(ಚಿತ್ರಕೇತುವಿನ ಕಥೆ)
ಆಧಾರ: ಭಾಗವತದ ಕಥೆಗಳು 6ನೇ ಸ್ಕಂಧ, ಅಧ್ಯಾಯ 14-17
ತ್ವಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ ಚಿತ್ರಕೇತು ಮಹಾರಾಜನಾಗಿ ಜೀವಿಸಿದ್ದ. ಶಿವಾನಿ ಪಾರ್ವತೀದೇವಿಯ ಕೋಪಕ್ಕೆ ತುತ್ತಾಗಿ, ಶಪಿಸಲ್ಪಟ್ಟು ಅಸುರನಾಗಿ ಜನಿಸಿದ್ದ. ಅಂತಹ ಚಿತ್ರಕೇತು ಮಹಾರಾಜನ ಕಥೆ ಇದು.
ಶ್ರೀ ಶುಕಮಹರ್ಷಿಗಳು ಪರೀಕ್ಷಿತನಿಗೆ ಹೇಳಿದ ವೃತ್ರಾಸುರನ ಕಥೆ ಅದ್ಭುತವಾಗಿದ್ದಂತೆಯೇ ಬಹಳ ಆಶ್ಚರ್ಯಕರವೂ ಆಗಿತ್ತು. ಮಹಾಪರಾಕ್ರಮಿಯೂ ಘೋರರೂಪಿಯೂ ಆಗಿದ್ದ ವೃತ್ರಾಸುರನು ಯುದ್ಧ ಮಧ್ಯದಲ್ಲೇ ತತ್ತ್ವಜ್ಞಾನಿಯಂತೆ ಮಾತನಾಡಿದನಲ್ಲದೇ ಭಕ್ತಿಯಿಂದ ಭಗವಂತನನ್ನೂ ಸ್ತುತಿಸಿದನು. ಇದು ಪರೀಕ್ಷಿತನಿಗೆ ಬಹಳ ಅಚ್ಚರಿಯುಂಟು ಮಾಡಿತು. ರಜಸ್ತಮೋಗುಣಗಳಲ್ಲಿರುವ ರಾಕ್ಷಸರು ಸಾಮಾನ್ಯವಾಗಿ ದುಷ್ಟರು; ಪರಪೀಡಕರು. ಅಂಥ ಒಬ್ಬ ರಾಕ್ಷಸನಾದ ವೃತ್ರನು ಶ್ರೀಮನ್ನಾರಾಯಣನ ಭಕ್ತನಾದುದು ಹೇಗೆ? ಕೋಟಿ ಜನರಲ್ಲಿ ಒಬ್ಬನಿಗೆ ಉಂಟಾಗಬಹುದಾದ ದುರ್ಲಭ ಭಕ್ತಿ ವೃತ್ರನಿಗೆ ಹೇಗುಂಟಾಯಿತು? ಹೀಗೆ ಪರೀಕ್ಷಿತನು ಶುಕಮಹರ್ಷಿಗಳನ್ನು ಪ್ರಶ್ನಿಸಿದನು. ಇದಕ್ಕುತ್ತರವಾಗಿ, ಶುಕಮಹರ್ಷಿಗಳು ವ್ಯಾಸ, ನಾರದ, ದೇವಲರಿಂದ ಕೇಳಿದ್ದ ವೃತ್ರಾಸುರನ ಪೂರ್ವೇತಿಹಾಸವನ್ನು ಹೇಳಿದರು.
* * *

ಶೂರಸೇನವೆಂಬ ರಾಜ್ಯದಲ್ಲಿ ಚಿತ್ರಕೇತು ಎಂಬ ಸಾರ್ವಭೌಮನು ಭೂಮಿಯನ್ನಾಳುತ್ತಿದ್ದನು. ಧಾರ್ಮಿಕನಾದ ಅವನ ಆಳ್ವಿಕೆಯಲ್ಲಿ ಭೂಮಿಯು ಕಾಮಧೇನುವಿನಂತೆ ಸಕಲ ಸಮೃದ್ಧಿಗಳನ್ನೂ ಉಂಟುಮಾಡಿತ್ತು. ಆ ರಾಜನಿಗೋ, ಸಹಸ್ರಾರು ಪತ್ನಿಯರಿದ್ದರು. ತನ್ನ ಎಲ್ಲ ಪತ್ನಿಯರಲ್ಲೂ ಸಮಾನ ಪ್ರೀತಿಯಿರಿಸಿದ್ದ ಅವನು ಯಥೇಚ್ಛವಾಗಿ ಸುಖ ಭೋಗಗಳನ್ನನುಭವಿಸುತ್ತಿದ್ದನು. ಆದರೆ ಕ್ಷೀರವರ್ಣದ ಪೂರ್ಣಚಂದಿರನಲ್ಲೂ ಒಂದು ಕಪ್ಪುಮಚ್ಚೆಯ ಪುಟ್ಟ ದೋಷವಿರುವಂತೆ, ಇವನ ಸುಂದರ ಜೀವನದಲ್ಲೂ ಒಂದು ಕಪ್ಪು ಮಚ್ಚೆಯ ಪುಟ್ಟ ದುಃಖವಿತ್ತು. ಅದೇನೆಂದರೆ, ಅವನಿಗೆ ಅಷ್ಟೊಂದು ಪತ್ನಿಯರಿದ್ದರೂ ಯಾರಲ್ಲಿಯೂ ಅವನಿಗೆ ಒಂದೇ ಒಂದು ಸಂತಾನವಾಗಲಿಲ್ಲ. ಅವನ ಅಸಂಖ್ಯಪತ್ನಿಯರಾದರೋ, ತಮ್ಮ ಮುದ್ದಾದ ಮೊಗಗಳಿಂದಲೂ ಸುಂದರ ಕಂಗಳಿಂದಲೂ, ಒಬ್ಬರಿಗಿಂತೊಬ್ಬರು ಸುಂದರಿಯರಾಗಿದ್ದರು. ಆದರೆ ಅವರಾಗಲೀ, ರಾಜ್ಯಭೋಗಗಳಾಗಲೀ ಯಾವುದೂ ಅವನಿಗೆ ಸುಖದಾಯಕವಾಗಲಿಲ್ಲ. ಮಕ್ಕಳಿಲ್ಲದ ಮನೆ, ಎಷ್ಟಿದ್ದರೂ ಶೂನ್ಯವಲ್ಲವೇ? ಚಿತ್ರಕೇತುವಿಗೆ ಇದೊಂದು ದೊಡ್ಡ ಚಿಂತೆಯಾಯಿತು.
ಒಂದು ದಿನ ಲೋಕಸಂಚಾರ ಮಾಡುತ್ತಿದ್ದ ಅಂಗಿರಸರೆಂಬ ಮಹರ್ಷಿಗಳು, ರಾಜಾ ಚಿತ್ರಕೇತುವನ್ನು ಭೇಟಿ ಮಾಡಲೆಂದು ಅವನ ಅರಮನೆಗೆ ಆಗಮಿಸಿದರು. ಆಗ ಚಿತ್ರಕೇತುವು ಕೂಡಲೇ ತನ್ನ ಸಿಂಹಾಸನದಿಂದೆದ್ದು ಅವರಿಗೆ ಅರ್ಘ್ಯ, ಪಾದ್ಯಾದಿಗಳನ್ನರ್ಪಿಸಿ ವಿಧಿವತ್ತಾಗಿ ಸಂಪೂಜಿಸಿ ಉತ್ತಮ ಆಸನವನ್ನರ್ಪಿಸಿದನು. ಅವರು ಸುಖಾಸೀನರಾದ ಬಳಿಕ, ಚಿತ್ರಕೇತುವು ವಿನಮ್ರವಾಗಿ ತಲೆಬಾಗಿಸಿಕೊಂಡು ಅವರ ಪಾದಗಳ ಬಳಿ ನೆಲದ ಮೇಲೆಯೇ ಕುಳಿತನು. ಚಿತ್ರಕೇತುವಿನ ಅತಿಥಿಸತ್ಕಾರದಿಂದ ಬಹಳ ಸಂತೋಷಗೊಂಡ ಅಂಗಿರಸರು ಮುಗುಳ್ನಗುತ್ತಾ ಹೇಳಿದರು, “ನಿನ್ನ ಸತ್ಕಾರದಿಂದ ಸುಪ್ರೀತನಾದೆ ರಾಜ ! ಅಂದ ಹಾಗೆ… ನೀನು ಕುಶಲನಾಗಿರುವೆಯಾ? ನಿನ್ನ ತನುಮನಗಳೆರಡೂ ಒಳ್ಳೆಯ ಆರೋಗ್ಯದಿಂದಿವೆಯಷ್ಟೆ? ಹೇ ರಾಜ, ಪ್ರಕೃತಿಯ ಧಾತುಗಳು ಒಬ್ಬ ವ್ಯಕ್ತಿಯನ್ನು ರಕ್ಷಿಸುವಂತೆ, ರಾಜನೊಬ್ಬನನ್ನು ಅವನ ಗುರು, ಅಮಾತ್ಯರು, ರಾಜ್ಯ, ಕೋಟೆ, ಖಜಾನೆ, ರಾಜಾಜ್ಞೆ, ಮತ್ತು ಮಿತ್ರರು ರಕ್ಷಿಸುತ್ತಾರೆ. ಇವರೆಲ್ಲರೂ ತಂತಮ್ಮ ಕರ್ತವ್ಯಗಳಲ್ಲಿ ನಿರತರಾಗಿದ್ದಾರಷ್ಟೆ? ನಿನ್ನ ರಾಣಿ, ಪುತ್ರರು, ಮಂತ್ರಿಗಳು, ಪ್ರಜೆಗಳು, ವರ್ತಕರು, ಪೌರಜನರು, ಜಾನಪದರು, ಜಮೀನುದಾರರು, ಎಲ್ಲರೂ ನಿನ್ನ ವಶಾನುವರ್ತಿಗಳಾಗಿರುವರಷ್ಟೆ? ರಾಜನ ಮನಸ್ಸು ಅವನ ವಶದಲ್ಲಿದ್ದರೆ, ಅವನ ಕುಟುಂಬವೂ ರಾಜ್ಯಾಧಿಕಾರಿಗಳೂ ಅವನ ವಶದಲ್ಲಿರುತ್ತಾರೆ. ಎಲ್ಲರೂ ಕಾಲಕಾಲಕ್ಕೆ ಸರಿಯಾಗಿ ತೆರಿಗೆಗಳನ್ನು ಕಟ್ಟುತ್ತಾರೆ. ಇವೆಲ್ಲಾ ಸರಿಯಾಗಿ ನಡೆಯುತ್ತಿದೆಯಷ್ಟೇ?”
ರಾಜನು ಕೆಲಕ್ಷಣಗಳ ಕಾಲ ಮೌನವಾಗಿದ್ದು, ಅನಂತರ ನಿಟ್ಟುಸಿರುಬಿಡುತ್ತಾ, “ಎಲ್ಲವೂ ಕುಶಲ ಪೂಜ್ಯರೇ!” ಎಂದ.
ಮುಖವು ಮನಸ್ಸಿನ ಕನ್ನಡಿ ಎನ್ನುತ್ತಾರೆ. ರಾಜನ ಮುಖವನ್ನು ನೋಡುತ್ತಲೇ ಅವನ ಮನಸ್ಸು ಸ್ವಸ್ಥವಾಗಿಲ್ಲವೆಂದು ಅಂಗಿರಸರಿಗೆ ತಿಳಿಯಿತು. ಅಂತೆಯೇ ಅವರು ಪ್ರಶ್ನಿಸಿದರು, “ರಾಜಾ! ನೀನು ಯಾವುದೋ ಚಿಂತೆಯಲ್ಲಿರುವಂತಿದೆ. ನೀನು ಯಾವುದೋ ಕಾಮನೆಯನ್ನು ಪೂರೈಸಿಕೊಂಡಿಲ್ಲವೆನಿಸುತ್ತಿದೆ. ಈ ಚಿಂತೆಗೆ ಕಾರಣ ನೀನೆಯೋ ಇಲ್ಲವೇ ಇತರರೋ? ಬಿಳುಚಿಕೊಂಡಿರುವ ನಿನ್ನ ಮುಖ, ನಿನ್ನ ಮನಸ್ಸಿನ ಆಳವಾದ ಚಿಂತೆಯನ್ನು ತೋರಿಸುತ್ತಿದೆ.”
ತ್ರಿಕಾಲ ಜ್ಞಾನಿಗಳಾಗಿದ್ದ ಅಂಗಿರಸ ಋಷಿಗಳಿಗೆ ರಾಜನ ಚಿಂತೆಗೆ ಕಾರಣವೇನೆಂದು ನಿಜವಾಗಿ ತಿಳಿದಿದ್ದರೂ ಹೀಗೆ ಕೇಳಿದರು.
“ಪೂಜ್ಯರೇ!” ರಾಜನು ಹೇಳಿದ, “ತಪೋಜ್ಞಾನ ಸಮಾಧಿಗಳಿಂದ ತಮಗೆ ತಿಳಿಯದಿರುವುದಾದರೂ ಏನಿದೆ? ಯೋಗಿಗಳು ಸಮಸ್ತ ಪಾಪಗಳನ್ನೂ ಪರಿಹರಿಸಿಕೊಂಡು ದೇಹಸ್ಥರಾದ ನಮ್ಮಂಥವರ ಒಳಹೊರಗುಗಳೆಲ್ಲವನ್ನೂ ತಿಳಿಯಬಲ್ಲವರಾಗಿರುತ್ತಾರೆ. ಅಂತಹ ಒಬ್ಬ ಮಹಾನ್ ಯೋಗಿಗಳೇ ಆಗಿರುವ ತಾವೂ ನನ್ನ ವಿಷಯ ತಿಳಿದೂ ಹೀಗೆ ಕೇಳುತ್ತಿರುವಿರಿ. ಆದ್ದರಿಂದ ನಾನೂ ಹೇಳುತ್ತೇನೆ. ಪ್ರಭು, ಹಸಿವಾಗಿರುವ ವ್ಯಕ್ತಿಗೆ ಚಂದನ, ಹಾರ, ಮೊದಲಾದ ಯಾವುದೇ ಸಿಂಗಾರವಸ್ತುಗಳನ್ನು ಕೊಟ್ಟರೂ ತೃಪ್ತಿಯಾಗುವುದಿಲ್ಲ. ಅಂತೆಯೇ ದೇವತೆಗಳೂ ಅಪೇಕ್ಷಿಸುವ ಈ ಮಹಾಸಾಮ್ರಾಜ್ಯ, ವಿಪುಲವಾದ ಐಶ್ವರ್ಯ, ಮೊದಲಾದವುಗಳಿಂದ ಮಕ್ಕಳಿಲ್ಲದ ನನಗೆ ತೃಪ್ತಿಯಾಗುತ್ತಿಲ್ಲ. ಪೂಜ್ಯರೇ, ಮಕ್ಕಳಿಲ್ಲದಿರುವುದೇ ನನ್ನ ಚಿಂತೆಗೆ ಕಾರಣವಾಗಿದೆ. ಇದರಿಂದ ನನ್ನ ಪೂರ್ವಜರೂ ಅಂಧಕಾರದ ನರಕಕ್ಕೆ ಬೀಳುತ್ತಿದ್ದಾರೆ. ಆದ್ದರಿಂದ ಏನಾದರೂ ಮಾಡಿ ನನಗೆ ಪುತ್ರಭಾಗ್ಯ ಕರುಣಿಸಿ. ನನ್ನನ್ನೂ ನನ್ನ ಪೂರ್ವಜರನ್ನೂ ನರಕದಿಂದ ಉದ್ಧರಿಸಿ!”
ಅಂಗಿರಸರು ಕೆಲಕಾಲ ಯೋಚಿಸಿ, “ಧೃತಿಗೆಡಬೇಡ ರಾಜ. ಇದಕ್ಕೊಂದು ಪರಿಹಾರವಿದೆ; ನಾನು ಒಂದು ಯಜ್ಞ ಮಾಡಿ ನಿನಗೆ ಪುತ್ರಸಂತಾನವಾಗುವಂತೆ ಮಾಡುತ್ತೇನೆ.”
ಚಿತ್ರಕೇತುವಿಗೆ ಬಹಳ ಸಂತೋಷವಾಯಿತು. ಅಂಗಿರಸರನ್ನು ಕೃತಜ್ಞತಾದೃಷ್ಟಿಯಿಂದ ನೋಡುತ್ತಾ, “ಧನ್ಯನಾದೆ ಪ್ರಭು!” ಎಂದು ಅವರ ಪಾದಗಳಿಗೆ ನಮಸ್ಕರಿಸಿದನು.
ಅನಂತರ ಅಂಗಿರಸರು ತ್ವಷ್ಟೃವಿನ ಸಂತೃಪ್ತಿಗಾಗಿ ಯಜ್ಞ ಮಾಡಿ, ವಿಶೇಷ ಚರುವೊಂದನ್ನು ಅವನಿಗೆ ಅರ್ಪಿಸಿ ಆರಾಧಿಸಿದರು; ಆ ಬಳಿಕ, ಯಜ್ಞಾವಶಿಷ್ಟವಾಗಿ ಉಳಿದಿದ್ದ ಆ ಚರುವನ್ನು ರಾಜನ ಜೇಷ್ಠಳೂ ಶ್ರೇಷ್ಠಳೂ ಆದ ಪತ್ನಿ ಕೃತದ್ಯುತಿಗೆ ಸೇವಿಸಲೆಂದು ನೀಡಿದರು. ಅನಂತರ, ರಾಜನಿಗೆ ಗೂಢಾರ್ಥವುಳ್ಳ ಒಂದು ಮಾತನ್ನು ಹೇಳಿದರು, “ರಾಜ ಹರ್ಷ ಮತ್ತು ಶೋಕಗಳೆರಡಕ್ಕೂ ಕಾರಣವಾಗುವ ಒಬ್ಬ ಪುತ್ರನು ನಿನಗೆ ಜನಿಸುವನು.” ಹೀಗೆ ಹೇಳಿ ಅವರು ನಿರ್ಗಮಿಸಿದರು.
ಪುತ್ರನು ಹುಟ್ಟುವನು ಎಂದು ಕೇಳಿಸಿಕೊಂಡ ರಾಜ, ವಾಕ್ಯದ ಉಳಿದರ್ಧವನ್ನು ಒಂದಿಷ್ಟೂ ಗಣನೆಗೆ ತೆಗೆದುಕೊಳ್ಳಲಿಲ್ಲ! ಬಹುಶಃ ಕೆಲವಿಚಾರಗಳಲ್ಲಿ ತನಗೆ ಅವಿಧೇಯನಾದ ಮಗನು ಹುಟ್ಟಬಹುದಷ್ಟೆ ಎಂದು ಭಾವಿಸಿ ಸುಮ್ಮನಾದನು.
ಯಜ್ಞಶೇಷವನ್ನು ಸೇವಿಸಿದ ಕೃತದ್ಯುತಿಯು, ಕಾಲಕ್ರಮದಲ್ಲಿ, ಕೃತ್ತಿಕಾದೇವಿಯು ಅಗ್ನಿಯ ಮೂಲಕ ಶಿವವೀರ್ಯವನ್ನು ಪಡೆದು ಗರ್ಭಧರಿಸಿದಂತೆ, ಚಿತ್ರಕೇತುವಿನಿಂದ ಗರ್ಭಧರಿಸಿ, ಶುಕ್ಲಪಕ್ಷದ ಚಂದ್ರನಂತೆ ಕಾಂತಿಯುಕ್ತಳಾದಳು. ರಾಜನಿಗೆ ಆಶಾದಾಯಕವಾದ ಒಂದೊಂದು ದಿನವೂ ಕಳೆದು ನವಮಾಸಗಳು ತುಂಬಲು, ರಾಣಿಯು ಸುಂದರವಾದ ಗಂಡು ಮಗುವೊಂದನ್ನು ಪ್ರಸವಿಸಿದಳು. ಈ ಸಿಹಿಸುದ್ದಿಯನ್ನು ಕೇಳಿ ಶೂರಸೇನ ನಿವಾಸಿಗಳೆಲ್ಲರೂ ಅತ್ಯಂತ ಹರ್ಷಿತರಾದರು. ರಾಜನ ಆನಂದವಂತೂ ಹೇಳತೀರದು! ಸ್ನಾನಾಲಂಕಾರಗಳಿಂದ ಶುಚಿರ್ಭೂತನಾಗಿ, ಮಗುವಿಗೆ ಸ್ವಸ್ತಿವಾಚನಗಳನ್ನು ಉಚ್ಚರಿಸಿ ಜಾತಕರ್ಮವನ್ನು ನಡೆಸಲು ಬ್ರಾಹ್ಮಣ ಶ್ರೇಷ್ಠರನ್ನು ನೇಮಿಸಿದ; ಆ ಮಂಗಳಾಚರಣೆಯ ಬಳಿಕ ಅವರಿಗೆ ಚಿನ್ನ, ಬೆಳ್ಳಿ, ವಸ್ತ್ರಾ ಸಾ್ತ್ರಭರಣಗಳು, ಗ್ರಾಮಗಳು, ಅಶ್ವಗಳು, ಆನೆಗಳು, ಮೊದಲಾದವುಗಳಲ್ಲದೇ ಅರವತ್ತು ಕೋಟಿ ಗೋವುಗಳನ್ನು ದಾನವಾಗಿ ನೀಡಿದ. ಮೋಡವು ಯಥೇಚ್ಛವಾಗಿ ಮಳೆ ಸುರಿಸುವಂತೆ, ರಾಜನೂ ತನ್ನ ಪುತ್ರನ ಆಯುರ್ಯಶೋವರ್ಧನೆಗಾಗಿ ತನ್ನ ಪ್ರಜೆಗಳಿಗೂ ಯಥೇಚ್ಛವಾಗಿ ದಾನ ಮಾಡಿದ.
* * *
ಬಡವನಿಗೆ ಬಹಳ ಪ್ರಯಾಸದ ಬಳಿಕ ಸ್ವಲ್ಪ ಹಣ ದೊರೆತರೆ, ಅವನಿಗೆ ಆ ಹಣದ ಮೇಲೆ ದಿನೇ ದಿನೇ ಪ್ರೀತಿಯು ಅಧಿಕಗೊಳ್ಳುತ್ತದೆ. ಅಂತೆಯೇ, ರಾಜಾಚಿತ್ರಕೇತುವಿಗೂ ಬಹಳ ಕಾಲದ ಬಳಿಕ ಪುತ್ರಪ್ರಾಪ್ತಿಯಾದುದರಿಂದ, ಅವನಿಗೆ ತನ್ನ ಮಗನ ಮೇಲೆ ದಿನೇ ದಿನೇ ಮಮತೆ, ಪ್ರೀತಿಗಳು ಅತೀವವಾದವು. ರಾಜನಂತೆಯೇ, ರಾಣಿ ಕೃತದ್ಯುತಿಗೂ ಮಗನ ಮೇಲೆ ಅತಿಯಾದ ಮೋಹವುಂಟಾಯಿತು. ಅವಳು ಅನವರತವೂ ಮಗುವಿನ ಬೇಕು ಬೇಡಗಳನ್ನು ಗಮನಿಸುವುದರಲ್ಲೂ ಅದನ್ನು ಮುದ್ದಿಸುವುದರಲ್ಲೂ ನಿರತಳಾಗಿದ್ದಳು. ಮಕ್ಕಳಿಲ್ಲದೆ ಬಂಜೆಯರಾಗಿದ್ದ ರಾಜನ ಇತರ ಪತ್ನಿಯರಿಗೆ ಈ ದೃಶ್ಯಗಳು ಹೊಟ್ಟೆಯುರಿ ತಂದವು. ಚಿತ್ರಕೇತುವಾದರೋ, ಮಗುವಿನ ಮೇಲಿನ ಅತಿಪ್ರೀತಿಯ ಕಾರಣದಿಂದ ಕೃತದ್ಯುತಿಯನ್ನು ಹೆಚ್ಚಾಗಿ ಪ್ರೀತಿಸುತ್ತಾ ತನ್ನ ಇತರ ಪತ್ನಿಯರನ್ನು ಉಪೇಕ್ಷಿಸಿದನು. ಗಾಯದ ಮೇಲೆ ಬರೆ ಎಳೆದಂತೆ, ಪುತ್ರಕಾಮದಿಂದ ಬೇಯುತ್ತಿದ್ದ ಅವನ ಇತರ ಪತ್ನಿಯರಿಗೆ ಕೃತದ್ಯುತಿಯಲ್ಲಿ ಮಾತ್ಸರ್ಯವು ಹೆಚ್ಚಿ, ಮೈಮನಸ್ಸುಗಳನ್ನು ಸುಡುವ ಜ್ವರವಾಯಿತು.
“ಛೀ ಮಕ್ಕಳಿಲ್ಲದ ಬಂಜೆ ಹೆಂಗಸರಿಗೆ ಧಿಕ್ಕಾರ.” ಅವರು ದುಃಖಾಸೂಯೆಗಳಿಂದ ತಮ್ಮ ತಮ್ಮಲ್ಲೇ ಹೇಳಿಕೊಂಡರು, “ಮಕ್ಕಳಿಲ್ಲದ ಮಡದಿಯನ್ನು ಗಂಡನು ಉಪೇಕ್ಷಿಸುವನು. ಮನೆಯಲ್ಲಿ ಎಲ್ಲರೂ ಅವಳನ್ನು ಅನಾದರಿಸುವರು. ಅವಳ ಸವತಿಯರು ಅವಳನ್ನು ದಾಸಿಯಂತೆ ನೋಡುವರು. ಪತಿಯನ್ನು ನಿತ್ಯ ಸೇವಿಸುವ ದಾಸಿಯರನ್ನೂ ಅವನು ಗೌರವಿಸುವನು. ಹೀಗಿರಲು ಅವರಿಗೆ ದುಃಖಿಸುವ ಪ್ರಮೇಯವೇನೂ ಇರುವುದಿಲ್ಲ. ಆದರೆ ನಮ್ಮ ದುಸ್ಥಿತಿಯನ್ನು ನೋಡಿ, ಆ ದಾಸಿಯರಿಗೂ ದಾಸಿಯರಂತಾಗಿದ್ದೇವೆ ನಾವು…..! ಅಯ್ಯೋ! ನಾವೇನು ಪಾಪ ಮಾಡಿದ್ದೆವೋ ಏನೋ….?! ಇಷ್ಟು ನಿರ್ಭಾಗ್ಯರಾಗಿದ್ದೇವೆ….!”
ಹೀಗೆ ಪದೇ ಪದೇ ಕೊರಗುತ್ತಲೂ ಮಾತ್ಸರ್ಯದ ಮಾತುಗಳನ್ನಾಡುತ್ತಲೂ ಅವರು ಕೃತದ್ಯುತಿಯಲ್ಲಿ ದೃಢವಾದ ದ್ವೇಷ ಬೆಳೆಸಿಕೊಂಡರು. ಇದರಿಂದ ವಿಚಾರಶಕ್ತಿಯೇ ನಷ್ಟವಾಗಿ, ಎಲ್ಲರೂ ಒಟ್ಟಾಗಿ ಸಮಾಲೋಚಿಸಿ, ಪುಟ್ಟ ರಾಜಕುಮಾರನಿಗೆ ವಿಷಪ್ರಾಶನ ಮಾಡಿಬಿಟ್ಟರು. ಪಾಪ, ಅವನು ಆ ವಿಷಾನ್ನವನ್ನು ತಿಂದು ಸತ್ತುಹೋದ!
ವಸ್ತು ಸ್ಥಿತಿಯನ್ನರಿಯದ ಕೃತದ್ಯುತಿಯು ಮನೆಗೆ ಬಂದಾಗ, ಮಗನು ಬಹಳ ಹೊತ್ತಿನಿಂದ ಮಲಗಿದ್ದಾನೆಂದು ಭಾವಿಸಿ, ಅವನನ್ನು ಎಬ್ಬಿಸಿ ಕರೆತರಲು ತನ್ನ ದಾದಿಗೆ ಹೇಳಿದಳು. ಅವಳು ಮಗುವಿನ ಬಳಿ ಹೋಗಿ ನೋಡಲು, ಅದು ಕಣ್ಣುಗುಡ್ಡೆಗಳನ್ನು ಮೇಲೇರಿಸಿ, ಉಸಿರಾಟದ ಕುರುಹಿಲ್ಲದೇ ಮಲಗಿತ್ತು! ಮಗುವು ಸತ್ತಿದೆಯೆಂದು ಕೂಡಲೇ ಅರಿತ ದಾದಿಯು, “ಅಯ್ಯೊಯ್ಯೋ! ಕೆಟ್ಟೆ !ಕೆಟ್ಟೆ !” ಎಂದು ಜೋರಾಗಿ ಕೂಗುತ್ತಾ ಎದೆಯ ಮೇಲೆ ಹೊಡೆದುಕೊಳ್ಳುತ್ತಾ ನೆಲದ ಮೇಲೆ ಧೊಪ್ಪನೆ ಬಿದ್ದಳು. ಅವಳ ಚೀರಾಟವನ್ನು ಕೇಳಿ ರಾಣಿಯು ಓಡಿ ಬಂದಳು. ತನ್ನ ಮೃತ ಪುತ್ರನನ್ನು ನೋಡುತ್ತಲೇ ದುಃಖಾವೇಷ್ಟಿತಳಾಗಿ ಕೂದಲನ್ನೂ ವಸ್ತ್ರವನ್ನೂ ಕೆದರಿಕೊಂಡು ಮೂರ್ಛೆಬಿದ್ದಳು. ದಾದಿಯ ಚೀರಾಟವನ್ನು ಕೇಳಿ ಅರಮನೆಯಲ್ಲಿದ್ದ ವಿವಿಧ ಪುರುಷರೂ ಸ್ತ್ರೀಯರೂ ಓಡಿಬಂದರು. ರಾಜಪುತ್ರನ ದುರಂತವನ್ನು ನೋಡಿ ಎಲ್ಲರೂ ರೋದಿಸತೊಡಗಿದರು. ಆಗ ಅಲ್ಲಿಗೆ ಬಂದ ಕೃತದ್ಯುತಿಯ ಸವತಿಯರೂ ರೋದಿಸುವಂತೆ ನಟಿಸಿದರು.
ವಿಷಯವು ಚಿತ್ರಕೇತುವಿನ ಕಿವಿಯನ್ನೂ ಮುಟ್ಟಿತು. ಮಗನನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅವನ ಹೃದಯದಲ್ಲಿ ಶೋಕವು ಸುಡುವ ಬೆಂಕಿಯಂತೆ ಉರಿಯತೊಡಗಿತು. ಶೋಕಾವೇಶದಲ್ಲಿ ಅವನು ಕುರುಡಾದಂತಾಗಿ, ಹೆಜ್ಜೆ ಹೆಜ್ಜೆಗೂ ಎಡವಿಬೀಳುತ್ತಾ ಮಗನ ಬಳಿಗೆ ಓಡಿಬಂದನು. ಸತ್ತು ಹೆಣವಾಗಿ ಮಲಗಿದ್ದ ತನ್ನ ಮುದ್ದು ಕಂದನನ್ನು ನೋಡುತ್ತಲೇ ಎದೆಯೊಡೆದಂತಾಗಿ ಮೂರ್ಛೆ ಬಿದ್ದನು!
ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಂಡ ರಾಜನು ಕೂದಲು, ಬಟ್ಟೆಗಳನ್ನು ಕೆದರಿಕೊಂಡು, ಭಾರವಾದ ಉಸಿರುಬಿಡುತ್ತಾ, ಕಣ್ಣುಗಳು ಕಣ್ಣೀರಿನಿಂದ ತುಂಬಿಹೋಗಿರಲು, ಮಾತನಾಡಲಾರದೇ ಮಂಕಾಗಿ ಕುಳಿತನು. ಅಷ್ಟರಲ್ಲಿ ಎಚ್ಚರಗೊಂಡ ರಾಣಿಯು, ತನ್ನ ಗಂಡನು ಅಷ್ಟು ಶೋಕಾವಿಷ್ಟನಾಗಿದ್ದುದನ್ನು ನೋಡಿ, ಮಗುವಿನ ಮುಖವನ್ನು ಮತ್ತೆ ಮತ್ತೆ ನೋಡುತ್ತಾ ಪರಿಪರಿಯಾಗಿ ರೋದಿಸಿದಳು! ಅವಳ ಮುಡಿಯನ್ನಲಂಕರಿಸಿದ್ದ ಪುಷ್ಪರಾಶಿಯು ಚೆಲ್ಲಾಪಿಲ್ಲಿಯಾಗಿ ಬಿತ್ತು! ಸುರಿಯುತ್ತಿದ್ದ ಅವಳ ಕಣ್ಣೀರು, ಕಣ್ಣುಗಳನ್ನಲಂಕರಿಸಿದ್ದ ಕಾಡಿಗೆಯನ್ನಳಿಸಿ, ಸ್ತನತಟಗಳ ಮೇಲಿನ ಕುಂಕುಮವನ್ನು ತೊಳೆದುಕೊಂಡು ಕೋಡಿಯಾಗಿ ಹರಿಯಿತು! ರಾಜ,ರಾಣಿಯರ ಈ ಸಂಕಟಮಯ ಪರಿಸ್ಥಿತಿಯನ್ನು ನೋಡಿ ಮಂತ್ರಿಗಳು ಬ್ರಾಹ್ಮಣ ಸಚಿವರೂ ಅತೀವ ದುಃಖಿತರಾದರು.
“ಅಯ್ಯೋ ವಿಧಿಯೇ ! ಇದೆಂಥಾ ಮಕ್ಕಳಾಟ ನಿನ್ನದು…..!” ರಾಣಿಯು ಉದ್ವಿಗ್ನಗೊಂಡ ಕುರರೀಪಕ್ಷಿಯಂತೆ ವಿಲಪಿಸಿದಳು, “ತಂದೆಯು ಬದುಕಿರುತ್ತಾ ಮಗನ ಪ್ರಾಣವನ್ನು ತೆಗೆದುಕೊಂಡೆಯಲ್ಲಾ…..?! ಇದು ನಿನ್ನದೇ ಸೃಷ್ಟಿ ನಿಯಮಗಳಿಗೆ ವಿರುದ್ಧವಲ್ಲವೇ? ಹೀಗಾದರೆ ನೀನು ಎಲ್ಲ ಜೀವಿಗಳಿಗೂ ಶತ್ರುವೆಂದಾಗುತ್ತದೆ! ಹೇ ದೇವ! ಹೀಗೆ ಎಲ್ಲರೂ ಕ್ರಮಬದ್ಧವಾಗಿ ಹುಟ್ಟು ಸಾವುಗಳನ್ನನುಭವಿಸುವುದಿಲ್ಲ, ಅದು ಅವರವರ ಕರ್ಮಫಲದಿಂದ ಎನ್ನುವೆಯಾ? ಹಾಗಾದರೆ, ಈ ಸೃಷ್ಟಿಯನ್ನು ಮುಂದುವರಿಸಲೆಂದು ನೀನೇ ಉಂಟುಮಾಡುವ ಈ ಪ್ರೀತಿ, ಮಮತೆಗಳೆಂಬ ಬಂಧನವನ್ನು ಹೀಗೆ ಸಾವಿನ ಮೂಲಕ ನೀನೇ ಏಕೆ ಕತ್ತರಿಸುವೆ? ಯಾರೂ ತಮ್ಮ ಮಕ್ಕಳನ್ನು ಪ್ರೀತಿಸುವ ಆವಶ್ಯಕತೆಯೇ ಇಲ್ಲ ಅಲ್ಲವೇ?”
ಈಗ ರಾಣಿಯು ಮಗುವಿನ ಕಳೇಬರದತ್ತ ತಿರುಗಿ ಗೋಳಾಡಿದಳು, “ಪ್ರೀತಿಯ ಪುತ್ರನೇ! ದುಃಖಿತಳೂ ಅನಾಥೆಯೂ ಆಗಿರುವ ನನ್ನನ್ನು ಬಿಟ್ಟು ಹೋಗಬೇಡಪ್ಪಾ….! ಪುತ್ರನಿಲ್ಲದೇ ನಾವು ಅತ್ಯಂತ ಕತ್ತಲಾದ ನರಕಕ್ಕೆ ಹೋಗಬೇಕಾಗುತ್ತದೆ! ಇಂಥ ನರಕದಿಂದ ನಮ್ಮನ್ನು ಬಿಡಿಸುವವನೆಂದರೆ ನೀನೊಬ್ಬನೇನಪ್ಪಾ…..! ನಿನ್ನ ತಂದೆ ಹೇಗೆ ಅಳುತ್ತಿದ್ದಾರೆ ನೋಡು ! ಬೇಗನೆ ಎದ್ದು ಅವರನ್ನು ಸಮಾಧಾನ ಮಾಡಬಾರದೇ? ನೋಡಪ್ಪಾ….! ನೋಡು, ನೀನೀಗಾಗಲೇ ತುಂಬಾ ಹೊತ್ತು ಮಲಗಿಬಿಟ್ಟಿರುವೆ! ಇನ್ನು ಈ ನಿದ್ರೆ ಸಾಕು! ಏಳು ಮಗು ! ಏಳೋ….. ! ನಿನ್ನ ಗೆಳೆಯರೆಲ್ಲಾ ಆಡಲು ಬಂದಿದ್ದಾರೆ ನೋಡೋ….! ನಿನಗೆ ಹಸಿವೂ ಆಗಿರಬೇಕು! ಬೇಗ ಎದ್ದು ಹಾಲು ಕುಡಿಯೋ….! ಅಯ್ಯೋ…. ! ನಮ್ಮ ದುಃಖ ಕೊನೆಗಾಣಿಸೋ…..!” ರಾಣಿಯು ಮಗುವಿನ ಮೈಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು, “ಅಯ್ಯೋ! ನಾನೆಂಥ ನಿರ್ಭಾಗ್ಯೆ! ಇನ್ನು ನಿನ್ನ ಮುದ್ದಾದ ನಗುವನ್ನು ನೋಡಲಾರೆ….! ನಿನ್ನ ಮುದ್ದಾದ ಮಾತುಗಳನ್ನು ಕೇಳಲಾರೆ….! ನಿನ್ನ….. ನಿನ್ನ ಕಂಗಳನ್ನು ಶಾಶ್ವತವಾಗಿ ಮುಚ್ಚಿಬಿಟ್ಟಿರುವೆ….! ಅಯ್ಯೋ, ಮತ್ತೆ ಬಾರದ ಪರಲೋಕಕ್ಕೆ ಹೋಗಿಬಿಟ್ಟೆಯಾ ಕಂದಾ…..?! ಕಂದಾ ….! ನನ್ನ ಕಂದಾ…..!”
ರಾಣಿಯು ಹೀಗೆ ವಿಲಪಿಸುತ್ತಿದ್ದುದನ್ನು ನೋಡಿ ಚಿತ್ರಕೇತುವಿಗೆ ದುಃಖವು ಉಮ್ಮಳಿಸಿ ಬಂದು ಮುಕ್ತಕಂಠದಿಂದ ರೋದಿಸಿದನು! ರಾಜರಾಣಿಯರ ಕರುಣಾಪೂರಿತ ಸ್ಥಿತಿಯನ್ನು ನೋಡಿ ಮಂತ್ರಿಗಳಿಗೂ, ಇತರ ಆಸ್ಥಾನಿಕರಿಗೂ, ಬ್ರಾಹ್ಮಣ ಸಚಿವರಿಗೂ, ದಾಸದಾಸಿಯರಿಗೂ ಕರುಳು ಕಿತ್ತು ಬಂದಂತಾಗಿ ಎಲ್ಲರೂ ಬಹು ದುಃಖದಿಂದ ಅತ್ತರು! ರಾಜ್ಯಕ್ಕೆ ರಾಜ್ಯವೇ ಶೋಕಪೂರಿತವಾಯಿತು!
* * *
ರಾಜಾ ಚಿತ್ರಕೇತುವಿನ ಮನಸ್ಸು ಶೋಕದಿಂದ ಕಶ್ಮಲಪೂರಿತವಾಗಿದೆಯೆಂದು ಮಹಾಜ್ಞಾನಿಗಳಾದ ಅಂಗಿರಸರಿಗೆ ತಿಳಿಯಿತು. ಆಗ ಅವರು ಅವನನ್ನು ಸಮಾಧಾನಪಡಿಸಲೋಸುಗ, ದೇವರ್ಷಿ ನಾರದರೊಂದಿಗೆ ಆಗಮಿಸಿದರು. ತ್ರಿಕಾಲಜ್ಞಾನಿಗಳಾದ ಅವರಿಗೆ ಇದು ತಿಳಿದೇ ಹಿಂದೆ ಗೂಢಾರ್ಥದ ಎಚ್ಚರಿಕೆ ಕೊಟ್ಟಿದ್ದರು.
“ಮಹಾರಾಜ!” ಅಂಗಿರಸರು ಮೃದು ಮಧುರವಾಗಿ ಹಿತವಚನಗಳನ್ನಾಡಿದರು, “ಏಕೆ ಇಷ್ಟೊಂದು ಶೋಕಿಸುತ್ತಿರುವೆ? ಸ್ವಲ್ಪ ವಿಚಾರ ಮಾಡು. ನೀನು ಯಾರಿಗಾಗಿ ಇಷ್ಟು ಶೋಕಿಸುತ್ತಿರುವೆಯೋ, ನಿಜವಾಗಿ ಅವನು ನಿನಗೆ ಯಾವ ರೀತಿ ಸಂಬಂಧಿಸಿದ್ದಾನೆ?! ನೀನಾದರೂ ಈ ಮೊದಲು, ಈಗ ಅಥವಾ ಮುಂದೆ, ಇವನಿಗೆ ಏನಾಗಬೇಕು? ರಾಜ, ಸಮುದ್ರದ ಅಲೆಗಳ ಪ್ರಭಾವದಿಂದ ಮರಳಿನ ಕಣಗಳು ಕೆಲವೊಮ್ಮೆ ಒಟ್ಟಿಗೆ ಸೇರುತ್ತವೆ, ಮತ್ತು ಕೆಲವೊಮ್ಮೆ ಬೇರೆಯಾಗುತ್ತವೆ. ಅಂತೆಯೇ, ಕಾಲದ ಪ್ರಭಾವದಿಂದ ದೇಹಧಾರಿಗಳಾದ ಜೀವಿಗಳು ಕೆಲವೊಮ್ಮೆ ಒಟ್ಟಿಗೆ ಸೇರುತ್ತಾರೆ, ಮತ್ತು ಕೆಲವೊಮ್ಮೆ ಬೇರೆಯಾಗುತ್ತಾರೆ! ಬೀಜಗಳನ್ನು ನೆಲದಲ್ಲಿ ಬಿತ್ತಿದಾಗ, ಅವುಗಳಿಂದ ಗಿಡಗಳು ಹುಟ್ಟಬಹುದು, ಇಲ್ಲವೇ ಹುಟ್ಟದಿರಬಹುದು; ಅಂತೆಯೇ ಭಗವಂತನ ಮಾಯೆಯಿಂದ, ಜೀವಿಗಳಲ್ಲಿ ಸಂತಾನವಾಗಬಹುದು, ಅಥವಾ ಆಗದೆಯೂ ಇರಬಹುದು! ಹೇ ರಾಜ, ನಾವಾಗಲೀ, ನೀನಾಗಲೀ ಈ ಸಮಯದಲ್ಲಿರುವ ಸಕಲ ಚರಾಚರಗಳಾಗಲೀ ಜನನದ ಮುಂಚೆ ಇರಲಿಲ್ಲ ಮತ್ತು ಮರಣದ ಬಳಿಕ ಇರುವುದಿಲ್ಲ. ಈಗ ಇದ್ದರೂ ನಶ್ವರವಾದುದರಿಂದ, ನಮ್ಮೆಲ್ಲರ ಈ ಸ್ಥಿತಿಗಳನ್ನೇ ಸತ್ಯವೆಂದು ಹೇಳಲಾಗದು. ಆದ್ದರಿಂದ ಈಗಿನ ಸ್ಥಿತಿಗಳನ್ನೂ ವಾಸ್ತವವೆಂದು ಹೇಳಲಾಗದು! ಎಲೈ ರಾಜ, ಒಬ್ಬ ಬಾಲಕನು ನಿಜವಾಗಿ ಆಸಕ್ತನಾಗಿಲ್ಲದಿದ್ದರೂ, ಸುಮ್ಮನೆ ಆಟಕ್ಕಾಗಿ ಮರಳಿನಲ್ಲಿ ಗೂಡು ಕಟ್ಟಿ ತಾನೇ ಅದನ್ನು ಒಡೆಯುತ್ತಾನೆ; ಅಂತೆಯೆ, ಭಗವಂತನು ನಿಜವಾಗಿ ಅನಾಸಕ್ತನಾಗಿದ್ದರೂ, ಅಸ್ವತಂತ್ರರಾದ ಜೀವಿಗಳ ಮೂಲಕವೇ ಇತರ ಜೀವಿಗಳನ್ನು ಸೃಷ್ಟಿಸುತ್ತಾನೆ, ಪಾಲಿಸುತ್ತಾನೆ ಮತ್ತು ಸಂಹರಿಸುತ್ತಾನೆ! ಮಹಾರಾಜ, ಒಂದು ಬೀಜದಿಂದ ಇನ್ನೊಂದು ಬೀಜವು ಹುಟ್ಟುವಂತೆ, ಒಂದು ದೇಹದಿಂದ (ತಂದೆಯ ದೇಹದಿಂದ) ಇನ್ನೊಂದು ದೇಹದ ಮೂಲಕ (ತಾಯಿಯ ದೇಹದ ಮೂಲಕ), ಮತ್ತೊಂದು ದೇಹ (ಮಗುವಿನ ದೇಹ) ಹುಟ್ಟುತ್ತದೆ. ದೇಹವು ಅಳಿದರೂ, ದೇಹದ ಮೂಲದ್ರವ್ಯಗಳಾದ ಪಂಚಭೂತಗಳು ಶಾಶ್ವತವಾಗಿಯೇ ಇರುವಂತೆ, ದೇಹದಲ್ಲಿರುವ ಜೀವವೂ ಶಾಶ್ವತವಾಗಿರುತ್ತದೆ! ದೇಹವು ಸತ್ತರೂ ಈ ಜೀವವು ಸಾಯುವುದಿಲ್ಲ! ಪ್ರತಿಯೊಬ್ಬರನ್ನೂ ಇಂಥ ವ್ಯಕ್ತಿ, ಇಂಥ ಜಾತಿ ಮೊದಲಾಗಿ ವರ್ಗೀಕರಿಸುವುದು ಹೇಗೆ ಒಂದು ಕಲ್ಪನೆಯೋ, ಹಾಗೆಯೇ ವಿವಿಧ ದೇಹಗಳಲ್ಲಿ ಕಾಣಿಸಿಕೊಳ್ಳುವ ಆತ್ಮನನ್ನೂ ಆಯಾ ದೇಹಗಳೇ ಎಂದು ಕಲ್ಪಿಸಿಕೊಳ್ಳುವುದು ಅಜ್ಞಾನದಿಂದ !ಇದು ಹಿಂದಿನಿಂದಲೂ ನಡೆಯುತ್ತಿದೆ. ಆದ್ದರಿಂದ ಸತ್ಯವನ್ನರಿತು ಶೋಕವನ್ನು ತ್ಯಜಿಸು!”
ಮನಶ್ಶಾಂತಿ ನೀಡುವಂತಿದ್ದ ಯುಕ್ತಿ ಯುಕ್ತವಾದ ಈ ಮಾತುಗಳನ್ನು ಕೇಳಿ ಚಿತ್ರಕೇತುವಿಗೆ ಸ್ವಲ್ಪ ಸಮಾಧಾನವಾಗಿ ತಲೆಯೆತ್ತಿ ನೋಡಿದ. ಶೋಕಪೂರಿತವಾಗಿ ಮನಸ್ಸು ಮಂಕಾಗಿದ್ದ ಅವನು ಆ ಮುನಿಗಳನ್ನು ಗುರುತಿಸಲೇ ಇಲ್ಲ! ಕಣ್ಣೀರೊರೆಸಿಕೊಳ್ಳುತ್ತಾ ಕೇಳಿದ, “ಜ್ಞಾನಸಂಪನ್ನರಾದ ನೀವಿಬ್ಬರೂ ಯಾರು? ಅವಧೂತರಂತೆ ಸಂಚರಿಸುತ್ತಾ ನಿಮ್ಮ ನಿಜಸ್ವರೂಪವನ್ನು ಮರೆಮಾಚಿರುವ ಮಹಾತ್ಮರಾದ ನೀವು ಯಾರು? ಭಗವಂತನಿಗೆ ಪ್ರಿಯರಾದ ಬ್ರಹ್ಮಜ್ಞಾನಿಗಳು ಕೆಲವೊಮ್ಮೆ ಹುಚ್ಚರಂತೆ ಕಾಣುತ್ತಾ ಈ ಭೂಮಿಯಲ್ಲಿ ನಮ್ಮಂತಹ ಗ್ರಾಮ್ಯ ಬುದ್ಧಿಯ ಜನರಿಗೆ ಜ್ಞಾನೋಪದೇಶ ಮಾಡಲು ತಮಗಿಷ್ಟಬಂದಂತೆ ಸಂಚರಿಸುತ್ತಿರುತ್ತಾರೆಂದು ನಾನು ಕೇಳಿದ್ದೇನೆ. ಸನತ್ಕುಮಾರ, ನಾರದ, ಅಂಗಿರಸರು, ಅಸಿತರು, ದೇವಲರು, ವ್ಯಾಸರು, ಮಾರ್ಕಂಡೇಯರು, ಗೌತಮರು, ವಸಿಷ್ಠರು, ಪರಶುರಾಮರು, ಕಪಿಲರು, ಶುಕರು, ದುರ್ವಾಸರು, ಯಾಜ್ಞವಲ್ಕ್ಯರು, ಜಾತಕರ್ಣರು, ಆರುಣಿಗಳು, ರೋಮಶರು, ಧೌಮ್ಯರು, ಚವನರು, ದತ್ತಾತ್ರೇಯರು, ಆಸುರಿಗಳು, ಪತಂಜಲಿಗಳು, ಹಿರಣ್ಯನಾಭರು, ಪಂಚಶಿಖರು, ಕೌಶಲ್ಯರು, ಶ್ರುತಿದೇವರು, ಋಭುಗಳು, ಋತುಧ್ವಜರು, ಹೀಗೆ ಇಂಥ ಅನೇಕ ಋಷಿಮುನಿಗಳಿದ್ದಾರೆ! ಇವರಲ್ಲೇ ನೀವು ಯಾರೋ ಆಗಿರಬೇಕು! ಓ ಮಹಾತ್ಮರೇ, ನಾನೊಬ್ಬ ಸಾಧಾರಣ ಗ್ರಾಮ್ಯಪಶು! ಮೂಢ! ತಮಸ್ಸೆಂಬ ಅಂಧಕಾರದಲ್ಲಿ ಮುಳುಗಿಹೋಗಿದ್ದೇನೆ! ಆದ್ದರಿಂದ ನೀವು ನನ್ನಲ್ಲಿ ಜ್ಞಾನದೀಪವನ್ನು ಹೊತ್ತಿಸಿ ಉಪಕರಿಸಿ!”
“ಮಹಾರಾಜ!” ಅಂಗಿರಸರು ಹೇಳಿದರು, “ಶೋಕದಿಂದ ನಿನ್ನ ಮನಸ್ಸು ಮಂಕಾಗಿದೆ! ನನ್ನ ಗುರುತು ಸಿಗಲಿಲ್ಲವೇ?! ನಾನು ಅಂಗಿರಸ! ಪುತ್ರಕಾಮದಿಂದ ಕೂಡಿದ್ದ ನಿನ್ನ ಬಳಿ ಅಂದು ನಾನು ಬಂದು ಯಜ್ಞ ಮಾಡಿಸಲಿಲ್ಲವೇ? ಇನ್ನು ಇವರು, ಬ್ರಹ್ಮಮಾನಸಪುತ್ರರಾದ ನಾರದರು! ಏಳು ರಾಜ, ಶೋಕವನ್ನು ಬಿಡು! ನಿನ್ನ ಸಂತಾನರಾಹಿತ್ಯ ವಿಧಿಸಂಕಲ್ಪವೇ ಆಗಿದೆ. ಅದನ್ನು ಮೀರಲಾಗದು! ಆದ್ದರಿಂದಲೇ ಅಂದು ನಾನು ಹರ್ಷ, ಶೋಕಗಳೆರಡನ್ನೂ ತರುವ ಪುತ್ರನು ಜನಿಸುತ್ತಾನೆಂದು ಹೇಳಿದ್ದೆ. ಎಲೈ ರಾಜ, ನೀನು ಭಗವಂತನ ಭಕ್ತನಾಗಿರುವೆ! ನಿನ್ನಂಥವನು ಈ ರೀತಿ ಶೋಕಿಸುತ್ತಾ ಅಜ್ಞಾನಾಂಧಕಾರದಲ್ಲಿ ಮುಳುಗಬಾರದು! ನಿನ್ನನ್ನು ಅನುಗ್ರಹಿಸಲೆಂದೇ ನಾವಿಬ್ಬರೂ ಬಂದಿದ್ದೇವೆ. ಅಂದೇ ನಾನು ನಿನಗೆ ಜ್ಞಾನೋಪದೇಶ ಮಾಡಬೇಕೆಂದಿದ್ದೆ! ಆದರೆ ಪುತ್ರಕಾಮನೆಯಿಂದ ನಿನ್ನ ಮನಸ್ಸು ಚಿಂತೆಗೊಳಗಾಗಿದ್ದುದರಿಂದ ನಾನು ನಿನಗೆ ಪುತ್ರನನ್ನೇ ನೀಡಿದೆ. ಮಹಾರಾಜ, ಈಗ ನೀನು ಪುತ್ರವಂತರ ಶೋಕ ಏನೆಂದು ಅರಿಯುತ್ತಿರುವೆ! ಇದೇ ರೀತಿಯೇ ಪತ್ನಿ, ಮನೆ, ಐಶ್ವರ್ಯ, ವಿವಿಧ ವಿಷಯ ಸುಖಗಳು, ರಾಜ್ಯ, ಬಲ, ಕೋಶಗಳು, ಸೇವಕರು, ಅಮಾತ್ಯರು, ಸ್ನೇಹಿತರು, ಈ ಎಲ್ಲವೂ ಅಶಾಶ್ವತವಾಗಿದ್ದು ಒಂದೊಂದು ರೀತಿಯಲ್ಲಿ ಶೋಕವುಂಟುಮಾಡುತ್ತವೆ. ಇವೆಲ್ಲಾ ಆಕಾಶದಲ್ಲಿ ಮೋಡಗಳ ಸಮೂಹದಿಂದ ಉಂಟಾಗುವ ಗಂಧರ್ವ ನಗರದಂತೆ, ಸ್ವಪ್ನಗಳಂತೆ, ಮನಸ್ಸಿನ ಕಲ್ಪನೆಗಳಂತೆ; ಇರುವಂತೆ ಕಂಡರೂ ಕಾಲಾಂತರದಲ್ಲಿ ಇಲ್ಲವಾಗುತ್ತವೆ! ಒಬ್ಬನು ಕನಸಿನಲ್ಲಿ ಹುಲಿ, ಹಾವು, ಇವುಗಳೆಲ್ಲವನ್ನೂ ಕಂಡರೂ, ಅವು ವಾಸ್ತವವಾಗಿರದೇ ಬರಿಯ ಮನಸ್ಸಿನ ಕಲ್ಪನೆಗಳಾಗಿರುತ್ತವೆ. ಕನಸು ಮುರಿದ ಬಳಿಕ ಅವು ಕಾಣುವುದಿಲ್ಲ. ಅಂತೆಯೇ, ಈ ಭೌತಿಕ ಪ್ರಪಂಚದಲ್ಲಿ ಕಾಣುವ ವಿವಿಧ ವಿಷಯಗಳು ಮನಸ್ಸಿನಿಂದ ಉಂಟಾದ ಪೂರ್ವ ಕರ್ಮಗಳಿಗನುಗುಣವಾಗಿ ಕಾಣುತ್ತವೆ ಮತ್ತು ಮರೆಯಾಗುತ್ತವೆ! ದೇಹಸ್ಥವಾಗಿರುವ ಆತ್ಮನು ವಾಸ್ತವವಾಗಿ ಇದಾವುದಕ್ಕೂ ಸಂಬಂಧಿಸಿರದೇ ಶುದ್ಧನಾಗಿರುತ್ತಾನೆ. ಆದರೆ ದೇಹದ ಇಂದ್ರಿಯಗಳ ಮತ್ತು ಮನಸ್ಸಿನ ಸಂಗದಿಂದ ವಿವಿಧ ಸಂತಾಪಗಳನ್ನು ಅನುಭವಿಸುತ್ತಾನೆ. ಆದ್ದರಿಂದ ರಾಜಾ, ಸ್ವಸ್ಥಮನಸ್ಕನಾಗಿ ವಿಚಾರಮಾಡು; ಆತ್ಮದ ನಿಜಸ್ಥಿತಿಯನ್ನು ಅರಿತುಕೋ! ಆಗ ಈ ದ್ವಂದ್ವಗಳು ಮತ್ತು ವಿಷಯಗಳ ಸಂಗ ದೂರವಾಗಿ ಶಾಂತಿಯು ಲಭಿಸುತ್ತದೆ.”
ರಾಜನಿಗೆ ಈಗ ಆ ಮಹಾಮುನಿಗಳು ಯಾರೆಂದು ಅರಿವಾಗಿ ಅವರ ಪಾದಗಳಿಗೆ ಪ್ರಣಾಮ ಮಾಡಿದನು; ಅಳುವುದನ್ನು ನಿಲ್ಲಿಸಿದನು. ಆದರೂ ಮಗನ ಮೃತದೇಹವನ್ನು ಪುನಃ ನೋಡಿ ವಿಷಣ್ಣನಾಗಿ ತಲೆಬಾಗಿಸಿ ಕುಳಿತನು.
(ಮುಂದುವರಿಯುವುದು)