ಕೃಷ್ಣನ ಪವಿತ್ರ ನಾಮ, ಚಾರಿತ್ರ್ಯ, ಲೀಲೆ ಮತ್ತು ಚಟುವಟಿಕೆಗಳು ಕಲ್ಲು ಸಕ್ಕರೆಯಂತೆ ಅಲೌಕಿಕವಾದ ರುಚಿ (ಸಿಹಿ). ಮೌಢ್ಯದ ಕಾಮಾಲೆ ರೋಗ ಪೀಡಿತರ ನಾಲಗೆಯು ಯಾವುದೇ ಸಿಹಿಯ ರುಚಿ ನೋಡದಿದ್ದರೂ ಈ ಸಿಹಿಯಾದ ಹೆಸರುಗಳನ್ನು ಎಚ್ಚರದಿಂದ ಪ್ರತಿ ದಿನ ಜಪಿಸಿದರೆ, ಅದೊಂದು ಅದ್ಭುತ. ಆಗ ಅವರ ನಾಲಗೆ ಸ್ವಾಭಾವಿಕವಾಗಿ ರುಚಿ ನೋಡಬಹುದು ಮತ್ತು ಅವರ ರೋಗವು ಕ್ರಮೇಣ ಮೂಲೋತ್ಪಾಟನೆಯಾಗುತ್ತದೆ.
– ಶ್ರೀಲ ರೂಪ ಗೋಸ್ವಾಮಿ, ಶ್ರೀ ಉಪದೇಶಾಮೃತ, ಮಂತ್ರ 7
* * * *
ವಸುದೇವ ಸುತನಾದ, ದೇವಕಿಯ ನಂದನನಾದ, ನಂದ ಮತ್ತು ವೃಂದಾವನದ ಇತರ ಗೋವಳಿಗರ ಕುವರನಾದ, ಗೋವುಗಳು ಮತ್ತು ಇಂದ್ರಿಯಗಳ ಚೇತೋಹಾರಿಯಾದ, ಆ ಭಗವಂತನಿಗೆ ನನ್ನ ಗೌರವ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ.
– ರಾಣಿ ಕುಂತಿ, ಶ್ರೀಮದ್ ಭಾಗವತ, 1.8.21
* * * *
ಬದುಕಿನ ಈ ಮೂಲಭೂತ ಅಂಶವನ್ನು ನೀವು ಅರ್ಥ ಮಾಡಿಕೊಳ್ಳಬೇಕು – ಈ ಬದುಕು ತಾತ್ಕಾಲಿಕ ಮತ್ತು ಅನೇಕ ರೀತಿಯ ಸಂಕಷ್ಟಗಳಿಂದ ತುಂಬಿದೆ. ಆದುದರಿಂದ, ಪವಿತ್ರ ನಾಮದ ಆಶ್ರಯ ಪಡೆಯಿರಿ ಮತ್ತು ನಿಮ್ಮ ಶಾಶ್ವತ ಕೆಲಸ ಎಂಬಂತೆ ಭಗವಂತನ ಸೇವೆಯಲ್ಲಿ ಸದಾ ನಿರತರಾಗಿರಿ.
– ಶ್ರೀಲ ಭಕ್ತಿ ವಿನೋದ ಠಾಕುರ
* * * *
ಹುಟ್ಟು ಸಾವುಗಳ ಚಕ್ರದಲ್ಲಿ ಸಿಕ್ಕಿದ ಜೀವಿಯು, ತನಗೆ ಕಷ್ಟವನ್ನು ತರುವಂತಹ ಈ ಭೌತಿಕ ಶರೀರದಿಂದ ಹೇಗೆ ಬಿಡುಗಡೆ ಹೊಂದಬಹುದು ಎಂಬುದನ್ನು ತಿಳಿದಿಲ್ಲ. ಆದರೆ ಪರಮ ಪ್ರಭುವಾದ ನೀನು, ನಾನಾರೂಪಗಳಲ್ಲಿ ಧರೆಗಿಳಿದು, ನಿನ್ನ ಲೀಲೆಗಳಿಂದ, ನಿನ್ನ ಕೀರ್ತಿಪ್ರಭೆಯಿಂದ ಆತ್ಮ ಪಥವನ್ನು ಬೆಳಗುವೆ. ಅಂತಹ ನಿನಗೆ ನಾನು ಶರಣಾಗುತ್ತೇನೆ.
– ಶ್ರೀ ಕೃಷ್ಣನಿಗೆ ಶ್ರೀ ನಾರದ ಮುನಿ, ಶ್ರೀಮದ್ ಭಾಗವತ, 10.70.39
* * * *
ಗೋಕುಲದ ಒಡೆಯನಾದ ಕೃಷ್ಣನು ಅಲೌಕಿಕ ದೇವೋತ್ತಮ ಪರಮ ಪುರುಷ, ಆನಂದಪರವಶತೆಯ ಶಾಶ್ವತ ರೂಪ. ಅವನು ಪರಮರಲ್ಲಿ ಪರಮ. ಅಲೌಕಿಕ ಸಾಮ್ರಾಜ್ಯದ ಸಂತಸದಲ್ಲಿ ಪೂರ್ಣ ಲೀನವಾಗಿದ್ದಾನೆ ಮತ್ತು
ಲೌಕಿಕದ ಮಾಮೂಲಿ ಶಕ್ತಿಯೊಂದಿಗೆ ಸಂಬಂಧವಿಲ್ಲ.
– ಶ್ರೀ ಬ್ರಹ್ಮ, ಬ್ರಹ್ಮಸಂಹಿತೆ: 5.6
* * * *






Leave a Reply