ಹೇ, ಪರಮ ಪ್ರಭುವೇ, ನಿರ್ವಿಕಾರನೇ, ಅನಂತನೇ, ಪರಮ ಸತ್ಯನೇ, ನೀನು ಎಲ್ಲದಕ್ಕೂ ಆದಿಯಾಗಿರುವವನು. ಸರ್ವವ್ಯಾಪಕನಾಗಿದ್ದು, ನೀನು ಪ್ರತಿಯೊಬ್ಬನ ಹೃದಯದಲ್ಲಿಯೂ ಅಣುವಿನಲ್ಲಿಯೂ ಇರುವೆ. ಭೌತಿಕ ಗುಣಗಳು ನಿನಗಿಲ್ಲ. ನಿಜವಾಗಿಯೂ ನೀನು ಅಚಿಂತ್ಯನು. ಊಹಾಪೋಹಗಳಿಂದ ಮನಸ್ಸು ನಿನ್ನನ್ನು ಹಿಡಿದುಕೊಳ್ಳಲಾರದು. ಮತ್ತು ಶಬ್ದಗಳು ನಿನ್ನನ್ನು ವರ್ಣಿಸುವಲ್ಲಿ ವಿಫಲಗೊಳ್ಳುವುವು. ನೀನು ಪ್ರತಿಯೊಬ್ಬರಿಗೂ ಪರಮ ಒಡೆಯ. ಮತ್ತು ಅದೇ ಕಾರಣದಿಂದ ಪ್ರತಿಯೊಬ್ಬರಿಗೂ ನೀನು ಆರಾಧ್ಯನು. ಆದುದರಿಂದ ನಿನಗೆ ನಮ್ಮ ಗೌರವಯುತವಾದ ನಮನಗಳನ್ನು ಸಲ್ಲಿಸುತ್ತೇವೆ.
– ಶ್ರೀ ಬ್ರಹ್ಮ, ಶ್ರೀಮದ್ ಭಾಗವತ, 8.5.26
* * * *
ಆತ್ಮ ಸಾಕ್ಷಾತ್ಕಾರಕ್ಕಿಂತ ಬೇರೆ ವಿಷಯಗಳು ಹೆಚ್ಚು ಪ್ರಿಯವಾದುವೆಂದು ಭಾವಿಸುವುದಕ್ಕಿಂತ ಆತ್ಮಹಿತಕ್ಕೆ ಪ್ರಬಲವಾಗಿ ಅಡ್ಡಿ ಮಾಡುವ ವಿಷಯ ಬೇರೊಂದಿಲ್ಲ.
– ಸನತ್ ಕುಮಾರ, ಶ್ರೀಮದ್ ಭಾಗವತಂ, 4.22.32
* * * *
ಪರಮ ದೇವೋತ್ತಮನು ಸಮಸ್ತವನ್ನೂ ಆಧರಿಸಿರುವ ಪರಮ ವೇದಿಕೆಯಾಗಿದ್ದಾನೆ. ಸಮಸ್ತವನ್ನೂ ಉತ್ಪಾದಿಸುವ ದ್ರವ್ಯವಾಗಿದ್ದಾನೆ. ಅವನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ ಮತ್ತು ಅದರ ಏಕೈಕ ಕಾರಣನಾಗಿದ್ದಾನೆ. ಆದರೂ ಅವನು ಕಾರ್ಯ ಕಾರಣಗಳಿಂದ ವಿಭಿನ್ನನಾಗಿದ್ದಾನೆ. ಸಮಸ್ತದಲ್ಲಿಯೂ ಸ್ವಯಂ ಪೂರ್ಣನಾಗಿರುವ ದೇವೋತ್ತಮ ಪರಮ ಪುರುಷನಿಗೆ ನಾನು ಶರಣಾಗುತ್ತೇನೆ.
– ಗಜೇಂದ್ರ, ಶ್ರೀಮದ್ ಭಾಗವತ, 8.3.3
* * * *
ಓ, ಪರಮ ಪ್ರಭುವೇ, ದೇವತೆಗಳು ಯಾರನ್ನು ಎಲ್ಲದರ ಪರಮ ನಿಯಾಮಕನೆಂದು ಆರಾಧಿಸುತ್ತಾರೆಯೋ ಅಂತಹ ನಿನಗೆ ನಾನು ಆತ್ಮ ಸಾಕ್ಷಾತ್ಕಾರವನ್ನು ಪಡೆಯುವ ಸಲುವಾಗಿ ಶರಣಾಗುತ್ತೇನೆ. ನಿನ್ನ ಉಪದೇಶಗಳಿಂದ, ಜೀವನೋದ್ದೇಶವನ್ನು ಪ್ರಕಟಿಸುತ್ತಾ ದಯವಿಟ್ಟು ನನ್ನ ಹೃದಯಾಂತರಾಳದಿಂದ ಗಂಟನ್ನು ಕತ್ತರಿಸಿ ಹಾಕು. ನಾನು ನನ್ನ ಬದುಕಿನ ಗುರಿಯನ್ನು ಅರಿಯುವಂತೆ ಮಾಡು.
– ರಾಜ ಸತ್ಯವ್ರತ, ಶ್ರೀಮದ್ ಭಾಗವತ, 8.24.53
* * * *