ಓ, ದುಷ್ಟ ಮನವೇ! ನೀನು ಎಂತಹ ವೈಷ್ಣವನೆಂದು ಭಾವಿಸುವೆ? ಪ್ರಾಪಂಚಿಕ ಮನ್ನಣೆ ಎಂಬ ಹುಸಿ ಪ್ರತಿಷ್ಠೆಗಾಗಿ ನೀನು ಏಕಾಂತ ಸ್ಥಳದಲ್ಲಿ ಶ್ರೀ ಹರಿಯ ಪವಿತ್ರ ನಾಮವನ್ನು ಪಠಿಸುವ ಡಾಂಭಿಕ ಪ್ರದರ್ಶನ ತೋರುತ್ತಿರುವೆ – ಇದು ಬೂಟಾಟಿಕೆಯಲ್ಲದೆ ಬೇರೇನೂ ಅಲ್ಲ. ಅಂತಹ ಲೌಕಿಕ ಪ್ರತಿಷ್ಠೆಯು ಹಂದಿಯ ಮಲದಷ್ಟೇ ಹೇಸಿಗೆ ಉಂಟು ಮಾಡುತ್ತದೆ. ಇದು ಮಾಯೆಯ ಶಕ್ತಿಯು ಸೃಷ್ಟಿಸಿದ ಭ್ರಮೆ ಎಂಬುವುದು ನಿನಗೆ ತಿಳಿಯದೇ? ಹೆಣ್ಣು-ಹೊನ್ನುಗಳನ್ನು ಆನಂದಿಸುವ ಕುರಿತು ಹಗಲೂ ರಾತ್ರಿ ಯೋಚಿಸುವುದರ ಫಲವಾದರೂ ಏನು? ಇವುಗಳೆಲ್ಲಾ ತಾತ್ಕಾಲಿಕ.
– ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಠಾಕುರ, ದುಷ್ಟ ಮನ
* * * *
ಓ, ನನ್ನ ಶ್ರೀ ಹರಿ! ಎಲ್ಲ ಶಕ್ತಿಗಳೂ ನಿನ್ನ ನಿಯಂತ್ರಣದಲ್ಲಿರುವುದರಿಂದ ನೀನು ಎಲ್ಲ ಉತ್ತಮ ಗುಣಗಳನ್ನು ಹೊಂದಿರುವೆ. ನೀನು ಉದಾತ್ತ ಹೃದಯಿ, ಪ್ರಾಮಾಣಿಕ, ಪರಿಶುದ್ಧ, ತಾಳ್ಮೆ ಉಳ್ಳವ, ಕರುಣಾಮೂರ್ತಿ, ಮಧುರ, ಎಲ್ಲರಿಗೂ ಸಮ, ಯಶಸ್ವೀ, ನೀನು ಅತ್ಯುತ್ತಮ, ಅತ್ಯಂತ ಪ್ರಶಂಸನಾರ್ಹ ಮತ್ತು ಮಹಾ ಪುರುಷ. ಮಧುವಿನಂತಹ ಅಮರವಾದ ಮಂಗಳಕರ ಗುಣಗಳಿಗೆ ನೀನು ಮೂಲ. ಆದುದರಿಂದ ನೀನು ಎಲ್ಲ ಆಧ್ಯಾತ್ಮಿಕ ವೈಭವಗಳನ್ನು ಹೊಂದಿದವನು. ಎಲ್ಲ ಆತ್ಮಗಳು ನಿನ್ನ ಅಸೀಮಿತ, ಪೂರ್ಣ ಗುಣಗಳ ಮಹಾ ಸಾಗರದ ಒಂದು ಹನಿಯನ್ನಷ್ಟೇ ವೈಯಕ್ತಿಕವಾಗಿ ತೋರಬಲ್ಲವು. ಈ ರೀತಿ ನೀನು ಎಲ್ಲ ಸಾಮರ್ಥ್ಯಗಳ ಪರಿಪೂರ್ಣ ಶಕ್ತಿ ಮೂಲ.
– ಶ್ರೀಲ ಭಕ್ತಿವಿನೋದ ಠಾಕುರ, ಗೀತಾ ಮಾಲ
* * * *
ಇಬ್ಬರು ಪ್ರಭುಗಳಾದ, ನಿತಾಯ್ – ಗೌರಚಂದ್ರ ಕರುಣಾಮಯಿಗಳು. ಅವರು ಎಲ್ಲ ಅವತಾರಗಳ ಸಾರ. ಈ ಆವಿರ್ಭಾವಗಳ ವೈಶಿಷ್ಟ್ಯವೆಂದರೆ ಅವರು ಅತ್ಯಂತ ಆನಂದ ನೀಡುವ ಕೀರ್ತನ-ನರ್ತನ ವಿಧಾನವನ್ನು ಆರಂಭಿಸಿದರು. ನನ್ನ ಪ್ರೀತಿಯ ಸೋದರ, ನೀನು ಶ್ರೀ ಚೈತನ್ಯ ಮತ್ತು ನಿತ್ಯಾನಂದರನ್ನು ದೃಢ ಮನಸ್ಸು ಮತ್ತು ಶ್ರದ್ಧೆಯಿಂದ ಪೂಜಿಸು ಎಂದು ಕೋರುವೆ. ಈ ವಿಧಾನದಿಂದ ಕೃಷ್ಣ ಪ್ರಜ್ಞೆಯಲ್ಲಿ ತೊಡಗಲು ಅಪೇಕ್ಷಿಸುವವರು ಇಂದ್ರಿಯ ಸುಖವನ್ನು ತ್ಯಜಿಸಬೇಕು. ನೀವು ಯಾವುದೇ ಪ್ರಲೋಭನೆ ಇಲ್ಲದೆ ಸುಮ್ಮನೆ, “ಹರೇ ಕೃಷ್ಣ! ಹರಿ ಹರಿ!” ಎಂದು ಜಪಿಸಬೇಕು.
– ಶ್ರೀಲ ಲೋಚನ ದಾಸ ಠಾಕುರ, ಗೌರ ನಿತ್ಯಾನಂದೇರ್ ದಯಾ
* * * *






Leave a Reply