ದೇವರ ಸಾಮ್ರಾಜ್ಯಕ್ಕೂ ಅವನ ಭಕ್ತಿಪೂರ್ವಕ ಸೇವೆಗೂ ಯಾವುದೇ ವ್ಯತ್ಯಾಸವಿಲ್ಲ. ಅವೆರಡೂ ಪರಾತ್ಪರ ನೆಲೆಯಲ್ಲಿರುವುದರಿಂದ ದೇವೋತ್ತಮನ ಪ್ರೇಮಪೂರ್ವಕ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿರುವುದೆಂದರೆ ಆಧ್ಯಾತ್ಮಿಕ ರಾಜ್ಯವನ್ನು ಪಡೆದಂತೆಯೇ.
– ಭಗವದ್ಗೀತೆ, 2.72 ಭಾವಾರ್ಥ,
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
* * * *
ಪರಾತ್ಪರದೊಂದಿಗೆ ಕೃಷ್ಣ ಪ್ರಜ್ಞೆಯಲ್ಲಿ ಸಂಬಂಧ ಹೊಂದದವನಿಗೆ ಅಲೌಕಿಕ ಬುದ್ಧಿಶಕ್ತಿಯಾಗಲೀ ಸ್ಥಿರವಾದ ಮನಸ್ಸಾಗಲೀ ಇರುವುದಿಲ್ಲ. ಇವುಗಳಿಲ್ಲದೆ ಶಾಂತಿ ಇರುವುದಿಲ್ಲ. ಶಾಂತಿ ಇಲ್ಲದವನಿಗೆ ಸುಖವೆಲ್ಲಿಯದು?
– ಶ್ರೀ ಕೃಷ್ಣ, ಭಗವದ್ಗೀತೆ, 2.66
* * * *
ಜಗತ್ತಿನ ಏಕೈಕ ಮಾಲೀಕನೂ ಬ್ರಹ್ಮಾಂಡದ ಪ್ರಭುವೂ ಆದ ಭಗವಾನ್ ಶ್ರೀ ಕೃಷ್ಣನು ಎಲ್ಲರಿಂದಲೂ ಸೇವೆಗೊಳ್ಳಲು ಅರ್ಹನು. ದಿಟವಾಗಿ ಪ್ರತಿಯೊಬ್ಬರೂ ಅವನ ದಾಸರ ದಾಸರೇ ಆಗಿದ್ದಾರೆ. ಅದೇ ಕೃಷ್ಣನು ಈಗ ದೇವೋತ್ತಮ ಪರಮ ಪುರುಷ ಶ್ರೀ ಚೈತನ್ಯ ಮಹಾಪ್ರಭುವಾಗಿ ಇಳಿದು ಬಂದಿದ್ದಾನೆ. ಆದುದರಿಂದ ಎಲ್ಲರೂ ಅವನ ದಾಸರೇ.
– ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿ,
ಶ್ರೀ ಚೈತನ್ಯ ಚರಿತಾಮೃತ, ಆದಿ 6,83-84
* * * *
ಎಲ್ಲೆಲ್ಲಿ ಮಹಿಳೆಯರನ್ನು ಗೌರವಿಸಲಾಗುವುದೋ ಅಲ್ಲೆಲ್ಲ ದೇವತೆಗಳೂ ವಾಸಿಸಲು ಬಯಸುತ್ತಾರೆ. ಎಲ್ಲೆಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಲಾಗುವುದಿಲ್ಲವೋ ಅಲ್ಲಿ ಎಲ್ಲ ಕ್ರಿಯೆಗಳೂ ನಿಷ್ಪ್ರಯೋಜಕ.
– ಮನು ಸಂಹಿತ 3.56
* * * *
ಓ, ನನ್ನ ದೇವರೇ, ಶ್ರೀಲ ವ್ಯಾಸದೇವರ ನೇತೃತ್ವದಲ್ಲಿ ಎಲ್ಲ ಶ್ರೇಷ್ಠ ಋಷಿಗಳು ಆಧ್ಯಾತ್ಮಿಕ ಸತ್ಯದ ವಿಷಯದಲ್ಲಿ ಅತ್ಯಂತ ಪರಿಣತರು, ಅನುಭವಿಗಳು. ಏಕೆಂದರೆ, ಈಗಾಗಲೇ ಹೊರಹೊಮ್ಮಿರುವ ಧರ್ಮಗ್ರಂಥಗಳಲ್ಲಿನ ವಿಷಯಗಳನ್ನು ಅವರು ಪದೇ ಪದೇ ಚರ್ಚಿಸುತ್ತಾರೆ ಮತ್ತು ವಿಶ್ಲೇಷಿಸುತ್ತಾರೆ. ಈ ರೀತಿ ಅವರು ಪವಿತ್ರಗ್ರಂಥಗಳನ್ನು ವಿಶದಪಡಿಸುತ್ತಾರೆ. ಅದು ಎಲ್ಲ ಸದ್ಗುಣಗಳನ್ನು ಹೊಂದಿರುವ ನಿನ್ನ ಶಾಶ್ವತ ರೂಪ ಮತ್ತು ನಿನ್ನ ದೈವಿಕ ಲೀಲೆಗಳನ್ನು ಹೊರಗೆಡಹುತ್ತದೆ. ಇವು ಅಮೃತದಂತಹ ಮಕರಂದದ ಮೂಲ ಸತ್ತ್ವ.
– ಶ್ರೀಲ ಭಕ್ತಿವಿನೋದ ಠಾಕುರ, ಶ್ರೀ ಗೀತಾ ಮಾಲಾ 1.3.1
* * * *