗುತ್ತದೆ. ಹೀಗೆ ಸುಮಾರು ಅರ್ಧ ಗಂಟೆಯ ಕಾಲ ಗುಹೆಯ ಮೂಲಕ ನೀರಿನಲ್ಲಿ ಸಾಗಿದ ಬಳಿಕ ದೇವರ ದರ್ಶನವಾಗುತ್ತದೆ. ಅನಂತರ ಪುನಃ ಇದೇ ರೀತಿ ಹಿಂದಿರುಗಬೇಕು. ನೀರು ನೋಡಲು ಮಣ್ಣಿನ ಬಣ್ಣವಿದ್ದರೂ ಶುದ್ಧವಾಗಿರುತ್ತದೆ. ಎರಡು ಮೂರು ದಿನಗಳಿಗೊಮ್ಮೆ ಶುದ್ಧೀಕರಿಸಲಾಗುತ್ತದೆ. ಅಂತರ್ಜಲವಾದ ಈ ನೀರು ಎಲ್ಲಿಂದ ಬರುತ್ತದೆಯೆಂದು ತಿಳಿಯುವುದಿಲ್ಲ. ನೀರಿನಲ್ಲಿ ಸಲರ್ ಪ್ರಮಾಣ ಹೆಚ್ಚಿರುವುದರಿಂದ ಇದು ಚರ್ಮರೋಗಗಳನ್ನು ಸುಧಾರಿಸಿ ಗುಣಪಡಿಸುತ್ತದೆಂದು ಹೇಳುತ್ತಾರೆ. ಗುಹೆಯೊಳಗೆ ಅನೇಕ ಬಾವಲಿಗಳಿರುತ್ತವೆ. ಆದರೆ ಇವು ಪ್ರಯಾಣಿಕರಿಗೇನೂ ತೊಂದರೆ ಮಾಡುವುದಿಲ್ಲ. ಅಂತೆಯೇ ನೀರಿನಲ್ಲೂ ಸಣ್ಣಪುಟ್ಟ ಮೀನುಗಳು ಮೊದಲಾದ ಜಲಚರಗಳಿರಬಹುದಾದರೂ ಯಾರಿಗೂ ಯಾವುದೇ ತೊಂದರೆಯಾಗುವುದಿಲ್ಲ. ಮೊದಮೊದಲು ನೀರಿಗಿಳಿಯಲು ಸ್ವಲ್ಪ ಭಯವಾಗಿ, ಮೆಟ್ಟಿಲುಗಳನ್ನಿಳಿದು ಪೂರ್ತಿ ನೆಲದ ಮೇಲೆ ಕಾಲಿಡಲು ಎದೆಯವರೆಗೆ ನೀರಿನಲ್ಲಿ ಮುಳುಗಿದಾಗ ಉಸಿರು ವೇಗವಾಗಿ ಆಯ ತಪ್ಪಿದಂತಾಗುತ್ತದೆ. ಆದರೆ ಮುಂದೆ ಸಾಗುತ್ತಾ ನೀರಿಗೆ ಹೊಂದಿಕೊಂಡು ಯಾವುದೇ ಕಷ್ಟವಿಲ್ಲದೇ ಸುಲಭವಾಗಿ ಹೋಗಬಹುದು. ಅನೇಕಾನೇಕ ಯಾತ್ರಿಗಳು, ಗಂಡಸರು, ಹೆಂಗಸರು, ಮಕ್ಕಳೂ ಎಲ್ಲರೂ ಇದ್ದು `ಗೋವಿಂದ! ಗೋವಿಂದ’ ಎಂಬ ನಾಮೋಚ್ಚಾರದ ಘೋಷದೊಂದಿಗೆ ಗುಹೆಯಲ್ಲಿ ನೀರಿನಲ್ಲಿ ನಡೆಯುತ್ತಾ ಸಾಗುವುದು ಬಹಳ ರೋಮಾಂಚಕರವಾಗಿರುತ್ತದೆ. ಮೊದಲಿಗೆ ಗಣೇಶನ ದರ್ಶನ ಮಾಡಿ ಅನಂತರ ಒಳಗೆ ಹೋಗಬೇಕಾಗುತ್ತದೆ. ಹೊರಗೆ ಪ್ರವೇಶದಲ್ಲೇ ಒಂದು ಸುಂದರವಾದ ಲಕ್ಷ್ಮೀನರಸಿಂಹನ ವಿಗ್ರಹದ ದರ್ಶನವೂ ಆಗುತ್ತದೆ.

ಗುಹೆಯ ಹೊರಗೆ, ಪ್ರವೇಶಕ್ಕೂ ಮೊದಲು ಬಸವನ ಬಾಯಿಂದ ನೀರು ನಿರಂತರವಾಗಿ ಹೊರಬರುತ್ತಿದ್ದು ಒಂದು ಹೊಂಡದಲ್ಲಿ ಬೀಳುತ್ತಿರುತ್ತದೆ. ಇದು ಗುಹೆಯಿಂದ ಬರುವ ನೀರೇ ಆಗಿರುತ್ತದೆ. ಒಳಗೆ ಹೋಗಲಾಗದವರು ಈ ನೀರಿನಲ್ಲಿ ಸ್ನಾನ ಮಾಡಿ ಪ್ರವೇಶದಲ್ಲಿರುವ ಲಕ್ಷ್ಮೀನರಸಿಂಹನ ದರ್ಶನ ಪಡೆಯುತ್ತಾರೆ. ಒಳಗೆ ಹೋಗುವವರು ಐದು ರೂಪಾಯಿಗಳ ಚೀಟಿಯನ್ನು ಪಡೆದು ಹೋಗಬೇಕಾಗುತ್ತದೆ. ನೀರಿನಲ್ಲಿ ಹೋಗುವುದು ಸುಲಭವಾಗಲು ನಮ್ಮ ವಸ್ತ್ರಗಳನ್ನು ತೆಗೆದಿಟ್ಟು ಕಿರುವಸ್ತ್ರಗಳಲ್ಲಿ ಹೋಗಲು, ಪ್ರವೇಶದ್ವಾರದಿಂದ ಹೊರಗೆ ಸ್ವಲ್ಪವೇ ಸನಿಹದಲ್ಲಿ ಲಾಕರ್ಗಳ ವ್ಯವಸ್ಥೆಯಿದೆ. ಗುಹೆಯೊಳಗೆ ಹೋಗುವಾಗ ಕಡಿದಾದ ದಾರಿಯಲ್ಲಿ ಉಸಿರಾಟದ ತೊಂದರೆಯಾಗದಿರಲು, ಗುಹೆಯ ಮೇಲ್ಛಾವಣಿಯಲ್ಲಿ ಆಮ್ಲಜನಕದ ಕೊಳವೆಗಳನ್ನು ಅಳವಡಿಸಲಾಗಿದೆ. ಹಾಗಾಗಿ ನಿರಂತರ ವಾಯುವು ಲಭ್ಯವಾಗುತ್ತದೆ. ಅಂತೆಯೇ ಗುಹೆಯ ಗೋಡೆಗಳಿಗೆ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಹಾಗಾಗಿ ಪೂರ್ಣ ಕತ್ತಲಿರದೇ ಮಂದ ಬೆಳಕಿನಲ್ಲಿ ಸುಲಭವಾಗಿ ದಾರಿ ಕಾಣುತ್ತಾ ಸಾಗಬಹುದಾಗಿದೆ. ಇಂಥ ಆಧುನಿಕ ಸೌಲಭ್ಯಗಳ ಮಧ್ಯೆಯೂ ಗುಹಾಂತರ ವಿಸ್ಮಯಕ್ಕೇನೂ ಕೊರತೆಯಾಗುವುದಿಲ್ಲ. ದೇವರ ದರ್ಶನ ಹತ್ತಿರವಾದಂತೆ, ಒಂದು ಸರಳು, ಜನರನ್ನು ಗುಂಪುಗಳನ್ನಾಗಿ ವಿಂಗಡಿಸುವಂತಿರುತ್ತದೆ. ದರ್ಶನಕ್ಕೆ ಹೋಗುವವರು ಆ ಸರಳಿನ ಬದಿಯಲ್ಲಿ ಹೋದರೆ, ದರ್ಶನ ಮುಗಿಸಿಕೊಂಡು ಬರುವವರು ಅದರ ಇನ್ನೊಂದು ಬದಿಯಿಂದ ಬರುತ್ತಿರುತ್ತಾರೆ.

ಭಗವಾನ್ ನರಸಿಂಹದೇವನ ಮೂರ್ತಿ, ಗವಿಯಂಥ ಗುಡಿಯೊಳಗಿದ್ದು , ನಾವು ನೀರಿನಿಂದೆದ್ದು ಮೆಟ್ಟಿಲು ಹತ್ತಿ ಒಳಗೆ ಹೋಗಿ ದರ್ಶನ ಪಡೆಯಬೇಕಾಗುತ್ತದೆ. ನರಸಿಂಹದೇವರ ಮೂರ್ತಿಯಲ್ಲಿ ಕೆಳಗೆ ಪಾದುಕೆಗಳು, ಮಧ್ಯೆ ದೊಡ್ಡ ಶಾಲಗ್ರಾಮ ಶಿಲೆ ಮತ್ತು ಮೇಲೆ ನಾಲಗೆಯನ್ನು ಹೊರಚಾಚಿರುವ ಉಗ್ರರೂಪದ ಸಿಂಹಮುಖ, ಹೀಗೆ ಮೂರು ಭಾಗಗಳಿವೆ. ಈ ನರಸಿಂಹದೇವರು ಬಹಳ ಉಗ್ರರೂಪಿಯಾಗಿದ್ದು , ಬಹು ಶಕ್ತಿಶಾಲಿ ಹಾಗೂ ವಿಘ್ನನಿವಾರಕನೆಂದು ಹೇಳಲಾಗಿದೆ. ನರಸಿಂಹ ಗುಡಿಯ ಬಲಕ್ಕೆ ಇನ್ನೊಂದು ಪುಟ್ಟ ಗುಡಿಯಿದ್ದು ಇಲ್ಲಿ ಶಿವಲಿಂಗ ಮತ್ತು ಅದರ ಎದುರಿಗೆ ನಂದಿಯ ಮೂರ್ತಿಯಿದೆ ದಿನವಿಡೀ ಪೂಜಾರ್ಚನೆಗಳು ನಡೆಯುತ್ತಿದ್ದು ಭಕ್ತರಿಗೆ ತೆಂಗಿನಕಾಯಿ ಪ್ರಸಾದ ನೀಡಲಾಗುತ್ತದೆ. ಇಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ , ಶ್ರೀ ನರಸಿಂಹ ಜಯಂತಿ.

ಸ್ಥಳಪುರಾಣ:
ಈ ಗುಹಾಂತರ ದೇವಾಲಯ ಎಷ್ಟು ಅದ್ಭುತವಾಗಿದೆಯೋ, ಇದರ ಸ್ಥಳಪುರಾಣ ಅಷ್ಟೇ ಸ್ವಾರಸ್ಯವಾಗಿದೆ. ಸ್ಥಳಪುರಾಣದ ಪ್ರಕಾರ, ಹಿಂದೆ ಕೃತಯುಗದಲ್ಲಿ ಈ ಸ್ಥಳ ದಂಡಕಾರಣ್ಯವೆಂಬ ಕಾಡಾಗಿತ್ತು. ಆಗ ಇಲ್ಲಿ ಝರಾಸುರನೆಂಬ ರಾಕ್ಷಸನು ವಾಸಿಸುತ್ತಿದ್ದ. ಮಹಾ ಪರಾಕ್ರಮಿಯಾಗಿದ್ದ ಅವನು ಮಹಾಶಿವಭಕ್ತನೂ ಆಗಿದ್ದ. ಇಲ್ಲಿನ ಒಂದು ಪರ್ವತದಲ್ಲಿ ಈ ಗುಹೆಯನ್ನು ಕೊರೆದು ಇದರಲ್ಲಿ ಶಿವಲಿಂಗವನ್ನು ಪೂಜಿಸುತ್ತಿದ್ದ. ಆದರೆ ದುಷ್ಟನಾಗಿದ್ದ ಇವನು ಋಷಿಮುನಿಗಳನ್ನೂ ಸಾಮಾನ್ಯ ಜನರನ್ನೂ ಹಿಂಸಿಸುತ್ತಿದ್ದ. ಅವರೆಲ್ಲರೂ ಭಗವಾನ್ ನರಸಿಂಹದೇವನನ್ನು ಪ್ರಾರ್ಥಿಸಲು, ಶ್ರೀ ನರಸಿಂಹದೇವನು ಪ್ರತ್ಯಕ್ಷನಾಗಿ ಝರಾಸುರನೊಂದಿಗೆ ಯುದ್ಧ ಮಾಡಿ ಅವನನ್ನು ಸೋಲಿಸಿ ಅವನ ಗುಹೆಗೆ ಅಟ್ಟಿಸಿಕೊಂಡು ಹೋದನು. ಅವನನ್ನು ಇನ್ನೇನು ಸಂಹರಿಸಬೇಕೆನ್ನುವಷ್ಟರಲ್ಲಿ ಅವನ ಶಿವಭಕ್ತಿಗೆ ಮೆಚ್ಚಿ ಶ್ರೀನರಸಿಂಹನು, “ನಿನ್ನ ಕಡೆಯ ಇಚ್ಛೆಯೊಂದನ್ನು ಹೇಳು, ಅದನ್ನು ನೆರವೇರಿಸುತ್ತೇನೆ, ಆದರೆ ಅದು ಸದಿಚ್ಛೆಯಾಗಿರಬೇಕು” ಎಂದು ವರ ಕೊಡಲು ಮುಂದಾದನು. ಆಗ ಝರಾಸುರನು, ತಾನಿನ್ನು ಸಾಯುವುದು ಖಂಡಿತವೆಂದು ಮನಗಂಡು, “ನನ್ನ ಹೆಸರು ಅಮರವಾಗಬೇಕು. ನೀನು ಭಕ್ತರನ್ನು ಅನುಗ್ರಹಿಸುತ್ತಾ ಇಲ್ಲಿಯೇ ನೆಲೆಸಬೇಕು. ನನ್ನ ಹೆಸರು ಮೊದಲಿರುವಂತೆ ನಿನ್ನ ಹೆಸರಾಗಬೇಕು” ಎಂದು ವರ ಬೇಡಿದನು. ಅದಕ್ಕೆ ನರಸಿಂಹನು, “ಆಗಲಿ, ಝರಾಸುರನೆಂಬ ಹೆಸರಿನ ನೀನು ಇಂದಿನಿಂದ ಅಸುರಭಾವದಿಂದ ಮುಕ್ತನಾದ ಕಾರಣ, ಕೇವಲ ಝರ ಎಂದು ಪ್ರಸಿದ್ಧನಾಗು. ನಿನ್ನ ಹೆಸರಿನಲ್ಲಿ ಇಲ್ಲಿ ನೀರನ್ನು ಸೃಷ್ಟಿಸಿ ಝರಾನರಸಿಂಹನೆಂಬ ಹೆಸರಿನಿಂದ ನೆಲೆಸುತ್ತೇನೆ. ನನ್ನ ದರ್ಶನ ಪಡೆಯಬೇಕಾದರೆ ಭಕ್ತರು ನಿನ್ನ ಹೆಸರಿನ ಈ ಝರಾ ಎಂಬ ನೀರಿನ ಮೂಲಕವೇ ನಡೆದು ಬರಬೇಕಾಗುತ್ತದೆ. ಹೀಗಾಗಿ ನಿನ್ನ ಹೆಸರೇ ಮೊದಲು ಬಂದು ಅಮರವಾಗುತ್ತದೆ.” ಎಂದು ವರವಿತ್ತು ಅವನನ್ನು ಸಂಹರಿಸಿ ಅವನಿಗೆ ಮುಕ್ತಿಯನ್ನಿತ್ತನು.

ಹೀಗೆ ಹೇಳಿ ಶ್ರೀ ನರಸಿಂಹದೇವನು ಝರಾ ಎಂಬ ಹೆಸರಿನ ನೀರನ್ನು ಸೃಷ್ಟಿಸಿ ತಾನು ಆ ಗುಹೆಯಲ್ಲೇ ಝರಾನರಸಿಂಹನೆಂಬ ಹೆಸರಿನಲ್ಲಿ ನೆಲೆಸಿದನು. ಈ ಕಾರಣದಿಂದಲೇ ಇಲ್ಲಿ ಸದಾ ನೀರು ತುಂಬಿರುತ್ತದೆ. ಭಕ್ತರು ಈ ನೀರಿನ ಮೂಲಕವೇ ಸಾಗಿ ಭಗವಂತನ ದರ್ಶನ ಪಡೆಯಬೇಕಾಗುತ್ತದೆ. ಕ್ರಮೇಣ, ಝರಾನರಸಿಂಹ ಎನ್ನುವುದು ಝರಣೀನರಸಿಂಹ ಎಂದಾಯಿತು. ಝರಣಿ ಎಂದರೆ ಝರಿ ಅಥವಾ ನೀರು ಎಂದೂ ಆಗುತ್ತದೆ. ಝರಾಸುರನು ಪೂಜಿಸುತ್ತಿದ್ದ ಶಿವಲಿಂಗವೇ ಇಲ್ಲಿರುವ ಶಿವಲಿಂಗ ಎಂದು ಹೇಳುತ್ತಾರೆ. ಸಾಲಿಗ್ರಾಮ ಶಿಲೆಸಹಿತವಾದ ಶ್ರೀನರಸಿಂಹದೇವನ ವಿಗ್ರಹ ಉದ್ಭವಮೂರ್ತಿ ಎಂದು ಹೇಳುತ್ತಾರೆ.